September 20, 2024

ಭಂಡಾರಿ ಸಮಾಜ ಸಂಘ ಬೆಂಗಳೂರು ಇದರ ನವೆಂಬರ್ 2020 ತಿಂಗಳ ಮಾಸಿಕ ಸಭೆಯು ದಿನಾಂಕ: 15/11/2020 ರ ಭಾನುವಾರದಂದು ಆಯ್ದ ಆಹ್ವಾನಿತ ಹಿರಿಯರು, ಪದಾಧಿಕಾರಿಗಳು ಮತ್ತು ಸದಸ್ಯರನ್ನು ಆನ್ ಲೈನ್ ಮೂಲಕ ಸಂಪರ್ಕಿಸುವುದರ ಮೂಲಕ ಮಾಡಲಾಯಿತು.

ಸಂಘದ ಕಾರ್ಯದರ್ಶಿ ಶ್ರೀಯುತ ಸುಧಾಕರ ಆರ್ ಭಂಡಾರಿ ಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು.

ಚರ್ಚಿಸಿದ ವಿಷಯಗಳು:

1. ವಿದ್ಯಾರ್ಥಿ ವೇತನದ ಬಗ್ಗೆ : ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಸದಸ್ಯರ ಮಕ್ಕಳಿಗಾಗಿ ಪ್ರತಿ ವರ್ಷದ ಪದ್ದತಿಯಂತೆ ಕೊಡುವ ವಿದ್ಯಾರ್ಥಿ ವೇತನಕ್ಕೆ 2020 ನೇ ಸಾಲಿಗೆ ಒಟ್ಟು 34 ಅರ್ಜಿಗಳು ಬಂದಿವೆ ಎಂದು ಕಾರ್ಯದರ್ಶಿ ಶ್ರೀ ಸುಧಾಕರ ಆರ್ ಭಂಡಾರಿ ಯವರು ತಿಳಿಸಿದರು. ಅದರಲ್ಲಿ ಘಟಕವಾರು ಹಾಗೂ ತರಗತಿವಾರು ಬಂದಂತಹ ಅರ್ಜಿಗಳ ವಿವರವನ್ನು ಸಭೆಗ ನೀಡಲಾಯಿತು.

ಬಾಳೆಹೊನ್ನೂರು ಘಟಕದಿಂದ ಬಂದಂತಹ ಒಂದು ಅರ್ಜಿ ಕಳೆದ ಸಾಲಿನಲ್ಲಿ ಸೌಲಭ್ಯ ಪಡೆದಿದ್ದಾಗಿದ್ದು ಈ ಸಾಲಿನಲ್ಲಿ ಬಂದಂತಹ ಅರ್ಜಿಗೆ ಸ್ಥಳೀಯ ಘಟಕದ ಅಧ್ಯಕ್ಷರ ಶಿಫಾರಸು ಪತ್ರ ಲಗತ್ತಿಸದ ಕಾರಣ ಸಭೆಯ ತೀರ್ಮಾನವನ್ನು ಕೇಳಲಾಯಿತು. ಅದಕ್ಕೆ ಹಾಜರಿದ್ದ ವಲಯದ ಉಪಾಧ್ಯಕ್ಷರಾದ ಶ್ರೀಯುತ ಮೋಹನ ಭಂಡಾರಿ ಬಾಳೆಹೊನ್ನೂರು ರವರು ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನದ ಅವಶ್ಯಕತೆ ಇದೆ ಅದಕ್ಕೆ ಸಂಬಂಧಿಸಿದ ಶಿಪಾರಸು ಪತ್ರದ ಜವಾಬ್ಧಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಸಭೆಯ ಒಪ್ಪಿಗೆ ಪಡೆದರು.

ಶೃಂಗೇರಿ ಘಟಕದಿಂದ ಬಂದಂತಹ ಅರ್ಜಿಗೆ ಸ್ಥಳೀಯ ಘಟಕದ ಶಿಪಾರಸು ಪತ್ರ ಮತ್ತು ಇತರೆ ಮಾಹಿತಿಯನ್ನು ಶ್ರೀ ಪ್ರಕಾಶ್ ಕುತ್ತೆತ್ತೂರು ರವರು ಕಲೆಹಾಕುವ ಕಾರ್ಯ ಮಾಡುವುದಾಗಿ ಒಪ್ಪಿಕೊಂಡರು.

ಅದೇ ರೀತಿ ಇನ್ನೊಂದು ಘಟಕದಿಂದ ಬಂದಂತಹ ಸುಮಾರು 6 ಅರ್ಜಿಗಳು ಸಹೋದರ ಸಮಾಜದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಮೇಲು ಸಹಿ ಮತ್ತು ಮೊಹರಿನೊಂದಿಗೆ ಬಂದಿದೆ. ಅದರ ಬಗ್ಗೆ ಸಹಿ ಮಾಡಿದ ವ್ಯಕ್ತಿಗಳಿಗೆ ಹಾಗೂ ಆಕಾಂಕ್ಷಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿ ಸ್ಥಳೀಯ ಘಟಕದ ಹಾಲಿ ಅಧ್ಯಕ್ಷರ / ಕಾರ್ಯದರ್ಶಿಗಳ ಶಿಪಾರಸು ಪತ್ರದ ಮಹತ್ವ ತಿಳಿಸಿದರೂ ಸಹ ಇದುವರೆಗೂ ಅದು ಸಂಘದ ಕಾರ್ಯಾಲಯಕ್ಕೆ ತಲುಪದ ಕಾರಣದ ಬಗ್ಗೆ ಚರ್ಚಿಸಿದ ಸಭೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಭೆಯು ಇಂತಹ ಕಾರ್ಯಗಳನ್ನು ಪ್ರೋತ್ಸಾಹಿಸುವುದು ಬೇಡ ಹಾಗಾಗಿ ಸಹೋದರ ಸಮಾಜದ ಮೊಹರಿನೊಂದಿಗೆ ಬಂದಂತಹ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸುವಂತೆ ಸೂಚಿಸಿತು.

ಕಳೆದ ಸಾಲಿನಲ್ಲಿ ಕೊಡಮಾಡಿದಂತೆ ಪಿಯುಸಿ ಓದುತ್ತಿರುವ ಮಕ್ಕಳಿಗೆ ರೂ 2000/- (ಎರಡು ಸಾವಿರ ಮಾತ್ರ), ಪದವಿ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ರೂ 2500/- (ಎರಡು ಸಾವಿರದ ಐದು ನೂರು ಮಾತ್ರ) ಹಾಗೂ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ರೂ 3000/- (ಮೂರು ಸಾವಿರ ಮಾತ್ರ) ನೀಡುವುದಾಗಿ  ಸಭೆ ತೀರ್ಮಾನಿಸಿತು.

2. ಆಯವ್ಯಯ ವರದಿ: 25 ಡಿಸೆಂಬರ್ 2019 ರಂದು ಶಿರಾಳಕೊಪ್ಪ – ಸೊರಬ ಘಟಕದ ಆತಿಥ್ಯದಲ್ಲಿ ಶಿರಾಳಕೊಪ್ಪದಲ್ಲಿ ನಡೆದ, ಭಂಡಾರಿ ಸಮಾಜ ಸಂಘ ವಾರ್ಷಿಕ ಮಹಾ ಸಭೆ ಮತ್ತು ಸ್ನೇಹ ಕೂಟದಲ್ಲಿ ಸಮಾರಂಭದಿಂದ ಒಟ್ಟು 1,58.691 (ಒಂದು ಲಕ್ಷದ ಅರವತ್ತೆಂಟು ಸಾವಿರದ ಆರು ನೂರಾ ತೊಂಬತ್ತೊಂದು ಮಾತ್ರ) ರೂಪಾಯಿಗಳ ಉಳಿತಾಯವಾಗಿದ್ದು ಸಭೆಯ ಒಪ್ಪಿಗೆ ಮೇರೆಗೆ “ವಿದ್ಯಾನಿಧಿ” ಗೆ ನಿರಖು ಠೇವಣಿ ಇಡಲಾಗುವುದು ಎಂದು ತಿಳಿಸಿದರು.

ಮೇಲ್ಕಾಣಿಸಿದ ಸಭೆಗೆ ದೇಣಿಗೆ ನೀಡಿದ ಎಲ್ಲಾ ಘಟಕಗಳ ಸದಸ್ಯರಿಗೆ ಘಟಕವಾರು ವೈಯಕ್ತಿಕ ರಶೀಧಿಯನ್ನು ಕಳುಹಿಸಿ ಕೊಡಲಾಗಿದೆ, ಬೆಂಗಳೂರಿನ ಬಂಧುಗಳಿಗೆ ಮುಂದಿನ ಸಭೆಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.

3. ವಾರ್ಷಿಕ ಮಹಾಸಭೆ 2020: ಹಾಲಿ ಕಮಿಟಿ ರಚನೆಯಾಗಿ ಡಿಸೆಂಬರ್ 2020 ಕ್ಕೆ ಎರಡು ವರ್ಷವಾಗುತ್ತದೆ ವಾಡಿಕೆಯಂತೆ ಕಮಿಟಿಯನ್ನು ಬದಲಾಯಿಸಬೇಕು ಹಾಗಾಗಿ ವಾರ್ಷಿಕ ಮಹಾ ಸಭೆ ಕರೆಯುವ ಪ್ರಸ್ಥಾವನೆಯನ್ನು ಶ್ರೀ ಲಕ್ಷ್ಮಣ ಕರಾವಳಿಯವರು ಮಂಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶ್ರೀ ಸುಧಾಕರ ಬನ್ನಂಜೆ ಯವರು ಸದ್ಯದ ಪರಿಸ್ಥಿತಿಯಲ್ಲಿ ಸಂಘದ ಯಾವುದೇ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ ಹಾಗಾಗಿ ಹಾಲಿ ಇರುವ ಕಮಿಟಿಯನ್ನೇ ಮುಂದುವರಿಸಿ ಎಂದು ತಿಳಿಸಿದರು. ಆದರೆ ಹಿರಿಯರಾದ ಶ್ರೀಧರಣ್ಣ ದಾಸರಹಳ್ಳಿ ಯವರು ಹಾಲಿ ಅಧ್ಯಕ್ಷರು ಸಂಘಕ್ಕೆ ರಾಜಿನಾಮೆ ನೀಡಿದ್ದು ಇರುವ ಉಪಾದ್ಯಕ್ಷರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ ಹಾಲಿ ಕಮಿಟಿಯನ್ನು ಮುಂದುವರಿಸುವಂತೆ ಸಲಹೆ ನೀಡಿದರು. ಆದರೆ ಕೋಶಾಧಿಕಾರಿ ಶ್ರೀ ಕುಶಲ್  ಭಂಡಾರಿಯವರು ತಮ್ಮ ವಯಕ್ತಿಕ ಕಾರಣವನ್ನು ನೀಡಿ ಕಮಿಟಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕೊನೆಗೆ ಸಭೆಯು ಡಿಸೆಂಬರ್ 25 ಕ್ಕೆ ಒಂದು ಸಭೆಯನ್ನು ಕರೆದು ತೀರ್ಮಾನಿಸೋಣ ಅದಕ್ಕೂ ಮುಂಚೆ ಒಂದು ಪೂರ್ವಭಾವಿ ಸಭೆಯನ್ನು ಕರೆಯುವಂತೆ ಸೂಚಿಸಿತು.

4. ಪ್ರತಿಭಾ ಪುರಸ್ಕಾರ: ಪ್ರತಿ ವರ್ಷ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ಬಿ.ಕೆ ಭಂಡಾರಿಯವರು ತಮ್ಮ ತಂದೆ ತಾಯಿ ಸ್ಮರಣಾರ್ಥ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಲಯದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರತಿಭಾ ಪುರಸ್ಕಾರ ನೀಡುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಪ್ರತಿಭಾ ಪುರಸ್ಕಾರದ ವಿಷಯವಾಗಿ ಶ್ರೀಯುತರನ್ನು ಸಂಪರ್ಕಿಸಿಲ್ಲ ಅದರ ಬಗ್ಗೆ ಏನು ಮಾಡುವುದು ಎಂದು ಕಾರ್ಯದರ್ಶಿ ಶ್ರೀಯುತ ಸುಧಾಕರ ಭಂಡಾರಿಯವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಭೆಯು ಕೋಶಾಧಿಕಾರಿ ಕುಶಲ್ ಭಂಡಾರಿಯವರು ಶ್ರೀಯುತರನ್ನು ಸಂಪರ್ಕಿಸಿ ಚರ್ಚಿಸುವಂತೆ ತಿಳಿಸಿದರು. ಸದರಿ ಪುರಸ್ಕಾರವು ವಲಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಎಂದು ಇದ್ದು ಇಲ್ಲಿ ಯಾವುದೇ ವರಮಾನದ ಕಟ್ಟುಪಾಡು ಇರಲಿಲ್ಲ ಆದರೆ ಈ ಸಾಲಿನಿಂದ ವಿದ್ಯಾರ್ಥಿ ವೇತನಕ್ಕೆ ನಿಗದಿ ಪಡಿಸಿದಂತೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೇ ನೀಡುವಂತೆ ಕೋರಲು ಸಭೆಯು ಸೂಚಿಸಿತು.

5. ಶ್ರದ್ಧಾಂಜಲಿ: ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಪ್ರಾರಂಭಿಕ ದಿನಗಳಲ್ಲಿ ಸಂಘಕ್ಕೆ ಅಪಾರ ದೇಣಿಗೆ ನೀಡಿ, ಸಂಘದ ಸಂಘಟನೆಗೆ ಸಹಕರಿಸಿ ಪ್ರೋತ್ಸಾಹಿಸಿದ ಶ್ರೀಯುತ ನರಸಿಂಹ ಭಂಡಾರಿ ಕೊಪ್ಪ ಅವರನ್ನು ಸ್ಮರಿಸಿದ ಸಭೆ, ಅವರ ಸ್ಮರಣಾರ್ಥವಾಗಿ ಸಮಾಜದ ಮುಖವಾಣಿ ಕಚ್ಚೂರುವಾಣಿ ಯಲ್ಲಿ ಒಂದು ಪುಟದ ಬಣ್ಣದ ಜಾಹೀರಾತನ್ನು ಕೊಡಲು ತೀರ್ಮಾನಿಸಿ, ಕಾರ್ಯದರ್ಶಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿತು.

ವಲಯದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶ್ರೀಯುತ ಪ್ರಕಾಶ್ ಕುತ್ತೆತ್ತೂರು ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಖ್ತಾಯಗೊಳಿಸಲಾಯಿತು.

ವರದಿ: ಸುಧಾಕರ್ ಆರ್ ಭಂಡಾರಿ ಶಿರಾಳಕೊಪ್ಪ

Leave a Reply

Your email address will not be published. Required fields are marked *