September 20, 2024

ಚಂದ್ರ ಮತ್ತು ಜಾನಕಿ ದಂಪತಿಗಳಿಗೆ ಪ್ರವೀಣ್ ಎಂಬ ಮಗನಿದ್ದ. ಸುಂದರ ಹಾಗೂ ಬುದ್ದಿವಂತನಾಗಿದ್ದ ಈತ ಅದ್ಭುತ ಹಾಡುಗಾರನೂ ಆಗಿದ್ದ.ಆರ್ಥಿಕವಾಗಿ ಬಡವರಾಗಿದ್ದರೂ ನೆಮ್ಮದಿಯುತ ಬದುಕು ಬಾಳುತ್ತಿದ್ದರು.ಹೀಗಿರುವಾಗ ಪ್ರವೀಣ್ ಮತ್ತು ಆತನ ಕುಟುಂಬ ಒಂದು ಮದುವೆ ಸಮಾರಂಭಕ್ಕೆ ಹೋಗಿದ್ದರು.ಅಲ್ಲಿ ಪ್ರವೀಣ್ ಒಂದು ಹುಡುಗಿಗೆ ಮನಸೋತ.ಮರುದಿನದಿಂದಲೇ ಆಕೆಯ ಬಗ್ಗೆ ಹುಡುಕಾಟ ಆರಂಭಿಸಿದ.ಅ ಚೆಲುವೆಯ ಹೆಸರು ರಶ್ಮಿ.ಸುರೇಶ್ ಪಾಟೀಲ್ ಮತ್ತು ವಿಶಾಲಾಕ್ಷಿ ಯ ಒಬ್ಬಳೇ ಮಗಳು.ಶ್ರೀಮಂತ ಕುಟುಂಬದಲ್ಲಿ ಜನಿಸಿದ ಈಕೆ ಪ್ರವೀಣ್ ಓದುತ್ತಿರುವ ಕಾಲೇಜಿನಲ್ಲಿಯೇ ಓದುತ್ತಿದ್ದಳು.ಪ್ರವೀಣ್ ಅದೇಗೊ ಕಷ್ಟಪಟ್ಟು ತನ್ನ ಪ್ರೀತಿ ವಿಷಯವನ್ನು ರಶ್ಮಿಗೆ ತಿಳಿಸಿದ.ಆದರೆ ರಶ್ಮಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಪ್ರವೀಣ್ ಆಕೆಯ ಉತ್ತರಕ್ಕಾಗಿ ಕಾಯುತ್ತಿದ್ದ ಸಂಧರ್ಭದಲ್ಲಿಯೇ ಒಂದು ಘಟನೆ ನಡೆಯಿತು.ಪ್ರವೀಣನ ಸ್ನೇಹಿತೆ ಸ್ವಾತಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಆಕೆಯನ್ನು ಪ್ರವೀಣ್ ರಕ್ಷಿಸಿ ಕಾರಣ ಕೇಳಿದನು.ಸ್ವಾತಿ ಒಬ್ಬ ಹುಡುಗನನ್ನು ಪ್ರೀತಿಸಿ ಮೋಸ ಹೋಗಿದ್ದಳು.ಸ್ವಾತಿಗೆ ಬದುಕಿನ ಮಹತ್ತ್ವವನ್ನು ತಿಳಿಸಿದ.ಇದನ್ನೆಲ್ಲಾ ಗಮನಿಸುತ್ತಿದ್ದ ರಶ್ಮಿಗೆ ದಿನೇ ದಿನೇ ಪ್ರವೀಣ್ ಮೇಲೆ ಪ್ರೀತಿ ಹೆಚ್ಚಾಯಿತು.ಪ್ರವೀಣ್ ನ ಪ್ರೀತಿಗೆ ಒಪ್ಪಿಗೆ ಸೂಚಿಸಿದಳು.

ಪ್ರೀತಿಸಿದರೆ ಇವರಿಬ್ಬರ ಹಾಗೆ ಪ್ರೀತಿಸಬೇಕು ಎಂಬಾಂತೆ ಇವರ ಪ್ರೀತಿ ಇತ್ತು. ಇವರ ಪ್ರೇಮ ಕಹಾನಿಗೆ ಮೂರು ವರ್ಷ ತುಂಬುತ್ತಿದ್ದಂತೆ ರಶ್ಮಿ ಯ ತಂದೆಗೆ ಈ ವಿಷಯ ತಿಳಿಯಿತು. ತನ್ನ ಸ್ಥಾನಮಾನಕ್ಕೆ ಒಪ್ಪುವಂತಹ ಸಂಬಂಧ ನೋಡಿದರು.ಅದೇಷ್ಟೆ ಬೇಡಿಕೊಂಡರೂ ಆಕೆಯ ಭಾವನೆಗಳಿಗೆ ಬೆಲೆ ನೀಡದೆ ಆಕೆಯ ತಂದೆ ರಶ್ಮಿಯ ನಿಶ್ಚಿತಾರ್ಥ ಮಾಡಿದ. ಪ್ರವೀಣ್ ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಪಡೆದನು. ತನ್ನ ತಂದೆತಾಯಿಗಳಿಗೆ ತನ್ನ ಪ್ರೀತಿ ವಿಷಯ ತಿಳಿಸಿದ. ಆದರೆ ಅದಾಗಲೇ ರಶ್ಮಿಗೆ ಮದುವೆ ನಿಶ್ಚಯವಾದ ಬಗ್ಗೆ ಪ್ರವೀಣ್ ನ ಹೆತ್ತವರು ತಿಳಿಸಿದರು. ರಶ್ಮಿ,ಪ್ರವೀಣ್ ದಿನಲೂ ಕಣ್ಣೀರು ಹಾಕುತ್ತಿದ್ದರು.

ಮದುವೆಗೆ ಇನ್ನೊಂದು ವಾರ ಮಾತ್ರ ಬಾಕಿ ಇತ್ತು. ಹೀಗಿರುವಾಗ ಆಘಾತಕಾರಿ ವಿಷಯ ಬಂದಿತು. ರಶ್ಮಿ ಸಂಚಾರಿಸುತ್ತಿದ್ದ ಕಾರು ಡ್ರೈವರ್ ನ ನಿಯಂತ್ರಣ ತಪ್ಪಿ ಆಕ್ಸಿಡೆಂಟ್ ಆಯಿತು. ಆಸ್ಪತ್ರೆಯಲ್ಲಿದ್ದ ಮಗಳನ್ನು ನೋಡಿ ರಶ್ಮಿ ತಂದೆತಾಯಿ ಕುಸಿದು ಹೋದರು. ಅಪಘಾತದಲ್ಲಿ ರಶ್ಮಿ ತನ್ನ ಎಡಗಾಲನ್ನು ಕಳೆದುಕೊಂಡಿದ್ದಳು. ಮೊದಲೇ ನೋವಿನಲ್ಲಿದ್ದ ರಶ್ಮಿ ಮತ್ತು ಆಕೆಯ ಮನೆಯವರೆಗೆ ಇನ್ನೊಂದು ಅಘಾತ ಎದುರಾಯಿತು. ರಶ್ಮಿಯನ್ನು ಮದುವೆಯಾಗಬೇಕಿದ್ದ ಹುಡುಗನ ಮನೆಯವರು ಈ ಮದುವೆ ಬೇಡವೆಂದು ಕಡ್ಡಿ ಮುರಿದಂತೆ ಹೇಳಿದರು.

ಪ್ರವೀಣ್ ಮತ್ತು ಆತನ ತಂದೆ,ತಾಯಿ ರಶ್ಮಿ ಮನೆಗೆ ಬಂದರು. ಪ್ರವೀಣ್ ರಶ್ಮಿ ತಂದೆ ಬಳಿ ನನ್ನ ಪ್ರೀತಿಯನ್ನು ನನಗೆ ನೀಡಿ ಎಂದು ನೇರವಾಗಿ ಕೇಳಿಯೇ ಬಿಟ್ಟ. ಆಶ್ಚರ್ಯಗೊಂಡ ರಶ್ಮಿ ತಂದೆ ರಶ್ಮಿಗಾದ ಅಪಘಾತದ ಬಗ್ಗೆ ತಿಳಿಸಿದಾಗ ನಾನು ಬಯಸಿದ್ದು ರಶ್ಮಿಯ ಬಾಹ್ಯ ಸೌಂದರ್ಯವನ್ನಲ್ಲಾ ಆಕೆಯ ಪ್ರೀತಿಯನ್ನು ಎಂದು ಹೇಳಿದ. ಸುರೇಶ್ ಪಾಟೀಲ್ ಗೆ ತನ್ನ ತಪ್ಪಿನ ಅರಿವಾಯಿತು. ಸ್ಥಾನಮಾನಕ್ಕಿಂತ ಮನುಷ್ಯತ್ವ ಮುಖ್ಯ ಎಂಬುದನ್ನು ಅರಿತುಕೊಂಡ.


“ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆ ಅಲ್ಲ…ಅವಳ ಸೌಂದರ್ಯವನ್ನು ಬಯಸುವುದು ಅಲ್ಲ…ಅಂತಸ್ಥನ್ನು ಅಳೆಯುವುದು ಅಲ್ಲ…ಎಂತದೇ ಕಷ್ಟ ಬರಲಿ ಸುಖವೇ ಇರಲಿ ನಂಬಿ ಬಂದವಳನ್ನು ಆಕೆಯ ಸೌಂದರ್ಯ ಮಾಸಿದರೂ ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಹೋಗುವುದೇ ನಿಜವಾದ ಪ್ರೀತಿ ಅಲ್ಲವೇ…..”

 

 

 

 

✍️ ಗ್ರೀಷ್ಮಾ ಭಂಡಾರಿ ಕಲ್ಲಡ್ಕ 

 

Leave a Reply

Your email address will not be published. Required fields are marked *