September 20, 2024

          ಸುತ್ತಲೂ ಹಸಿರು ಕಾಡು, ಮಧ್ಯೆ ಡಾಂಬರು ರಸ್ತೆ, ಮಂಜಿನಿಂದ ಕೂಡಿದ ಸುಂದರ ವಾತಾವರಣ. ನಿಹಾರಿಕ ಮಗಳನ್ನು ಕಾಲಮೇಲೆ ಕೂರಿಸಿಕೊಂಡು ಪ್ರಕೃತಿ ಸೌಂದರ್ಯವನ್ನು ಕಾರಿನ ಕಿಟಕಿಯ ಮೂಲಕ ವೀಕ್ಷಿಸಿ ಆಸ್ವಾದಿಸುತ್ತಿದ್ದಳು. ಮಂಜಿನ ಹನಿಗಳನ್ನು ಹಿಡಿದು ಕೆನ್ನೆಗೆ ತಾಗಿಸುತ್ತಿದ್ದ ಮಗಳು ದೃತಿಗೆ ಶೀತವಾದರೆ ಎಂಬ ಭಯದಿಂದ ಗದರಿಸಿದಳು. ಕಾರು ಚಲಾಯಿಸುತ್ತಿದ್ದ ವಿವೇಕ್ ತಾಯಿಮಗಳ ಮಾತುಕತೆಯನ್ನು ಕೇಳಿ ಮುಗುಳ್ನಗುತ್ತಿದ್ದ. ಶೃಂಗೇರಿ ದೇವಸ್ಥಾನದಲ್ಲಿ ಶಾರದಾಂಬೆಯ ದರ್ಶನ ಮಾಡಿ ಆಗುಂಬೆ ಘಾಟಿಯ ರಸ್ತೆಯಲ್ಲಿ ವಾಪಾಸಾಗುತ್ತಿತ್ತು ಪುಟ್ಟಕುಟುಂಬ. ದಾರಿಮದ್ಯೆಯಲ್ಲಿ ಸಿಗುವ ಮಂಗಗಳಿಗೆ ಪ್ರೀತಿಯಿಂದಲೇ ತಿಂಡಿಗಳನ್ನು ನೀಡಿ ಮುಂದೆ ಸಾಗುತ್ತಿದ್ದ ವಿವೇಕ್. ಅಷ್ಟರಲ್ಲಿ ಯಾರೋ ಒಬ್ಬರು ರಸ್ತೆ ದಾಟುತ್ತಿದ್ದರು. ವೇಗವಾಗಿ ಬರುತ್ತಿದ್ದ ವಿವೇಕ್ ನ ಕಾರು ಆ ವ್ಯಕ್ತಿಯನ್ನು ಉಳಿಸಲಿಕ್ಕಾಗಿ ಕಾರನ್ನು ಬದಿಗೆ ತಂದು ನಿಧಾನ ಮಾಡಿದನು. ಅವನು ಬಂದ ವೇಗಕ್ಕೆ ಕಾರು ಪಲ್ಟಿಯಾಗಿ ವ್ಯಕ್ತಿಯ ಜೊತೆಗೆ ಈ ಮೂವರು ಕೂಡ ಪ್ರಪಾತದಲ್ಲಿ ಇರುತ್ತಿದ್ದರು.

          ಅದೃಷ್ಟವೆಂಬಂತೆ ಬದುಕುಳಿದಿದ್ದರು. ಅದನ್ನೇ ನೆನೆಸಿಕೊಂಡು ಕಾರು ಚಲಾಯಿಸುತ್ತಿದ್ದ ವಿವೇಕ್ ಗೆ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಲಾರಿ ಕಾಣಿಸಲೇ ಇಲ್ಲ. ಕಾರನ್ನು ಗುದ್ದಿಕೊಂಡು ಲಾರಿ ಹೊರಟುಹೋಗಿತ್ತು. ಕಾರು ಪಲ್ಟಿಯಾಗಿ ಪ್ರಪಾತಕ್ಕೆ ಬಿದ್ದಿತ್ತು. ವಿವೇಕ್ ಮೇಲಿನಿಂದ ಬೀಳುವಾಗ ತನ್ನ ಜೊತೆಗೆ ಬೀಳುವ ಹೆಂಡತಿ ಮತ್ತು ಮಗುವನ್ನು ನೋಡಿ ಕಣ್ಣೀರು ಹರಿಯತೊಡಗಿತು. ರಕ್ತಸಿಕ್ತವಾಗಿದ್ದ ಮಗು, ಅದೃಷ್ಟವೆಂಬಂತೆ ಬಟ್ಟೆಯ ತುಂಡೊಂದು ಹರಿದು ಮರಕ್ಕೆ ಕಟ್ಟಿಹಿಡಿದಿತ್ತು. ಅದನ್ನು ಕಂಡ ದಾರಿಹೋಕನೊಬ್ಬ ಮಗುವನ್ನ ಅಸ್ಪತ್ರೆಗೆ ಸೇರಿಸಿದ್ದ. ಆದರೆ ವಿವೇಕ್ ಮತ್ತು ನಿಹಾರಿಕ ಪ್ರಪಾತಕ್ಕೆ ಬಿದ್ದು ದೇಹವೇ ಸಿಗಲಿಲ್ಲ.

          ಸತ್ತು ಹೋದ ವಿವೇಕ್ ಆತ್ಮ ತೃಪ್ತಿಯಿಂದ ಮರಣಹೊಂದಿರಲಿಲ್ಲ. ಹೆಂಡತಿ ಮಗಳನ್ನು ಕಳೆದುಕೊಂಡು ಆಕ್ರಂದನಗೈಯ್ಯುತ್ತಿದ್ದ ವಿವೇಕ್ ನ  ಆತ್ಮದ ಕಿರುಚಾಟ ಆ ದಾರಿಯಲ್ಲಿ ಸಂಚರಿಸುತ್ತಿದ್ದ ಹಲವರು ಕೇಳಿಸಿಕೊಂಡಿದ್ದರು. ಅದರಲ್ಲೂ ಲಾರಿಸವಾರರಿಗಂತೂ ವಿವೇಕ್ ನ ಆತ್ಮ  ಜಾಸ್ತಿಯೇ ಹೆದರಿಸಿಬಿಡುತ್ತಿತ್ತು. ತನ್ನ ಕುಟುಂಬದ ನಾಶ ಲಾರಿಯಿಂದ ಆದದ್ದು ಎಂದು ವಿವೇಕ್ ನ ಆತ್ಮಕ್ಕೆ ರೋಷವಿತ್ತು.ಲಾರಿಚಾಲಕರು ಆತ್ಮಕ್ಕೆ ಹೆದರಿ ನಿಧಾನವಾಗಿ ಚಲಾಯಿಸುತ್ತಿರುವುದು ವಿವೇಕನಿಂದಾಗಿಯೇ.

           ಹೀಗೆ ಅದೆಷ್ಟೋ ಮುಗ್ದ ಜೀವಗಳು ಚಾಲಕನ ಅತೀವೇಗದ ಚಲಾಯಿಸುವಿಕೆಯಿಂದ ಪ್ರಾಣ ಬಿಟ್ಟಿರುವವೋ?? ಅದೆಷ್ಟು ಆತ್ಮಗಳು ಅತ್ತ ಮೋಕ್ಷವೂ ಇಲ್ಲದೆ, ಇತ್ತ ಮರುಜನ್ಮವನ್ನು ಪಡೆಯದೆ ಆಕ್ರಂದನಗೈಯ್ಯುತ್ತಿರುವವೋ? ನಿಧಾನವಾಗಿ ಚಲಿಸಿ, ತಿರುವು-ಮುರುವು ರಸ್ತೆ ಎಂಬ ನಾಮಫಲಕಗಳು ರಕ್ತದೋಕುಳಿಯಿಂದ ಅಳುತ್ತಿರುವವೋ?? ಯಾರಿಗೆ ಗೊತ್ತು. ನೀವು ಜೀವವನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ ಜೀವ ತೆಗೆಯುವಂತೆ ವಾಹನಗಳನ್ನು ಚಲಾಯಿಸಬೇಡಿ. ಮುಗ್ಧ ಜೀವಗಳನ್ನು ಬಲಿ ತೆಗೆದುಕೊಳ್ಳಬೇಡಿ.

 ನಾಗಶ್ರೀ ಭಂಡಾರಿ, ಮೂಡುಬಿದಿರೆ

1 thought on “ಆಕಸ್ಮಿಕ

  1. Thank u. Creating awareness is need of the hour.

    In the article instead of safety, the risk factors of accident are discussed and a lesson is taught on safety. It’s to be appreciated.

    Let’s not meet by accident.

Leave a Reply

Your email address will not be published. Required fields are marked *