September 20, 2024

ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..ಪವನ್ ನ ಅಮ್ಮ ಪದ್ಮಜಾ ಬಳಿ ಮದುವೆ ಆಗಿ ಮಗು ಇದ್ದು ಗಂಡ ತೀರಿ ಕೊಂಡ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳುತ್ತಾನೆ. ಅಮ್ಮ ಯಾರಿಗೆ ಎಂದಾಗ ನೀವು ಮೊದಲು ಉತ್ತರ ಹೇಳಿ ಎಂದು ಹಟ ಮಾಡುತ್ತಾನೆ…ಈ ಬಗ್ಗೆ ಪದ್ಮಜಾ ಳಿಗೆ ತುಂಬಾ ಚಿಂತೆ ಶುರುವಾಗುತ್ತದೆ…..

ಅಂತರಾಳ – ಭಾಗ 20

ಪವನ್ ಗೆ ಅಮ್ಮ ಏನೂ ಹೇಳದೆ ಇರೋದು ತುಂಬಾ ನಿರಾಶೆಯಾಯಿತು… ಆದರೆ ತಾನು ಅಮ್ಮನನ್ನು ಒಪ್ಪಿಸಿ ಆರತಿಯ ಮನಸ್ಸು ಗೆದ್ದು ಮದುವೆ ಆಗಿಯೇ ಸಿದ್ದ ಎಂಬ ದೃಢ ನಿರ್ಧಾರ ತಳೆದನು ಪವನ್…

ಪದ್ಮಜಾಳಿಗೆ ರಾತ್ರಿ ಕಥೆ ಕಾದಂಬರಿ ಓದುತ್ತಾ ನಿದ್ದೆ ಮಾಡುವ ಅಭ್ಯಾಸ ಯೌವನದಿಂದಲೇ ಬಂದದ್ದು … ಇವತ್ತು ಓದಲು ಮನಸ್ಸು ಒಂದೇ ಕಡೆ ನಿಲ್ಲುತ್ತಿಲ್ಲ.. ಪವನ್ ವಿಷಯ ಭವಾನಿಯಲ್ಲಿ ಹೇಳಿ ಅವಳಿಂದ ಎನಾದರೂ ಸಲಹೆ ಸಿಗಬಹುದು ಎಂದು ಯೋಚನೆ ಬಂದ ತಕ್ಷಣ ಭವಾನಿ ನೀನು ಓದು ಎಂದು ಹೇಳಿ ಕೊಟ್ಟ ಡೈರಿ ಬಗ್ಗೆ ನೆನಪಾಗಿ ಅಯ್ಯೋ ಅದನ್ನು ಓದಲು ನೆನಪೇ ಇಲ್ಲ ಎಂದು ಅದನ್ನು ತೆಗೆದು ಓದಲು ಕುಳಿತಳು ಪದ್ಮಜಾ………

ಡೈರಿ ಓದಿ ಮುಗಿಸಿದ ಮೇಲೆ ಪದ್ಮಜಾಳಿಗೆ ಅನಿಸಿದ್ದು ಒಂದೇ…ಜೀವನ ಅನ್ನೋದು ಒಂದು ಸುಂದರ ರಂಗೋಲಿ. ಅಲ್ಲಿ ಒಂದು ಚುಕ್ಕಿ ತಪ್ಪಿದರೂ ರಂಗೋಲಿ ಹಾಳಾಗಿ ಬಿಡುತ್ತದೆ. ಆದ್ದರಿಂದ ಜೀವನದ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು…… ಆದರೆ ಬಿರುಗಾಳಿ ಯಾವಾಗ ಹೇಗೆ ಬೀಸುತ್ತದೆ ಎಂದು ಗೊತ್ತಿದ್ದರೆ ತಾನೇ!!!!
” ಮನುಷ್ಯನ ವ್ಯಕ್ತಿತ್ವ ನಿರ್ಧಾರವಾಗುವುದು ಅವನು ನೆಮ್ಮದಿಯ ದಿನಗಳಲ್ಲಿ ಹೇಗಿರುತ್ತಾನೆ ಎಂಬುದರ ಮೇಲಲ್ಲ. ಬದಲಾಗಿ ಬದುಕಿನ ಕಷ್ಟದ ಮತ್ತು ಸವಾಲಿನ ದಿನಗಳಲ್ಲಿ ಅವನ ನಿಲುವು ಏನಾಗಿರುತ್ತದೆ ಎಂಬುದರ ಮೇಲೆ…”.‌‌.ಹಾಗಿರುವಾಗ ಯಾರೊಬ್ಬರ ಸಹಾಯವೂ ಇಲ್ಲದೆ ಭವಾನಿ ಅಂತಹ ಕೆಟ್ಟ ಪರಿಸ್ಥಿತಿಯಿಂದ ಮೇಲೆ ಬರಬೇಕಾದರೆ ಅಬ್ಬಾ ನೆನೆದರೆ ಭಯವಾಗುತ್ತದೆ… ನಾನು ನನ್ನ ಕಷ್ಟವೇ ದೊಡ್ಡದು ನನ್ನ ತ್ಯಾಗವೇ ಮಹಾ ಎಂದುಕೊಂಡು ಇರುತ್ತೇನೆ….. ಆದರೆ ಭವಾನಿಯ ಕಷ್ಟದ ಎದುರು ಅದು ಒಂಟಿ ಹೆಣ್ಣು ಮಗಳು !!! ನನಗೆ ಅಪ್ಪ ಅಮ್ಮ ಇಬ್ಬರೂ ಇದ್ದು ನಾನು ಪಟ್ಟ ಕಷ್ಟ ಎಂದುಕೊಳ್ಳುತ್ತಾ ಇರುತ್ತೇನೆ…..ಈಗಾಲೇ ಹೋಗಿ ಭವಾನಿಯನು ಅಪ್ಪಿ ಕೊಂಡು ನಿನಗೆ ನಾನು ಇದ್ದೇನೆ ಎಂದು ಹೇಳಬೇಕು ಎಂದು ಅನಿಸಿತು ಪದ್ಮಜಾಳಿಗೆ….
ಡೈರಿ ಓದಲು ಪವನ್ ಗೆ ನೀಡಬೇಕಾ ಬೇಡವ ಎಂದು ತುಂಬಾ ಯೋಚನೆ ಮಾಡಿದಳು ಪದ್ಮಜಾ… ಕೊನೆಗೆ ಡೈರಿ ಓದಿ ಅವನ ಮನಸ್ಸು ಭವಾನಿ ಬಗ್ಗೆ ಅನುಕಂಪ ಮೂಡಲಿ ಅವನು ಶಮಿಕಾಳನು ಬಾಳ ಸಂಗಾತಿ ಮಾಡುವಂತೆ ಆಗಲಿ ಎಂದು ಮನಸಲ್ಲೇ ಹಾರೈಸಿದಳು ಪದ್ಮಜಾ……

ಪವನ್ ರಾತ್ರಿ ಊಟ ಆಗಿ ಏನನ್ನೊ ಯೋಚನೆ ಮಾಡುತ್ತಿರುವಾಗ ಪದ್ಮಜಾ ಈ ಡೈರಿ ಓದಿ ನನಗೆ ಕೊಡು ನಾಳೆ ಭವಾನಿಗೆ ಕೊಡಬೇಕು ಅವಳ ಮನೆಗೆ ಇವತ್ತು ಹೋಗಲು ಆಗಲಿಲ್ಲ ನಾಳೆ ಬೆಳಿಗ್ಗೆ ಹೋಗಿ ಸಂಜೆ ಬರುತ್ತೇನೆ ಎಂದರು.ಪವನ್ ಡೈರಿ ತೆಗೆದುಕೊಂಡು ಸರಿ ಎಂದು ಓದಲು ಶುರು ಮಾಡಿದ.

ಅವನು ಯಾವಾಗ ಓದಿ ಮುಗಿಸುತ್ತಾನೆ ಎಂದು ಪದ್ಮಜಾ ಅಲ್ಲೆ ಕುಳಿತು ಕೊಂಡರು…..
ಪವನ್ ಓದಿ ಮುಗಿಸಿ ಅಮ್ಮನ ಕೈಯಲ್ಲಿ ಡೈರಿ ನೀಡಿ ನಿಟ್ಟುಸಿರು ಬಿಟ್ಟ….. ಪದ್ಮಜಾ  ಪವನ್ ಏನಾದರೂ ಮಾತನಾಡಲಿ ಎಂದು ಸುಮ್ಮನೆ ಇದ್ದರು….. ಪವನ್ ಬೇರೆ ಸಮಯದಲ್ಲಿ ಆಗಿದ್ದರೆ ತುಂಬಾ ಮಾತನಾಡುತ್ತಿದ್ದ…. ಮೊನ್ನೆ ಆರತಿಯನ್ನು ನೋಡಿ ಅವಳ ಜೀವನದ ಘಟನೆಗಳನ್ನು ಕೇಳಿ ಮಾತನಾಡಲು ಮನಸ್ಸೇ ಆಗಲಿಲ್ಲ..
ಪದ್ಮಜಾ ತಾನೇ ಮಾತು ಶುರು ಮಾಡಿದರು… ಪವನ್ ಡೈರಿ ಓದಿ ಎನು ಅನ್ನಿಸಿತು ಎಂದರು…

ಅಮ್ಮ ಭವಾನಿ ಆಂಟಿಯ ಬಗ್ಗೆ ಆ ಡೈರಿ ಓದುವ ಮುಂಚೆಯೇ ನಾನು ಯೋಚಿಸುತ್ತಿದ್ದೆ….ಅವರ ಮುಖ ಕಣ್ಣು ಎಷ್ಟು ಶಾಂತವಾಗಿದೆ…. ಅಷ್ಟು ಶಾಂತಿ ಅವರ ಮುಖ ಕಣ್ಣುಗಳಲ್ಲಿ ಇರಬೇಕಾದರೆ ಅವರ ಜೀವನ ಅನುಭವ ಮತ್ತು ಅಸಾಧ್ಯ ನೋವು ಕಷ್ಟಗಳನ್ನು ದಾಟಿ ಬಂದವರಿಗೆ ಮಾತ್ರ ಸಾಧ್ಯ ಅಮ್ಮ…….ಅವರ ಕಣ್ಣು ಅಷ್ಟು ಶಾಂತಿಯಿಂದ ಇರಬೇಕಾದರೆ ಅಚಲವಾದ ನಿಲುವು ಇದ್ದು ಜೀವನದಲ್ಲಿ ಯಾವುದೇ ಆಸೆ ಆಕಾಂಕ್ಷೆ ಇಲ್ಲದೆ ಇದ್ದಾಗ ಆ ನಿರ್ಲಿಪ್ತತೆ ಬರಬಹುದು…..ಆದರೆ ಕೆಲವೊಮ್ಮೆ ಮುಖ,ಕಣ್ಣನ್ನು ಆಳವಾಗಿ ನೋಡಿದರೆ ಅವರ ಜೀವನದಲ್ಲಿ ಎನೋ ಕೆಟ್ಟ ಘಟನೆ ನಡೆದಿದೆ ಅದನ್ನು ಅವರು ಮರೆತರೂ ಎಲ್ಲೋ ಮೂಲೆಯಲ್ಲಿ ಅಡಗಿ ಕುಳಿತ ನೆರಳಿನಂತೆ ಅವರನ್ನು ಹಿಂಬಾಲಿಸುತ್ತಿದೆ ಎಂದು ಅನಿಸುತ್ತದೆ….ಏನೇ ನಡೆದರೂ ಹಿಂದೆ ಆದ ಕಹಿ ಘಟನೆ ಬಗ್ಗೆ ಎನಿಸಿ ಈಗಿನ ಸಂತೋಷ ಹಾಳು ಮಾಡುವುದು ಸರಿಯಲ್ಲ ಅವರು ಈ ಡೈರಿಯನ್ನು ಸುಟ್ಟು ಬೂದಿ ಮಾಡಬೇಕು ಅಮ್ಮ ಎಂದು ಪವನ್ ಮಾತು ನಿಲ್ಲಿಸಿದ…….. ನೀನು ಹೇಳುವುದು ಸರಿ ಪವನ್ ಆದರೆ ಮನುಷ್ಯನಿಗೆ ನೆನಪಿನ ಶಕ್ತಿ ಎಂಬುದು ಇದೆಯಲ್ಲಾ… ನಾವು ಡೈರಿ ಸುಡಬಹುದು ಆದರೆ ಮನಸ್ಸು ನಡೆದ ಘಟನೆ ನೆನಪಿಸದೆ ಬಿಡಬೇಕಲ್ಲ…. ಮನಸ್ಸು ನೆನಪಿಸುತ್ತದೆ ಎಂದು ಈ ರೀತಿ ಡೈರಿ ಮೂಲಕ ಇದ್ದರೆ ಅದನ್ನು ಓದಿದವರು ಎಲ್ಲರೂ ಒಂದೇ ರೀತಿ ಇರುತ್ತಾರಾ ಅಮ್ಮ? ಅಲ್ಲದೆ ಅದು ಶಮಿಕಾಳಿಗೆ ತೊಂದರೆ ಅಲ್ವಾ…. ಎಲ್ಲ ಮನುಷ್ಯರೂ ಒಂದೇ ರೀತಿ ಅಲೋಚನೆ ಮಾಡುತ್ತಾರೆ ಎಂದು ನಾವು ಹೇಳಲು ಆಗುವುದಿಲ್ಲ.. ಒಂದೇ ವಿಷಯದ ಕುರಿತು ನಾನು ಯೋಚನೆ ಮಾಡುವುದಕ್ಕೂ ಇನ್ನೊಬ್ಬ ಯೋಚನೆ ಮಾಡುವುದಕ್ಕೂ ವ್ಯತ್ಯಾಸ ಇದೆ…. ಉದಾಹರಣೆಗೆ ಕಳ್ಳತನದ ವಿಷಯ ಇರುವ ಸಿನಿಮಾ ಇಬ್ಬರು ನೋಡಿದರೆ ಒಬ್ಬ ನಾನು ಕಳ್ಳತನ ಮಾಡಬಾರದು ಎಂದು ಯೋಚಿಸಿದರೆ ಇನ್ನೊಬ್ಬ ಹೇಗೆ ಕಳ್ಳತನ ಮಾಡಬಹುದು ಮಾಡಿ ಹೇಗೆ ತಪ್ಪಿಸಲು ಸಾಧ್ಯ ಎಂದು ಯೋಚನೆ ಮಾಡಬಹುದು ಅಲ್ವಾ ಒಳ್ಳೆಯ ಯೋಚನೆ ಮಾಡುವವರು ಕಡಿಮೆ ಜನ ಇರುತ್ತಾರೆ ಅಮ್ಮ….. ಅಲ್ಲದೆ ಇದನ್ನು ಶಮಿಕಾ ಓದಬಾರದು !! ತಪ್ಪಿ ಓದಿದರೆ ಅವಳ ಮನಸ್ಸಿನಲ್ಲಿ ಗಂಡು ಜಾತಿಯ ಬಗ್ಗೆ ದ್ವೇಷ ಅಥವಾ ತಿರಸ್ಕಾರ ಭಾವನೆ ಮೂಡಬಹುದು… ಇದರಿಂದ ಅವಳ ಮುಂದಿನ ಜೀವನ ಅಶಾಂತಿ ಉಂಟು ಮಾಡುವ ಸ್ಥಿತಿ ಇರುತ್ತದೆ…. ಎಲ್ಲ ಪುರುಷರನ್ನು ಸಂಶಯದಿಂದ ನೋಡುವ ಪರಿಸ್ಥಿತಿ ಬರುತ್ತದೆ ಅಮ್ಮ…. ಭವಾನಿ ಅಂಟಿಯಲ್ಲಿ ಹೇಳಿ ಶಮಿಕಾ ಓದಬಾರದು ಎಂದು…..

ಅದು ಹೇಗೆ ಹೇಳುತ್ತಿ ಪವನ್ ಶಮಿಕಾ ಕಲಿತವಳು…. ಒಳ್ಳೆದು ಕೆಟ್ಟದು ಅವಳಿಗೆ ತಿಳಿಯುತ್ತದೆ…. ಅವಳು ಪ್ರತಿ ಸಾರಿ ಅಪ್ಪ ಯಾರು ಎಂದು ಕೇಳುತ್ತಾಳೆ ಎಂದು ಭವಾನಿ ಡೈರಿಯಲ್ಲಿ ಬರೆದಿದ್ದಾಳೆ ಅಲ್ವಾ ಈ ಮೂಲಕ ತಿಳಿದರೆ ತಪ್ಪೇನು ಎಂದು ಪದ್ಮಜಾ ಹೇಳಿದರು… ತಪ್ಪು ಅಂತ ಹೇಳಿದ್ದು ಅಲ್ಲ ಅಮ್ಮ ನೀವು ಓದುವುದಕ್ಕೂ ಶಮಿಕಾ ಓದಿ ಅವಳ ಹುಟ್ಟಿನ ಬಗ್ಗೆ ತಿಳಿದುಕೊಳ್ಳುವುದಕ್ಕೂ ವ್ಯತ್ಯಾಸ ಇದೆ… ಬೇರೆಯವರಿಗೆ ಕಷ್ಟ ಬಂದಾಗ ನಾವು ಸಾಂತ್ವನ ತುಂಬಾ ಹೇಳಬಹುದು ಆದರೆ ಅದೇ ಕಷ್ಟ ನಮಗೆ ಬಂದಾಗ ಆ ಸ್ಥಾನದಲ್ಲಿ ನಿಂತು ನಾವು ಹೇಗೆ ಎದುರಿಸುತ್ತೇವೆ ಎಂಬುದು ಮುಖ್ಯ ಅಮ್ಮ…… ಉಪದೇಶ ನೀಡುವುದು ಸುಲಭ.‌‌….. ಅಮ್ಮ ನಾನು ಎನಿಸುವುದು ಅತ್ಯಾಚಾರ ಮಾಡಿದವರನ್ನು ಪತ್ತೆ ಹಚ್ಚಿದರೆ ಹೇಗೆ? ಅದು ಹುಚ್ಚು ಕೆಲಸ ಪವನ್ ಹೊಳೆ ನೀರಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ…. ಯಾರು ಎಂದು ಭವಾನಿಗೆ ಗೊತ್ತಿಲ್ಲ ಅಲ್ಲದೆ ಇದು ನಡದು 23, 24,‌ ವರುಷ ಕಳೆಯಿತು ಈಗ ಏನೂ ಹೇಗೆ ಎಂದು ಗೊತ್ತಾಗುತ್ತದೆ…. ನಿನ್ನ ಪೋಲಿಸ್ ಕೆಲಸ ಇಲ್ಲಿ ಉಪಯೋಗ ಆಗಲಾರದು!! ಹಾಗೆ ಹೇಳಬೇಡಿ ಅಮ್ಮ ಆ ಸಮಯದಲ್ಲಿ ಆ ಪರಿಸರದಲ್ಲಿ ಯಾರೆಲ್ಲ ಇದ್ದರು ಎಂದು ಮೊದಲು ಸರ್ವೆ ಮಾಡಬೇಕು ಆಮೇಲೆ ಅದಕ್ಕೆ ಬೇಕಾದ ಹಾಗೆ ಗಂಡಸರಿಗೆ ಸಂಬಂಧ ಪಟ್ಟ ಹಾಗೆ ಪ್ರಶ್ನಾವಳಿ ತಯಾರು ಮಾಡಬೇಕು ಅಯ್ಯೋ ಮಾರಾಯ ಆಗುವ ಕೆಲಸದ ಬಗ್ಗೆ ಚಿಂತನೆ ಮಾಡು ಕೆಲಸಕ್ಕೆ ಬಾರದ ವಿಷಯ ಬೇಡ. ಇಂತಹ ವ್ಯಕ್ತಿಗಳೇ ಎಂದು ಗೊತ್ತಾದರೂ ಏನು ಪ್ರಯೋಜನ ಹೇಳು? ಮೊದಲು ಶಮಿಕಾ ಇದನ್ನು ಓದಿ ಆಗಿದಾ ಎಂದು ತಿಳಿಯಬೇಕು ಅಮ್ಮ ಎಂದು ಪವನ್ ಪದ್ಮಜಾ ಳ ಬಳಿ ಹೇಳಿದನು….. ಇವರಿಬ್ಬರೂ ಮಾತನಾಡುತ್ತಾ ಮಲಗುವ ಸಮಯ ದಾಟಿತ್ತು… ಇಬ್ಬರು ಎದ್ದು ಮಲಗಲು ಹೋದರು.. ಪದ್ಮಜಾಳಿಗೆ ಭವಾನಿ ಬಗ್ಗೆ ಅಯ್ಯೋ ಎಂದು ಅನಿಸಿದರೂ ಪವನ್ ಶಮಿಕಾ ಕುರಿತು ಕಾಳಜಿ ವಹಿಸಿ ಮಾತನಾಡಿದ್ದು ಅವರಿಗೆ ಆನಂದವಾಯಿತು….

( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *