September 20, 2024

       ಭಂಡಾರಿವಾರ್ತೆಯಲ್ಲಿ ನಾವು ಕಳೆದ ಹತ್ತು ತಿಂಗಳಿನಲ್ಲಿ ಸರಿಸುಮಾರು ಎಂಟುನೂರಕ್ಕೂ ಹೆಚ್ಚು ವರದಿಗಳನ್ನೂ, ಲೇಖನಗಳನ್ನೂ ಪ್ರಕಟಿಸಿದ್ದೇವೆ. ನಾವು ಒಂದು ತಂಡವಾಗಿ ಪ್ರತಿಯೊಂದು ವರದಿಗಳನ್ನೂ ವಸ್ತುನಿಷ್ಠವಾಗಿ,ನಿಖರವಾಗಿ ಬರೆಯುವ ಪ್ರಯತ್ನವನ್ನು ಮಾಡಿದ್ದೇವೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದೇವೆ ಕೂಡಾ, ಹಾಗೆಯೇ ಓದುಗರಿಂದ ಬರುವ ಪ್ರತಿಕ್ರಿಯೆ,ಪ್ರತ್ಯುತ್ತರಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇವೆ.

ನಾವು ಕೆಲವು ವರದಿಗಳನ್ನು ಪ್ರಕಟಿಸಿದಾಗ ಸಂಬಂಧಿಸಿದ ಕೆಲವು ಹಿರಿಯರು ನಮಗೆ ಕರೆ ಮಾಡಿ ತಮ್ಮ ಸಂತಸವನ್ನು  ಹಂಚಿಕೊಂಡು ನಮ್ಮ ಬೆನ್ನು ತಟ್ಟಿದ್ದಾರೆ.

ಡಾಕ್ಟರ್ ಸುಮತಿ ಲಕ್ಷ್ಮಣ ಕರಾವಳಿಯವರಿಗೆ ಬೆಂಗಳೂರು ಮಹಾನಗರ ಪಾಲಿಕೆಯವರು ಪ್ರಶಸ್ತಿ ನೀಡಿ ಸನ್ಮಾನಿಸಿದ ವರದಿ ಪ್ರಕಟಗೊಂಡಾಗ ಶ್ರೀ ಲಕ್ಷ್ಮಣ ಕರಾವಳಿಯವರು ಕರೆ ಮಾಡಿ ತಮ್ಮ ಸಂತಸ ನಮ್ಮೊಂದಿಗೆ ಹಂಚಿಕೊಂಡರು. 

 

       ಶ್ರೀ ಗಂಗಾಧರ ಭಂಡಾರಿ ಬಿರ್ತಿಯವರ ಬಗ್ಗೆ ಲೇಖನ ಬರೆದಾಗ ಅವರು ಮತ್ತು ಅವರ ಶ್ರೀಮತಿ ಶಾಲಿನಿ ಗಂಗಾಧರ ಭಂಡಾರಿಯವರು ಕರೆ ಮಾಡಿ ಭಂಡಾರಿವಾರ್ತೆಯ ಕಾರ್ಯವೈಖರಿಯನ್ನು ಶ್ಲಾಘಿಸಿ ಮಾತನಾಡಿದರು. 

             ರಾಮನಗರದ ವರ್ಣಚಿತ್ರ ಕಲಾವಿದ ಶ್ರೀ ನಾರಾಯಣ ಭಂಡಾರಿಯವರು ಅವರ ಬಗ್ಗೆ ಬರೆದ ಲೇಖನವನ್ನು ನೋಡಿ ಕೂಡಲೇ ಕರೆ ಮಾಡಿ ಭಂಡಾರಿವಾರ್ತೆಯ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡಿದರು. 

ಅದೇ ರೀತಿ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ನ ವೈ.ಶಂಭು ಭಂಡಾರಿಯವರು, ಅರುಣ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಅರುಣ್ ಭಂಡಾರಿಯವರು…. ಇವು ಒಂದೆರಡು ಉದಾಹರಣೆಗಳಷ್ಟೆ.

ಅದೇ ರೀತಿ ನಮ್ಮ ಭಂಡಾರಿವಾರ್ತೆಯಲ್ಲಿ ಜೂನ್ 23 ರಂದು “ಹೆಸರಾಂತ ಸ್ಟಾರ್ ಡಸ್ಟ್ ಪತ್ರಿಕೆಯ ಮುಖಪುಟ ಲೇಖನದ ಗೌರವಕ್ಕೆ ಪಾತ್ರವಾದ ಭಂಡಾರಿ ಬಂಧು ” ಶೀರ್ಷಿಕೆಯಡಿಯಲ್ಲಿ ಡಾ|| ಶಿವರಾಮ.ಕೆ.ಭಂಡಾರಿಯವರ ಬಗ್ಗೆ ಪ್ರಕಟಿಸಿದ ಲೇಖನ ಅತೀ ಹೆಚ್ಚು ಓದುಗರನ್ನು ಸೆಳೆದ ಲೇಖನವಾಗಿತ್ತು. ಭಂಡಾರಿವಾರ್ತೆಯ ವಾಟ್ಸ್ಯಾಪ್ ಗ್ರೂಪಿನಲ್ಲಿ, ಫೇಸ್ ಬುಕ್ ನಲ್ಲಿ ಸಂಚಲನ ಉಂಟುಮಾಡಿದ ಈ ಲೇಖನದ ಬಗ್ಗೆ ಹಲವರು ಕರೆ ಮಾಡಿ ತಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಇದಕ್ಕೆಲ್ಲಾ ಕಲಶವಿಟ್ಟಂತೆ ಸ್ವತಃ ಡಾ|| ಶಿವರಾಮ.ಕೆ.ಭಂಡಾರಿಯವರು ನಮ್ಮ ವರದಿಗಾರರಾದ ಭಾಸ್ಕರ್ ಭಂಡಾರಿ ಶಿರಾಳಕೊಪ್ಪರವರಿಗೆ ಕರೆ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡು, ಲೇಖನದ ಗುಣಮಟ್ಟ ಮತ್ತು ಭಂಡಾರಿವಾರ್ತೆಯ ಕಾರ್ಯವೈಖರಿಯ ಬಗ್ಗೆಯೂ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿರುವುದು ನಮಗೆ ನೈತಿಕಬಲ ಸಿಕ್ಕಿದಂತಾಗಿದೆ, ನಮ್ಮ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ ಎಂದು ತಿಳಿಸಲು ಹರ್ಷವೆನಿಸುತ್ತದೆ.

          ಕಾಲೆಳೆಯುವ ನೂರು ಜನರ ಮಧ್ಯದಲ್ಲಿ ಬೆನ್ತಟ್ಟುವ ಇಂತಹ ಹತ್ತಾರು ಕೈಗಳೇ ನಮಗೆ ಶ್ರೀರಕ್ಷೆ. ಹೊಸ ಬೆಳವಣಿಗೆಯೊಂದಕ್ಕೆ ಭಂಡಾರಿವಾರ್ತೆ ತೆರೆದುಕೊಳ್ಳುತ್ತಿದೆ. ಹರೀಶ್ ನಾರ್ವೆ, ಸುಪ್ರೀತಾ ಸೂರಿಂಜೆ, ವಿಜಯ್ ನಿಟ್ಟೂರು, ಗ್ರೀಷ್ಮಾ ಕಲ್ಲಡ್ಕ, ಕಾರ್ತಿಕ್ ಮಜಲ್ಮಾರ್, ರಿತೇಶ್ ಕುಂಜಿಬೆಟ್ಟು, ಸಾತ್ವಿಕ್ ಹುಣ್ಸೇಮಕ್ಕಿ, ವೈಶೂ….. ಮುಂತಾದ ಯುವ ಲೇಖಕರ ಬರಹಗಳಿಂದ ಭಂಡಾರಿವಾರ್ತೆ ಶ್ರೀಮಂತವಾಗುತ್ತಿದೆ. ಇದೊಂದು ಆರೋಗ್ಯಕರ ಬೆಳವಣಿಗೆಯಂತೂ ಹೌದು. ಅಭಿನಂದನೆಗಳು ಎಲ್ಲರಿಗೂ….
ನಮ್ಮ ಉತ್ಸಾಹಿ ಯುವಕರ “ಭಂಡಾರಿವಾರ್ತೆ ತಂಡ” ಮಾಡುತ್ತಿರುವ ಈ ರೀತಿಯ ವಿನೂತನ ಸಮಾಜಮುಖಿ ಕಾರ್ಯಗಳಿಗೆ ನಿಮ್ಮ ಪ್ರೋತ್ಸಾಹ,ಬೆಂಬಲ ಹೀಗೆ ಇರಲಿ ಎಂದು ಅಪೇಕ್ಷಿಸುವ….

ಪ್ರಕಾಶ್ ಭಂಡಾರಿ ಕಟ್ಲಾ.
ಮುಖ್ಯ ಸಂಪಾದಕರು.
CEO.ಭಂಡಾರಿವಾರ್ತೆ.

ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ 

Leave a Reply

Your email address will not be published. Required fields are marked *