September 20, 2024
ತರಕಾರಿಗಳಲ್ಲಿ ಪ್ರೋಟೀನ್ ಕಾರ್ಬೋಹೈಡ್ರೇಟ್ ಗಳು ಕಡಿಮೆ ಇದ್ದು ಇವು ನೀಡುವ ಶಕ್ತಿಯೂ ಕಡಿಮೆ. ಬೊಜ್ಜಿನವರು ಬೇಕಾದಷ್ಟು ತರಕಾರಿಗಳನ್ನು ತಿನ್ನಬಹುದು. ಇವುಗಳಲ್ಲಿ ನಾರಿನಂಶವೂ ಹೆಚ್ಚಾಗಿದ್ದು ಮಲಬದ್ಧತೆಯನ್ನು   ನಿವಾರಿಸುತ್ತದೆ. ತರಕಾರಿಗಳಲ್ಲಿ ಜೀವಸತ್ವ ಮತ್ತು ಲವಣಗಳು ಹೇರಳವಾಗಿದೆ. ಕ್ಯಾರೆಟ್, ಮೂಲಂಗಿ, ಬೀನ್ಸ್,ಗೆಣಸು, ಅವರೆಕಾಯಿ, ಸೀಮೆ ಬದನೆ,ಜವಳಿಕಾಯಿ, ಹಲಸಿನ ಬೀಜ, ಬೆಂಡೆಕಾಯಿ ಇವುಗಳಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿದ್ದರೆ ಟೊಮೆಟೋ, ಬಾಳೆಕಾಯಿ, ನೀರುಳ್ಳಿ ಗಣಿ, ಕಮಲದ ದಂಟು, ಹಾಗಲಕಾಯಿ, ಬೀನ್ಸ್, ಗೆಣಸುಗಳಲ್ಲಿ ಅಧಿಕ ಕೊಬ್ಬಿನಂಶವಿದೆ.
 
Vegetables will be sold at 82 points in Guwahati from April 8 ...
 
ನುಗ್ಗೆಕಾಯಿ ಕ್ಯಾರೆಟ್, ದೊಣ್ಣೆ ಮೆಣಸಿನಕಾಯಿ, ಹಾಗಲಕಾಯಿ, ಬದನೆಕಾಯಿ, ಬೀನ್ಸ್, ಅವರೆಕಾಯಿ, ಹಲಸಿನಕಾಯಿ , ಮಾವಿನಕಾಯಿ, ಟೊಮೆಟೋ ಜವಳಿಕಾಯಿ ಇವು ‘ಎ’ ಜೀವಸತ್ವ ದ ಆಗರ ಹಾಗಲಕಾಯಿ, ನುಗ್ಗೆಕಾಯಿ, ಹಲಸಿನಕಾಯಿಗಳಲ್ಲಿ ‘ಸಿ’ ಜೀವಸತ್ವ ವಿದೆ. ಬೂದುಗುಂಬಳ ,ಹಾಗಲಕಾಯಿ, ಬದನೆಕಾಯಿ, ಜವಳಿಕಾಯಿ, ಸೌತೆಕಾಯಿ, ನುಗ್ಗೆಕಾಯಿ, ತುಪ್ಪದ ಹೀರೆ, ತೊಂಡೆ- ಬೆಂಡೆ ಕುಂಬಳ ,ಹೀರೆ ,ಪಡುವಲ, ಟೊಮೆಟೋ ಈ ತರಕಾರಿ ಗಳು ಅತಿ ಕಡಿಮೆ ಶಕ್ತಿ ನೀಡುತ್ತದೆ. ಈ ಅಂಶವನ್ನು ಬೊಜ್ಜಿನವರು ನೆನಪಿಟ್ಟುಕೊಳ್ಳಬೇಕು. ಹಾಗೆಯೇ ಮಲಬದ್ಧತೆ ತೊಂದರೆ ಇರುವವರು ನಾರಿನ ಅಂಶ ಅಧಿಕವಾಗಿರುವ ಹಾಗಲ, ಬದನೆ ,ಚಪ್ಪರದವರೆ ,ಜವಳಿ, ಬೀನ್ಸ್, ನುಗ್ಗೆ, ಅವರೆ, ಹುರುಳಿ,  ತುಪ್ಪದ ಹೀರೆ ,ತೊಂಡೆ, ಬೆಂಡೆ ಈ ತರಕಾರಿಗಳನ್ನು ತಿನ್ನುವುದನ್ನು ಮರೆಯಬಾರದು. ತರಕಾರಿಗಳ ತೊಗಟೆಯಲ್ಲಿ ಅಧಿಕ ಜೀವಸತ್ವ ಮತ್ತು ಲವಣಗಳು ಸಂಗ್ರಹವಾಗಿರುವುದರಿಂದ ತರಕಾರಿಗಳ ತೊಗಟೆಯನ್ನು ಕಿತ್ತೆಸೆಯದೆ ಚಟ್ನಿ ರುಬ್ಬಿ ಉಪಯೋಗಿಸಬಹುದು. ತರಕಾರಿಗಳಲ್ಲಿನ ಪೋಷಕಾಂಶಗಳ ಸಂಪೂರ್ಣ ಲಾಭ ಪಡೆಯಲು ತಾಜಾ ತರಕಾರಿಗಳನ್ನೇ ತರಬೇಕು. ಆದಷ್ಟು ಹಸಿಯಾಗಿಯೇ, ತಿನ್ನಬೇಕು. ತೊಗಟೆ ,ಸಿಪ್ಪೆ ದಂಟುಗಳನ್ನು ತಿನ್ನಬೇಕು. ತೀರಾ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಬಾರದು. ಕತ್ತರಿಸಿದ ಅನಂತರ ತೊಳೆಯಬಾರದು. ಎಷ್ಟು ಬೇಕು ಅಷ್ಟೇ ಬೇಯಿಸಬೇಕು. ಆಲೂಗಡ್ಡೆ, ಗೆಣಸು ಇವುಗಳನ್ನು ಸಿಪ್ಪೆಯೊಂದಿಗೆ ಬೇಯಿಸಿ ಅನಂತರ ಸಿಪ್ಪೆ ತೆಗೆಯಬಹುದು ತರಕಾರಿಗಳು ಬೆಂದ ನೀರನ್ನು ಚೆಲ್ಲಿ ನಷ್ಟ ಮಾಡಬಾರದು. ಫ್ರಿಜ್ಜಿನಲ್ಲೂ ತರಕಾರಿಗಳನ್ನು ಹೆಚ್ಚು ದಿನ ಇಡಬಾರದು. ಪಾತ್ರೆ ಮುಚ್ಚಿ ತರಕಾರಿಗಳನ್ನು ಬೇಯಿಸಬೇಕು.  ಇಲ್ಲವೇ ಕುಕ್ಕರ ಉಪಯೋಗಿಸಬೇಕು. ಮಕ್ಕಳಿಗೆ ತಿನ್ನಲು ಹೆಚ್ಚು ತರಕಾರಿಗಳನ್ನು ಕೊಡಬೇಕು. ಋತುಮಾನಗಳಲ್ಲಿ ಸಿಗುವ
ತರಕಾರಿಗಳನ್ನು ಹೆಚ್ಚು ಉಪಯೋಗಿಸಬೇಕು. ಸೊಪ್ಪು ತರಕಾರಿಗಳು ತೋಟ, ಗದ್ದೆಗಳಲ್ಲಿ ಬೆಳೆಯುತ್ತವೆ. ಕೆಲವಂತೂ ಭೂಮಿಗೆ ತಾಗಿಕೊಂಡೇ ಬೆಳೆಯುತ್ತವೆ. ತರಕಾರಿ ಗಿಡಗಳಿಗೆ ಹೆಚ್ಚಾಗಿ ಕೀಟನಾಶಕಗಳನ್ನು ಬಳಸುತ್ತಾರೆ. ಇನ್ನು ಕೆಲವರು ತರಕಾರಿಗಳನ್ನು ಬೆಳೆಸಲು ಚರಂಡಿ ನೀರನ್ನು ಬಳಸುತ್ತಾರೆ. ಸಾವಯವ ರಸಗೊಬ್ಬರ ಬಳಸಿದರೆ ಉತ್ತಮ ಫಸಲು ಸಿಗದೆಂಬ ಭಾವನೆ ಹೆಚ್ಚಿನ ರೈತರಲ್ಲಿದೆ. ಹಾಗಂತ ಸಾವಯವ ಗೊಬ್ಬರ ಬಳಸಿ ಬೆಳೆಸುವ ತರಕಾರಿಗಳು ಮಾರುಕಟ್ಟೆಯಲ್ಲಿ ಇಲ್ಲವೆಂದಲ್ಲ..ಅದು  ಇವೆಯಾದರೂ ದುಬಾರಿ ಎಂದುಕೊಂಡು ನಮಗೆ ಅಗ್ಗದಲ್ಲಿ ಸಿಗುವ ತರಕಾರಿಗಳನ್ನು ಮಾರುಕಟ್ಟೆಯಿಂದ ತೆಗೆದುಕೊಂಡು ಬರುತ್ತೇವೆ. ಹಾಗಾಗಿ ಇಂತಹ  ತರಕಾರಿಗಳನ್ನು ನೇರವಾಗಿ ತಿಂದರೆ ನಮಗೆ  ವಾಂತಿ-ಭೇದಿ, ಟೈಫಾಯಿಡ್, ಜಾಂಡೀಸ್, ಜಂತುಹುಳ ಮುಂತಾದ ಹಲವಾರು ರೋಗಗಳು ಬರಬಹುದು. ಆದುದರಿಂದ ತರಕಾರಿಗಳನ್ನು ಬಳಸುವ ಮುನ್ನ ನೀರಿನಲ್ಲಿ 2,3 ಬಾರಿ ಚೆನ್ನಾಗಿ ತೊಳೆದು ಬಳಸುವುದು ಉತ್ತಮ. ತರಕಾರಿಗಳನ್ನು ಹಸಿಯಾಗಿಯೇ ತಿನ್ನುವಾಗ , ಸಲಾಡ್ ಗಳನ್ನು ಉಪಯೋಗಿಸುವಾಗ ಸ್ವಚ್ಛತೆಗೆ ಕೊಡುವ ಗಮನವೇ ನಮ್ಮ ಸ್ವಾಸ್ಥ್ಯ ವನ್ನು ಕಾಪಾಡುತ್ತದೆ. ಈಗಂತೂ ಕೊರೋನಾ ಎಂಬ ಮಹಾಮಾರಿ ಗೆ ಬೆಚ್ಚಿ ಬಿದ್ದು ತರಕಾರಿಗಳನ್ನು ಹಣ್ಣು ಸೊಪ್ಪುಗಳನ್ನು ಮನೆಗೆ ತರುತ್ತಿದಂತೆ ಅವನ್ನು ತೊಳೆದಿಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇವೆ ಅಲ್ಲವೇ….!!!
 
Viral video advises washing fruit and vegetables with soap. Here's ...
 
ಹೀಗೆ ದೈನಂದಿನ ಆಹಾರವಾಗಿ ಬಳಸುವ ತರಕಾರಿ ಮತ್ತು ಹಣ್ಣುಗಳನ್ನು  ಸಸ್ಯಹಾರ ಎನ್ನುತ್ತೇವೆ. ಹಣ್ಣುಗಳನ್ನು ಹೆಚ್ಚಾಗಿ ಹಸಿಯಾಗಿ ಮತ್ತು ಕೆಲವು ತರಕಾರಿಗಳನ್ನು ಹಸಿಯಾಗಿಯೂ ಇನ್ನು ಕೆಲವು ತರಕಾರಿಗಳನ್ನು ಬೇಯಿಸಿಯೂ ತಿನ್ನುವ ನಾವು ಈ ತರಕಾರಿಗಳಲ್ಲಿ ಯಾವ ಪೋಷಕಾಂಶಗಳಿವೆ ಎಂಬುದನ್ನು ಅರಿತು ಸೇವಿಸಿದರೆ ನಮ್ಮ ಆರೋಗ್ಯ ಕಾಪಾಡುವಲ್ಲಿ  ಸಹಾಯಕ ಅಲ್ಲವೇ…
 
ಅದಕ್ಕಾಗಿ ಮನಮನದ ಮಾತು ಭಂಡಾರಿ ವಾರ್ತೆ ಯಲ್ಲಿ ಪ್ರತಿ ವಾರ ಸಂಚಿಕೆ ಮೂಲಕ  ಆಹಾರಕ್ಕೆ ಉಪಯೋಗಿಸುವ  ತರಕಾರಿ ಹಾಗೂ ಹಣ್ಣುಗಳ ಮಹತ್ವವನ್ನು ನಿಮಗೆ ತಿಳಿಸುವ ಸಣ್ಣ ಪ್ರಯತ್ನ.
 
ಇಂದಿನ ಸಂಚಿಕೆಯಲ್ಲಿ ಹಾಗಲಕಾಯಿಯ ಆಹಾರ ಮತ್ತು ವಿಚಾರ ತಿಳಿಯೋಣ…
 

ಹಾಗಲಕಾಯಿ:

Trothic High Yield Hybrid Rare Bitter Gourd/Bitter melon Vegetable ...

 
ಹಾಗಲಕಾಯಿ ಎಂದಾಕ್ಷಣ ಮೂಗು ಮುರಿಯುವವರೆ ಹೆಚ್ಚು. ಯಾಕೆಂದರೆ ಆ ಹೆಸರು ಹೇಳಿದಾಗ ನೆನಪಿಗೆ ಬರೋದು ಕಹಿ ರುಚಿ ಹೊಂದಿರುವ ತರಕಾರಿ. ಇದು Cucurbitaceae ಕುಟುಂಬಕ್ಕೆ ಸೇರಿದೆ. ಸುಮಾರು 23 ಜಾತಿಗಳನ್ನೊಳಗೊಂಡ ಹಾಗಲಕಾಯಿಯನ್ನು ‘ಕಾರವೇಲ್ಲಕ’ ಎಂದು ಸಂಸ್ಕೃತದಲ್ಲಿ ಕರೆದರೆ ‘Bitter gourd’ ಎಂಬ ಆಂಗ್ಲ ಭಾಷೆಯ ಹೆಸರು ಹೊಂದಿದೆ. ಹಾಗಲಕಾಯಿ  ಬೀಜ ಬಿತ್ತಿ ಗಿಡವಾದ ಮೇಲೆ 2 ತಿಂಗಳಲ್ಲಿ ಕಾಯಿ ಬೆಳೆಯುತ್ತದೆ. ಈ ಗಿಡ ಎಲ್ಲ ಕಾಲದಲ್ಲೂ ಸುಲಭವಾಗಿ ಬೆಳೆಯುವ ಬಳ್ಳಿಯಾದರೂ ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲಿ ಬೀಜ ಬಿತ್ತಲಾಗುತ್ತದೆ. ಇದರ ಎಲೆ ಮತ್ತು ಕಾಯಿಯನ್ನು ಹಲವಾರು ವಿಧದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ.
        
Health benefits of bitter gourd, 5 reasons why it must be in your ...
 
               ಇಷ್ಟೆ ಅಲ್ಲದೆ ನಮ್ಮ ಗೃಹಿಣಿಯರ ನಳಪಾಕದಲ್ಲೂ ಇದಕ್ಕೆ  ವಿಶೇಷ ಸ್ಥಾನವಿದೆ. ಹಾಗಲಕಾಯಿ ಪಲ್ಯ ಗೊಜ್ಜು ಉಪ್ಪಿನಕಾಯಿ ಹೀಗೆ ವಿವಿಧ ರೀತಿಯಲ್ಲಿ ಕಾಯಿಪಲ್ಲೆಯಾಗಿ ಬಳಸುವ ತರಕಾರಿಯೂ ಹೌದು.
    ಆಯುರ್ವೇದದ ಪ್ರಕಾರ ಇದು ಕಹಿರಸ ಪ್ರಧಾನವಾಗಿದ್ದು ಶೀತಲಗುಣ ಹೊಂದಿದೆ. ಇದರಲ್ಲಿ ಕ್ಯಾರೋಟಿನ್ ಗ್ಲೈಕೋಸೈಡ್ ಗಳು ಹಾಗೂ ಆವಿಯಾಗುವಂತಹ ತೈಲಾಂಶ ಗಳಿವೆ. ಇದರ ಬೀಜದಲ್ಲಿ 32 ಪ್ರತಿಶತ ವಿರೇಚನಕಾರಕ ತೈಲಾಂಶವಿದೆ. ಅಂತೆಯೇ ಹಾಗಲಕಾಯಿಯಲ್ಲಿ ಸಪೊನಿನ್ ಹಾಗೂ ಮೆಮೊರಿಡಿಸಿನ್ ಎಂಬ ಆಲ್ಕಲಾಯ್ಡ್ಗಳೂ ಇವೆ ಹಾಗೂ ಇದರ ಕಾಯಿಯಲ್ಲಿ ವಿಟಮಿನ್ ಎ ಹಾಗೂ ಸಿ ಇದೆ.
       ಇದು ಮಲವಿಸರ್ಜನಕಾರಿ, ಕೆಮ್ಮು, ವಾಯು, ಜ್ವರಗಳ ನಿವಾರಕ, ರಕ್ತವನ್ನು ಶುದ್ಧಿಗೊಳಿಸುವುದು, ಹುಳಬಾಧೆ ನಿಯಂತ್ರಿಸಲು ಸಹಾಯಕ, ಅಲ್ಸರ್ ನಿವಾರಕ, ಮೂತ್ರದ ಕಲ್ಲುಗಳನ್ನು ಕರಗಿಸುವುದು ಮತ್ತು ಸೋರಿಯಾಸಿಸ್ ಎಂಬ ಚರ್ಮರೋಗವನ್ನು ನಿವಾರಿಸುವ ಗುಣವನ್ನು ಹೊಂದಿದೆ. ಮಧುಮೇಹಿಗಳಿಗೆ ಬಹಳ ಉತ್ತಮ ತರಕಾರಿಗಳಲ್ಲಿ ಹಾಗಲಕಾಯಿ ಒಂದು.
  
ಉಪಯೋಗ:
 
* ಮಕ್ಕಳಲ್ಲಿ ಕಫ ಉಂಟದಾಗ ಹಾಗಲದ ಎಲೆಗೆ ಜೇನು ಲೇಪಿಸಿ , ಮಗುವಿನ ಬಾಯಲ್ಲಿ ಇರಿಸಿದರೆ ಕಫ ಕರಗುತ್ತದೆ.
 
* ಹಾಗಲಕಾಯಿಯ ರಸಕ್ಕೆ ತುಪ್ಪ ಬೆರೆಸಿ ಬಾಯಿಹುಣ್ಣು, ನಾಲಿಗೆ ಹುಣ್ಣಿಗೆ ಲೇಪಿಸದರೆ ಗುಣಕಾರಿ.
 
*ಹಾಗಲಕಾಯಿ ಯ ಎಲೆಯ ರಸ 3-4ಚಮಚ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಜಂತು ಹುಳುಗಳು ನಿವಾರಣೆಯಾಗುತ್ತದೆ.
 
* ಹಾಗಲಕಾಯಿ ಯ ಎಲೆಯ ರಸ ಸೇವಿಸಿದರೆ (1-2ಚಮಚ) ಹಸಿವು ಹೆಚ್ಚುತ್ತದೆ ಜೀರ್ಣಶಕ್ತಿ ವರ್ಧಕ.

* ಕಾಲರಾ ರೋಗದ ಆರಂಭದಲ್ಲಿ 2 ಚಮಚ ಹಾಗಲದೆಲೆಯ ರಸ ಅಷ್ಟೇ ಪ್ರಮಾಣದ ನೀರುಳ್ಳಿ ರಸ 1ಚಮಚ ಲಿಂಬೆ ರಸವನ್ನು ಮಿಶ್ರ ಮಾಡಿ ಸೇವಿಸಿದರೆ ಪರಿಣಾಮಕಾರಿ.
 
ಹೀಗೆ ಹತ್ತು ಹಲವು ರೀತಿಯಲ್ಲಿ ಉಪಯೋಗವಾಗುವ ಹಾಗಲಕಾಯಿ ಕಹಿಯಾದರೂ  ನಮ್ಮ ಆರೋಗ್ಯಕ್ಕೆ ಸಿಹಿಯಾದ ದಿವ್ಯ ಔಷಧ.  ಉತ್ತಮ ತರಕಾರಿಯೂ ಹೌದು.
 
                                                                                                      ( ….ಮುಂದುವರೆಯುವುದು)
 
 
-ಸುಪ್ರೀತ ಭಂಡಾರಿ ಸೂರಿಂಜೆ
 

Leave a Reply

Your email address will not be published. Required fields are marked *