September 20, 2024

ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..ಪವನ್ ನ ಅಮ್ಮ ಪದ್ಮಜಾ ಬಳಿ ಮದುವೆ ಆಗಿ ಮಗು ಇದ್ದು ಗಂಡ ತೀರಿ ಕೊಂಡ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳುತ್ತಾನೆ. ಅಮ್ಮ ಯಾರಿಗೆ ಎಂದಾಗ ನೀವು ಮೊದಲು ಉತ್ತರ ಹೇಳಿ ಎಂದು ಹಟ ಮಾಡುತ್ತಾನೆ…ಈ ಬಗ್ಗೆ ಪದ್ಮಜಾ ಳಿಗೆ ತುಂಬಾ ಚಿಂತೆ ಶುರುವಾಗುತ್ತದೆ…..ಭವಾನಿ ನೀಡಿದ ಡೈರಿ ನೆನಪಾಗಿ ಪದ್ಮಜಾ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ.. ಡೈರಿ ಶಮಿಕಾ ಓದಿದರೆ ಅಥವಾ ಬೇರೆಯವರು ಓದಿದರೆ ಅದು ಅವರ ಮುಂದಿನ ಜೀವನಕ್ಕೆ ಹಾನಿ ಆಗಬಹುದು ಎಂದು ಪವನ್ ಹೇಳುತ್ತಾನೆ….ತಾಯಿ ಪದ್ಮಜಾಳನು ಪವನ್ ಭವಾನಿಯ ಮನೆಗೆ ತಲುಪಿಸಿ ತಾನು ತೋಟದ ಕಡೆ ಹೋಗುತ್ತಾನೆ… ಪದ್ಮಜಾ ಪವನ್ ಮದುವೆ ಆದ ಹೆಣ್ಣಿನ ಬಗ್ಗೆ ವಿಚಾರಿಸಿರುವ ಬಗ್ಗೆ ಭವಾನಿ ಯಲ್ಲಿ ಹೇಳಿ ಅವಳಿಂದ ಎನಾದರೂ ಸಲಹೆ ಸಿಗಬಹುದು ಎಂದು ಆ ವಿಷಯದ ಚರ್ಚೆ ಮಾಡುತ್ತಾರೆ……

ಅಂತರಾಳ – ಭಾಗ 22

ಭವಾನಿ ಹೇಳಿದ ಎಲ್ಲ ಮಾತುಗಳನ್ನು ಕೇಳಿಸಿಕೊಂಡ ಪದ್ಮಜಾ ಸಲಹೆ ಯಾರು ಬೇಕಾದರೂ ನೀಡಬಹುದು ಭವಾನಿ ಆದರೆ ಅದನು ಪಾಲಿಸುವವರು ಬೇಕಲ್ಲ!! ವೇದಿಕೆ ಮೇಲೆ ಜನ ನಾಯಕರು, ಅಧಿಕಾರಿಗಳು ಜಾತಿ ತೊಲಗಬೇಕು ಎಂದು ತುಂಬಾ ರಸವತ್ತಾಗಿ ವರ್ಣಿಸುತ್ತಾರೆ. ನಿಜ ಜೀವನದಲ್ಲಿ ಅವರಷ್ಟು ಜಾತಿಗೆ ಒತ್ತು ನೀಡುವವರು ಯಾರೂ ಇಲ್ಲ. ಮದುವೆ ಆಗದೆ ಇರುವ ಹೆಣ್ಣಿಗೆ ಕುಂದು ಕೊರತೆಗಳು ಇರುವಾಗ ಮದುವೆ ಆಗಿ ಮಗು ಇದ್ದು ಆ ಹೆಣ್ಣನ್ನು ಮದುವೆ ಆಗುವಂತಹ ಕುರೂಪಿ ಪವನ್ ಅಲ್ಲ… ಅವನಿಗೆ ಅವನ ರೂಪ, ವಿದ್ಯೆ, ಗುಣ, ಹಣಕಾಸು, ಕೆಲಸ ನೋಡಿದರೆ ಯಾವ ಹೆಣ್ಣು ಬೇಡ ಎಂದು ಹೇಳಲು ಸಾಧ್ಯವಿಲ್ಲ ಭವಾನಿ…… ವಿಧವೆ ಹೆಣ್ಣನ್ನು ಮದುವೆ ಆಗುವುದು, ಗಂಡ ಬಿಟ್ಟು ಹೋದ ಹೆಣ್ಣನ್ನು ಮದುವೆ ಆಗುವುದು ಇದೆಲ್ಲ ಬೇರೆಯವರಿಗೆ ಹೇಳಲು ಹಾಗೂ ನಮಗೆ ಕೇಳಲು ಹಿತವಾಗಿರುತ್ತದೆ…. ಆದರೆ ಇದು ನಮ್ಮ ಮನೆಯ ಮಗನಿಗೆ ಮಾಡುವ ಇಚ್ಛೆ ಆಸಕ್ತಿ ಯಾರಿಗೂ ಇರುವುದಿಲ್ಲ ಹಾಗೂ ಯಾಕೆ ಇರಬೇಕು ಹೇಳು? ಯಾರದೋ ಮಗುವಿಗೆ ನಾವು ಯಾಕೆ ಅಪ್ಪ ಅಥವಾ ಅಜ್ಜಿ ಆಗಬೇಕು!! ಹೆಣ್ಣೇ ಸಿಗದ ಸಮಯಕ್ಕೆ ನೊಡೋಣ ….. ಅಲ್ಲದೆ ಪವನ್ ಗೆ ಈ ವಿಷಯದಲ್ಲಿ ಅನುಭವ ಕಡಿಮೆ ಅವನು ಇಂತಹಾ ಹೆಣ್ಣನ್ನು ಮದುವೆ ಆದರೆ ಗೆಳೆಯರ ಜೊತೆ ಸೇರುವಾಗ ಅವನೇ ಮುಜುಗರ ಅನುಭವಿಸಬೇಕಾಗುತ್ತದೆ….. ಮದುವೆ ಆದ ಮೇಲೆ ಯೋಚಿಸುವುದಕ್ಕಿಂತ ಮೊದಲೇ ಯೋಚಿಸಿದರೆ ಉತ್ತಮ ಅಲ್ವಾ ಭವಾನಿ… ಅಷ್ಟಕ್ಕೂ ಅವನ ಮನಸ್ಸನ್ನು ಹಾಳು ಮಾಡಿದ ಹೆಣ್ಣು ಯಾರಾಗಿರಬಹುದು… ಗೊತ್ತಾದರೆ ಅವಳನ್ನು ಕರೆದು ಬುದ್ಧಿ ಹೇಳಬಹುದಿತ್ತು!! ತುಂಬಾ ಆವೇಶದಿಂದ ಮಾತು ಮುಗಿಸಿ ಭವಾನಿಯ ಮುಖ ನೋಡಿದಳು.
ಪದ್ಮಜಾ ಹೇಳಿದ ಮಾತು ಭವಾನಿ ತಾಳ್ಮೆಯಿಂದ ಆಲಿಸಿದಳು… ತುಂಬಾ ತಗ್ಗಿದ ಸ್ವರದಲ್ಲಿ ಹೆಣ್ಣಿನ ಬಗ್ಗೆ ಹೆಣ್ಣೇ ಅರ್ಥಮಾಡಿಕೊಳ್ಳದಿದ್ದರೆ ಹೇಗೆ ಪದ್ಮಜಾ!! ನೀನು ಹೇಳುವುದು ಸರಿ ಭಾಷಣ ಮಾಡುವಾಗ ಜನ ಸೇವೆಯೇ ಜನಾರ್ದನನ ಸೇವೆ ಎನ್ನುತ್ತಾರೆ… ಬೇರೆಯವರಿಗೆ ದಾನ ಧರ್ಮ ಮಾಡಿದರೆ ದೇವರು ಮೆಚ್ಚುತ್ತಾರೆ ಎಂದು ಹೇಳುತ್ತಾರೆ ಪರಸ್ತ್ರೀಯನ್ನು ತಾಯಿಯಂತೆ ಕಾಣು ಎನ್ನುತ್ತಾರೆ. ಅಬಲೆ ಹೆಣ್ಣಿಗೆ ಸಾಧ್ಯವಾದರೆ ಬಾಳು ನೀಡು ಎನ್ನುತ್ತಾರೆ… ಎಲ್ಲ ಬೇರೆಯವರಿಗೆ…. ತಾವು ತಪ್ಪಿಯೂ ತಾವು ಹೇಳಿದ ಮಾತನ್ನು ಪಾಲಿಸುವುದಿಲ್ಲ, ತಮ್ಮ ಮಕ್ಕಳನ್ನು ಅದರಂತೆ ಪಾಲಿಸಲು ಒಪ್ಪುವುದಿಲ್ಲ…… ಆದರೆ ಯಾರೂ ಮಾಡುವುದಿಲ್ಲ ಎಂದು ನಾವು ಯಾಕೆ ಅವರಂತೆ ಇರಬೇಕು!! ನಮ್ಮ ಸ್ವಂತಿಕೆ ನಮ್ಮಲ್ಲಿ ಇರುತ್ತದೆ ತಾನೇ….. ನಾವು ಯಾರೂ ನಮಗಾಗಿ ಬದುಕುವುದಿಲ್ಲ…….. ಎಲ್ಲ ಬೇರೆಯವರಿಗೆ ಬೇಕಾಗಿ ಇರುವುದು…. ನೆರೆಹೊರೆಯವರು ಏನು ಹೇಳುತ್ತಾರೋ…. ಸಂಬಂಧಿಕರು ಏನು ಹೇಳುತ್ತಾರೋ ಎಂದು ಕೊಂಡು ಜೀವನ ನಡೆಸುತ್ತೇವೆ..‌ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಕೂಡ ನೆರೆಮನೆ ಅಥವಾ ಸಂಬಂಧಿಕರು ಓದಿಸುವ ಶಾಲೆಗಿಂತ ಹೆಚ್ಚು ಹೆಸರು ಗಳಿಸಿ ಹೆಚ್ಚು ಫೀಸು ಕೊಡುವ ಶಾಲೆ ಹುಡುಕುತ್ತಾರೆ… ಮದುವೆ, ಹುಟ್ಟು ಹಬ್ಬ, ಉತ್ತರ ಕ್ರಿಯೆ, ಸೀಮಂತ,ಕೋಲ,ನೇಮ, ಯಕ್ಷಗಾನ ಹೀಗೆ ಯಾವುದೇ ಕಾರ್ಯಕ್ರಮ ಮಾಡಲಿ ಅವರಿಗಿಂತ ನಮ್ಮದು ಹೆಚ್ಚು ಆಗಬೇಕು ಆಡಂಬರ ಜಾಸ್ತಿ ತೋರಿಸಬೇಕು ಎಂದೇ ಎಲ್ಲರ ಬಯಕೆ ಹಾಗಿರುವಾಗ ಇಂತಹ ಸಮಾಜ ಮುಖಿ ಕೆಲಸಗಳಲ್ಲಿ ಮಾತ್ರ ಹೆಚ್ಚುಗಾರಿಕೆ ಯಾರಿಗೂ ಬೇಕಾಗಿಲ್ಲ ಯಾಕೆ?
ನನಗೆ ಹೆಚ್ಚುಗಾರಿಕೆಯು ಬೇಡ ಯಾರ ಪ್ರಶಂಸೆಯು ಬೇಕಾಗಿಲ್ಲ ಭವಾನಿ… ನಿನ್ನ ಮಗಳು ಶಮಿಕಾ ಆದರೆ ನನಗೂ ಸಂತೋಷ ‌.‌.ನಾನು ಖಂಡಿತಾ ಒಪ್ಪಿಕೊಳ್ಳುತ್ತೇನೆ….ಬೇರೆ ಹುಡುಗಿಯನ್ನು ಪವನ್ ಗೆ ಅದರಲ್ಲೂ ಮದುವೆ ಆದ ಹುಡುಗಿ ಖಂಡಿತಾ ಬೇಡ..

ನಾವು ಬೇಡ ಎಂದು ಹೇಳಲು ಸಾದ್ಯವೇ ಪದ್ಮಜಾ? ನೀನು ಇಷ್ಟು ಖಡಾ ಖಂಡಿತವಾಗಿ ಬೇಡ ಅಂದರೆ ಪವನ್ ಕೂಡ ಹಟ ಹಿಡಿದರೆ ಆಗಿಯೇ ಆಗುತ್ತೇನೆ ಎಂದರೆ ಏನಾಗಬಹುದು! ನಿಮ್ಮಿಬ್ಬರ ಮಧ್ಯೆ ಕಂದಕವೇ ಆಗುತ್ತದೆ ಅಲ್ವಾ ಅದರಿಂದ ನಾವು ಏನನ್ನು ಸಾಧಿಸಿದಂತಾಗುತ್ತದೆ? ಎರಡು ಕಡೆಯಿಂದ ಎಳೆದರೆ ಸಂಬಂಧದ ಕೊಂಡಿ ತುಂಡಾಗುತ್ತದೆ ಅಲ್ವಾ? ಯಾರಾದರೂ ಒಬ್ಬರು ಅಥವಾ ಒಂದು ಗುಂಪು ಯಾವುದೇ ವಾದ, ಜಗಳ ಸಂಘರ್ಷ ನಡೆದಾಗ ತಗ್ಗಲೇ ಬೇಕಾಗುತ್ತದೆ ….. ನಮ್ಮದೇ ಗೆಲ್ಲಬೇಕು ಎಂದು ಹೊರಟಾಗ ಸಂಬಂಧ ಸಾಯುತ್ತದೆ…… ಮನಸ್ಸು ಮನಸ್ಸಿನ ನಡುವೆ ಇದ್ದಂತ ನಂಬಿಕೆ ಒಮ್ಮೆ ಕಳೆದುಹೋದರೆ ಮಗದೊಮ್ಮೆ ತರುವುದು ತುಂಬಾ ದುಬಾರಿ ಪದ್ಮಜಾ !!ಕೂಲಂಕುಷವಾಗಿ ಆಲೋಚನೆ ಮಾಡು ಇದರಿಂದ ನಮಗೆ ಏನು ನಷ್ಟ ಇದೆ …… ಅದಕ್ಕಿಂತ ಮುಂಚೆ ಪವನ್ ಮದುವೆ ಆದ ಹೆಣ್ಣಿನ ಮೇಲೆ ಪ್ರೀತಿ ಇಟ್ಟು ಕೊಂಡಿದ್ದಾನ ಅಥವಾ ಬೇರೆಯವರಿಗಾಗಿ ಅವನು ನಿನ್ನಲ್ಲಿ ಕೇಳಿರಬಹುದೇ ಎಂದು…… ಅವನು ಪುನಃ ಕೇಳಿದರೆ ಮದುವೆ ಆಗುವುದು ತಪ್ಪು ಅಲ್ಲ ….. ನೀನು ಆಗುವುದಾದರೆ ನಾನು ಹೆಣ್ಣನ್ನು ನೋಡಿ ಹೇಳುತ್ತೇನೆ ಎಂದು ಹೇಳು… ನೀನಾಗಿ ಬೇಡ ಎಂದು ಹಠ ಮಾಡಬೇಡ…ನಿನಗೆ ಪವನ್ ಜೀವ ತಾನೇ!! ನೀನಾಗಿ ಅವನ ಪ್ರೀತಿಯನ್ನು ಕಳೆದುಕೊಳ್ಳಬೇಡ ನೀನು ಪ್ರೀತಿ ಮಾಡಿದಷ್ಟೇ ನಿನ್ನನ್ನು ಅವನು ಪ್ರೀತಿ ಮಾಡುತ್ತಾನೆ…. ಹಾಗಿರುವಾಗ ಅವನ ಪ್ರೀತಿಗೆ ಗೌರವ ಕೊಡು ಮೊದಲು….. ನೀನು ಇಷ್ಟು ಆದರ್ಶವಾದಿ ಆಗಿರುವುದರಿಂದ ನಿನ್ನ ಅಕ್ಕನ ಮಕ್ಕಳಿಗೆ ಅಮ್ಮ ಇಲ್ಲದೆ ಕಷ್ಟ ಆಗಬಾರದು ಎಂದು ನೀನು ಮದುವೆ ಆಗಿಲ್ಲ ಹಾಗಿರುವಾಗ ನಿನ್ನ ಆದರ್ಶ ಗುಣ ನಿನ್ನ ಮಗನಿಗೆ ಬಂದಿರಬಹುದಲ್ಲವೇ!!! ಯೋಚಿಸು ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡ ….. ನೀನು ಪವನ್ ಇಬ್ಬರು ಪರಸ್ಪರ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ…. ಯಾವುದೇ ಕಷ್ಟ ಅಥವಾ ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಆದರೆ ಸಿಟ್ಟಿನಿಂದ ಆತುರದ ನಿರ್ಧಾರ ಕೈಗೊಂಡು ಮತ್ತೆ ಪಶ್ಚಾತ್ತಾಪ  ಪಡುವಂತಾಗಬಾರದು. ಪವನ್ ನಿನ್ನನ್ನು ಬಿಟ್ಟು ಹೋದರೆ ನಿನಗೂ ಅದನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲ! ಅವನಿಗೂ ಬದುಕಿನಲ್ಲಿ ನೆಮ್ಮದಿ ಇರೋದಿಲ್ಲ!! ಹಾಗಾಗಿ ನೀನು ತಾಳ್ಮೆಯಿಂದ ಅವನ ನಿರ್ಧಾರ ಏನು ಎಂದು ಕೇಳಿ ಮುಂದಿನ ಹೆಜ್ಜೆ ಇಡುವುದು ಉತ್ತಮ ಪದ್ಮಜಾ…………. ಪವನ್ ಶಮಿಕಾಳನು ಮದುವೆ ಆಗುವುದು ಎಂದಾದರೆ ಶಮಿಕಾ ತುಂಬಾ ಅದೃಷ್ಟವಂತಳು ಎಂದು ನಾನು ಸಂತೋಷ ಪಡುತ್ತೇನೆ…. ಆದರೆ ಜೀವನ ಮಾಡುವವರು ಅವರು ಹಾಗಿರುವಾಗ ಅವರ ಒಪ್ಪಿಗೆ ಮುಖ್ಯ….. ಕಾಲ ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಬರುತ್ತದೆ ಇದನ್ನು ಮೊದಲು ಹೇಳಿದ್ದೆ ಈಗ ಹೇಳುವುದು ನಾನು ಅದನ್ನೇ ಎಂದು ಮಾತು ನಿಲ್ಲಿಸಿದಳು ಭವಾನಿ……….
ಭವಾನಿ ಹೇಳಿದ ಪ್ರತಿ ಮಾತು ತುಂಬಾ ತೂಕದ ಮಾತು ಎಂದು ಪದ್ಮಜಾಳಿಗೆ ಅನ್ನಿಸಿತು……. ಹಾಗೂ ಹೌದಲ್ಲ ನಾನು ಇಷ್ಟು ಮುಂದೆ ಯೋಚನೆಯೇ ಮಾಡಿಲ್ಲ ಪವನ್ ನನ್ನನ್ನು ಬಿಟ್ಟು ಹೋದರೆ ನನಗೆ ಸಹಿಸಿ ಕೊಳ್ಳುವುದು ಸಾಧ್ಯನಾ!!!! ಕನಸಲ್ಲೂ ನಾನು ಹಾಗೆ ಯೋಚಿಸಲಾರೆ….. ಭವಾನಿ ನೀನು ನನ್ನ ಕಣ್ಣು ತೆರೆಸಿದೆ… ಮನಸಿನಲ್ಲಿ ಅಹಂಕಾರ ಎಂಬುದು ಇತ್ತು ಅದರಿಂದ ನಾನು ಮುಂದಿನ ಪರಿಣಾಮ ಯೋಚನೆ ಮಾಡಿರಲಿಲ್ಲ.. ನೀನು ಬಿಡಿಯಾಗಿ ಹೇಳಿದಾಗ ಹೌದು ನಾನು ಹಟ ಮಾಡಿದರೆ ಅವನು ಹಟ ಮಾಡಿ ಜೀವನ ಬೇರೆ ನಡೆಸಿದರೆ ಅಥವಾ ನೊಂದು ಜೀವಕ್ಕೆ ಎನಾದರೂ ಅನಾಹುತ ಮಾಡಿಕೊಂಡರೆ !!!! ಎರಡರಲ್ಲಿ ಯಾವುದು ನಡೆದರೂ ಅದರಿಂದ ಪೆಟ್ಟು ನಾನು ತಿನ್ನಬೇಕಾಗುತ್ತದೆ…. ನನ್ನ ಕಣ್ಣೆದುರು ಅವನು ಸಂತೋಷವಾಗಿ ಜೀವನ ನಡೆಸಿದರೆ ಅದುವೇ ನನಗೆ ಜನ್ಮ ಸಾರ್ಥಕವಾಗುತ್ತದೆ….. ಅದಕ್ಕೆ ನೋಡು ಜೀವನದಲ್ಲಿ ಹೆಣ್ಣು ಆಗಲಿ ಗಂಡು ಆಗಲಿ ಅವರಿಗೆ ಗೆಳೆಯ ಅಥವಾ ಗೆಳತಿ ಬೇಕು ಎಂದು ಹೇಳುವುದು. ನೀನು ಹೇಳದಿದ್ದರೆ ನಾನು ಎನಾದರೂ ಎಡವಟ್ಟು ಮಾಡಿಕೊಳ್ಳುತ್ತಿದ್ದೆ….. ನಿನ್ನಿಂದ ನನಗೆ ತುಂಬಾ ಉಪಕಾರವಾಯಿತು…….. ನಾನು ಬಂದು ತುಂಬಾ ಸಮಯ ಆಯಿತು ನಾನು ಮನೆಗೆ ಹೋಗುತ್ತೇನೆ ಎಂದು ಪದ್ಮಜಾ ಹೇಳಿ ಆಟೋ ರಿಕ್ಷಾದಲ್ಲಿ ಮನೆಗೆ ಹೋದರು….

ಪದ್ಮಜಾ ಹೋದ ಮೇಲೆ ಭವಾನಿಗೆ ಪವನ್ ನಿಜವಾಗಿಯೂ ಆರತಿಯನ್ನು ಪ್ರೀತಿ ಮಾಡಿರಬಹುದೇ…. ಹೌದಾದರೆ ಆರತಿ ಮದುವೆಗೆ ಒಪ್ಪಿಕೊಳ್ಳುತ್ತಾಳ ಎಂದು ತಲೆಯಲ್ಲಿ ಅದೇ ಯೋಚನೆ ಬಂದವು….

ಸಂಜೆ ಶಮಿಕಾ ಕಾಲೇಜಿನಿಂದ ಬಂದ ಮೇಲೆ ಭವಾನಿ ಪದ್ಮಜಾ ಮತ್ತು ತನ್ನ ನಡುವೆ ನಡೆದ ಎಲ್ಲಾ ಮಾತುಕತೆಗಳನ್ನು ಸವಿಸ್ತಾರವಾಗಿ ತಿಳಿಸಿದರು… ಅದಕ್ಕೆ ಶಮಿಕಾ ಪವನ್ ನ ಮದುವೆ ಆಗುವ ನಿರ್ಧಾರಕ್ಕೆ ಆರತಿ ಒಪ್ಪುತ್ತಾಳ ಎಂದು ಗೊತ್ತಿಲ್ಲ ಅಮ್ಮ… ಅಲ್ಲದೆ ಅವಳ ಮಗು ಪ್ರೀತಿ ಕೂಡ ಇರುವುದರಿಂದ ನನಗೆ ಎನು ಹೇಳುತ್ತಾಳೆ ಎಂದೇ ತಿಳಿಯುತ್ತಿಲ್ಲ? ಅವರಿಬ್ಬರೂ ಮದುವೆ ಆದರೆ ನನಗೆ ತುಂಬಾ ಖುಷಿ ಕಾರಣ ಆರತಿ ಒಂಟಿಯಾಗಿ ಆ ಮಗುವನ್ನು ಸಾಕಲು ತುಂಬಾ ಕಷ್ಟ ಅಪ್ಪ ಅಮ್ಮ ಕೂಡ ಅವಳಿಗೆ ಇಲ್ಲ…. ಆರತಿ ಮತ್ತು ಪ್ರೀತಿ ಜೀವನ ಒಳ್ಳೆಯದು ಆಗಲಿ ಎಂದು ಇಬ್ಬರೂ ಮಾತನಾಡಿದರು….
( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *