September 20, 2024

ಪುರಾಣಗಳಲ್ಲಿ ಒಂದಾದ ಗರುಡ ಪುರಾಣದಲ್ಲಿ ಶ್ರೀ ಮಹಾವಿಷ್ಣುವು ಗರುಡನಿಗೆ ಈ ರೀತಿ ಹೇಳುತ್ತಾನೆ.
“ವೇದಾಗಮ ಪುರಾಣಜ್ಞಃ ಪರಮಾರ್ಥಂ ನವೇತ್ತಿಯಃ ।
ವಿಡಂಬಕಸ್ಯ ತಸ್ಮೈವ ತತ್ಸರ್ವಂ ಕಾಕಾಭಾಷಿತಂ ॥”

ವೇದ ಆಗಮ ಪುರಾಣಗಳನ್ನು ತಿಳಿದಿದ್ದರೂ ಯಾರು ಅದರ ಪರಮಾರ್ಥ (ವೈಜ್ಞಾನಿಕ ದೃಷ್ಟಿ) ವನ್ನು ತಿಳಿದಿಲ್ಲವೋ ಆ ಬೂಟಾಟಿಕೆಯವನು ತಿಳಿದಿರುವುದೆಲ್ಲವೂ ಕಾಗೆಯ ಮಾತುಗಳಂತೆ.

ಯಾಕೆ ಈ ಸಾಲುಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ ಅಂದರೆ ಯಾವುದೇ ಒಂದು ಆಚರಣೆ ಪರ ಅಥವಾ ವಿರುದ್ಧ ಮಾತನಾಡುವ ಮೊದಲು ಆ ಆಚರಣೆಯ ಪರಮಾರ್ಥವನ್ನು ತಿಳಿದು ಕೊಂಡಿರಬೇಕು.

ನಮ್ಮಲ್ಲಿ ಅಶ್ವತ್ಥವೃಕ್ಷಕ್ಕೆ ‘ವೃಕ್ಷ ರಾಜ’ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ

“ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣಿ, ಅಗ್ರತಃ ಶಿವರೂಪಾಯ ವೃಕ್ಷ ರಾಜಯೀತೇ ನಮಃ”

ಎಂದು ಪೂಜಿಸುವ ವಾಡಿಕೆ ಇದೆ. ಅಂದರೆ ಈ ವೃಕ್ಷದ ಬುಡದಲ್ಲಿ ಬ್ರಹ್ಮ ಮಧ್ಯದಲ್ಲಿ ವಿಷ್ಣು ಕೊನೆಯಲ್ಲಿ ಶಿವಾ ಇದ್ದಾರೆ ಎಂದಾಯಿತು ಅಲ್ಲವೇ ಹಾಗದರೆ ಇದರ ಪರಮಾರ್ಥ ಏನು ಎಂದು ತಿಳಿಯೋಣ..

ನಂಬಿಕೆಯ ಪ್ರಕಾರ ಸೃಷ್ಟಿಗೆ ಬ್ರಹ್ಮನೂ ಸ್ಥಿತಿಗೆ ವಿಷ್ಣುವೂ ಹಾಗೂ ಲಯಕಾರನು ಶಿವನು ಆಗಿರುತ್ತಾನೆ. ಹಾಗೆಯೇ ಈ ಮೂರೂ ಗುಣಗಳು ಈ ವೃಕ್ಷದಲ್ಲಿ ಇದೆ ಹಾಗಾಗಿ ಇದನ್ನು ತ್ರಿಮೂರ್ತಿಗಳ ವಾಸಸ್ಥಾನ ಎನ್ನಲಾಗಿದೆ.

ಆಯುರ್ವೇದ ಶಾಸ್ತ್ರದ ಪ್ರಕಾರ

ಸೃಷ್ಟಿ: ಗರ್ಭಸ್ರಾವವಾಗುವ ಚಿಹ್ನೆ ಕಂಡು ಬಂದರೆ ಅಶ್ವತ್ಥವೃಕ್ಷದ ಬೇರಿನಿಂದ ಔಷಧ ಮಾಡಿ ಕೊಟ್ಟರೆ ಗರ್ಭಸ್ರಾವವಾಗುವುದು ನಿಲ್ಲುತ್ತದೆ. ಅಂದರೆ ಜನನೇಂದ್ರಿಯಗಳ ಮೇಲೆ ಇದರ ಬೇರು ಪ್ರಭಾವ ಬೀರುತ್ತದೆ ಎಂದಾಯಿತು.

ಸ್ಥಿತಿ: ಅಶ್ವತ್ಥವೃಕ್ಷದ ಮರದ ಸಮಿತ್ತು ಹೋಮಗಳಿಗೆ ಉಪಯೋಗಿಸುತ್ತಾರೆ. ಇದರ ಧೂಮ ಸೇವನೆ ಮಾಡುವುದರಿಂದ ಆಯುವೃದ್ಧಿಯಾಗುತ್ತದೆ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ.

ಲಯ: ಈ ಅಶ್ವತ್ಥವೃಕ್ಷದ ಚಿಗುರಿನಿಂದ ಔಷದಿ ಮಾಡಿಕೊಟ್ಟರೆ ಗರ್ಭಸ್ರಾವವಾಗುತ್ತದೆ. ಅಂದರೆ ಈ ವೃಕ್ಷದ ಚಿಗುರಿನಲ್ಲಿ ಗರ್ಭಸ್ರಾವವಾಗಿಸುವ ಗುಣ ಇದೆ.

ಹೀಗೆ ಮೂರು ಗುಣಗಳನ್ನು ಹೊಂದಿರುವ ಈ ವೃಕ್ಷ ನಮ್ಮ ಶಾಸ್ತ್ರದಲ್ಲಿ ಶ್ರೇಷ್ಠವಾಗಿದೆ.

ಧನ್ಯವಾದಗಳು

✍🏻 : ಎಸ್ ಕೆ ಬಂಗಾಡಿ

Leave a Reply

Your email address will not be published. Required fields are marked *