September 20, 2024

ಅವಿನಾಭಾವ -ಭಾಗ -2

ಇಲ್ಲಿಯವರೆಗೆ…..

ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಲು ಬಂದ ಡಾಕ್ಟರ್ ಆಕಾಶ್ ಆ ಮಹಿಳೆಯನ್ನು ನೋಡಿ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಇರುತ್ತಾನೆ….

 

 

ಅಮ್ಮ ಅಪ್ಪ ಇಬ್ಬರು ಚಿನ್ನ ದುಡ್ಡು ಎಂದು ತಮ್ಮ ದೊಡ್ಡಸ್ತಿಕೆ ಪ್ರದರ್ಶನ ಮಾಡುವುದು ಕಂಡಾಗ ಈ ಪ್ರಪಂಚದಲ್ಲಿ ಬಂಗಾರ,ದುಡ್ಡು, ಆಸ್ತಿ ಹೊಂದಿರುವ ವ್ಯಕ್ತಿ ಅಥವಾ ಕುಟುಂಬಕ್ಕೆ ನೀಡುವ ಮರ್ಯಾದೆ ಪ್ರಚಾರ ನಿಜ ವ್ಯಕ್ತಿತ್ವಕ್ಕೆ ಯಾವಾಗ ಬೆಲೆ ಗೌರವ ಸಿಗಬಹುದು ಎಂದು ಕೊಳ್ಳುತ್ತೇನೆ….. ನಮ್ಮ ಮನೆಯಲ್ಲಿ ಇಷ್ಟು ಜನ ಇದ್ದಾರೆ ಆದರೆ ನಮ್ಮ ಹತ್ತಿರದ ಮನೆಯಲ್ಲಿ ಆ ಒಂಟಿ ಹೆಂಗಸು ಮಾತ್ರ ಇರುವುದು ಯಾಕೆ ಅವರಿಗೆ ಮಕ್ಕಳು ಇಲ್ವಾ? ಕಲಿಯಲು ಅಥವಾ ದುಡಿಯಲು ಹೊರಗೆ ಹೋಗಿರಬಹುದೇ ಎಂದು ಆ ಹೆಂಗಸಿನ ಬಗ್ಗೆಯೇ ನನ್ನ ಚಿಂತೆ ಆಗಿತ್ತು …..ಅವರ ಮನೆಗೆ ಯಾವ ನೆಂಟರು ಬರುತ್ತಿರಲಿಲ್ಲ !!!!! ತುಂಬಾ ಸಲ ಯೋಚಿಸಿದ್ದೇನೆ ಅಮ್ಮ ಅಪ್ಪ ಇಲ್ಲದ ಸಮಯದಲ್ಲಿ ಅವರ ಮನೆಗೆ ಹೋಗಿ ಅವರ ಬಗ್ಗೆ ವಿಚಾರಿಸಬೇಕು ಎಂದು ಕೊಂಡಿದ್ದೆ…. ಆದರೆ ಏನಾದರೂ ಒಂದು ಅಡಚಣೆ ಆಗಿ ಅವರ ಮನೆಗೆ ಹೋಗಲು ಆಗುತ್ತಿರಲಿಲ್ಲ. ಆದರೆ ನಾನು ಆ ಹೆಂಗಸಿನ ಬಗ್ಗೆ ಎಷ್ಟು ಯೋಚಿಸಿದ್ದೆ ಅಂದರೆ ರಾತ್ರಿ ಮಲಗಿದಾಗಲೂ ಅವರ ಕನಸು ಬೀಳುತ್ತಿತ್ತು!!! ಆ ಕನಸ್ಸಿನಲ್ಲಿ ನಾನು ಅವರ ಮಡಿಲಲ್ಲಿ ತಲೆಯಿಟ್ಟು ಮಲಗಿದ ಹಾಗೆ ಅವರು ನನ್ನ ತಲೆ ನೇವರಿಸುತ್ತಾ ಇಬ್ಬರೂ ಪ್ರೀತಿಯಿಂದ ಇರುವ ಹಾಗೆ ಆಗುತಿತ್ತು. ಇದನ್ನೆಲ್ಲ ಅಮ್ಮ ನ ಬಳಿ ಹೇಳಿದರೆ ಅಪ್ಪನಿಗೆ ಹೇಳಿ ಎಲ್ಲಿ ರಾದ್ಧಾಂತ ಮಾಡಿ ಬಿಡುತ್ತಾರೋ ಎಂಬ ಭಯ. ಎಲ್ಲರಿಗೂ ಅಮ್ಮ ಸಲುಗೆಯಿಂದ ಇದ್ದು ಎಲ್ಲವನ್ನೂ ಹೇಳಿಕೊಳ್ಳುತ್ತಾರೆ.ಆದರೆ ನನ್ನ ಅಮ್ಮ ಇದಕ್ಕೆ ವಿರುದ್ಧವಾಗಿ ಇದ್ದರು…. ನನ್ನ ಜೊತೆ ತುಂಬಾ ಗಂಭೀರವಾಗಿ ಇರುತ್ತಿದ್ದರು. ಹಾಗಾಗಿ ನಾನು ಯಾರಲ್ಲೂ ಸಲುಗೆಯಿಂದ ಇರದೆ ನಾನು ಆಯಿತು ನನ್ನ ಓದು ಬರಹ ಆಯಿತು ಎಂಬಂತೆ ಇದ್ದೆ. ನಾನು ಪಿಯುಸಿ ಓದುವವರೆಗೆ ಆ ಹೆಂಗಸನ್ನು ನೋಡಲು ಮಾತನಾಡಲು ಹವಣಿಸುತ್ತಿದ್ದೆ. ಪಿಯುಸಿ ನಂತರ ಹೆಚ್ಚಿನ ಓದಿಗಾಗಿ ಮನೆ ಬಿಟ್ಟು ದೂರ ಹೋಗಬೇಕಾಯಿತು. ಕ್ರಮೇಣ ಅಲ್ಲಿಯ ಸ್ನೇಹಿತರು ಬಿಡುವಿಲ್ಲದ ಓದಿನಿಂದ ಈ ಹೆಂಗಸಿನ ಬಗ್ಗೆ ನನ್ನ ಪತ್ತೇದಾರಿ ನಿಂತೇ ಹೋಯಿತು ಎಂದರೆ ತಪ್ಪಾಗಲಾರದು…ಈಗ ನಾನು ವೈದ್ಯ ವೃತ್ತಿ ಕಲಿತು ಅಭ್ಯಾಸ ಮಾಡಲು ಈ ಆಸ್ಪತ್ರೆಗೆ ಬಂದು ಎಂಟು ತಿಂಗಳೇ ಕಳೆದಿವೆ …. ಅಮ್ಮ ಅಪ್ಪ ಇಬ್ಬರು ಪ್ರಸಿದ್ಧ ವಕೀಲರು ಅದ ಕಾರಣ ಅವರಿಬ್ಬರಿಗೂ ಬಿಡುವಿಲ್ಲದ ಕೆಲಸ ಇತ್ತು….” ಇತರರು ನನ್ನ ಬಗ್ಗೆ ಎನೂ ಯೋಚಿಸುತ್ತಾರೆ ಎನ್ನುವುದಕ್ಕಿಂತಲೂ ನನ್ನ ಬಗೆಗೆ ನನ್ನ ಅಭಿಪ್ರಾಯವೇನು ಎಂಬುದು ಬಹಳ ಮುಖ್ಯ” ಎಂಬುದು ನಾನು ಕಂಡುಕೊಂಡ ಸತ್ಯ.ನನ್ನ ಬಾಲ್ಯ ಈಗೀನ ಯೌವ್ವನದ ಕಲಿಕೆಯಲ್ಲಿ ಈ ಜಗತ್ತಿನಲ್ಲಿ ಇರುವುದು ಮೂರೇ ರತ್ನಗಳು ಅನ್ನ, ನೀರು ಮತ್ತು ಇನ್ನೊಬ್ಬರಿಗೆ ಮಾಡುವ ಸಹಾಯ ಎಂದು ನಾನು ಅಂದುಕೊಳ್ಳುತ್ತೇನೆ.‘ಆಕಾಶ್, ಆಕಾಶ್,’ ಆಗ ಬಂದ ಪೇಶೆಂಟ್ ಈಗ ಮಾತನಾಡುತ್ತಿದ್ದಾರೆ ಎಂದು ನಾವಿಬ್ಬರೂ ಒಟ್ಟಿಗೆ ಡ್ಯೂಟಿ ಮಾಡುವ ಲೇಡಿ ಡಾಕ್ಟರ್ ರೇಖಾ ಕರೆದಾಗ ಒಮ್ಮೆಲೇ ಯೋಚನೆಯಿಂದ ಎಚ್ಚೆತ್ತ ಆಕಾಶ್…..
ಹೌದು ಇವತ್ತು ಮಧ್ಯಾಹ್ನ ಊಟ ಮುಗಿಸಿದ ತಕ್ಷಣ ನರ್ಸ್ ಅರ್ಜೆಂಟ್ ಬರ ಹೇಳಿದರು ….
ಬಂದು ನೋಡಿದಾಗ ನಮ್ಮ ಮನೆಯ ಪಕ್ಕದಲ್ಲಿ ಇದ್ದ ನನ್ನ ಬಾಲ್ಯದ ಸುಂದರ ಆ ಹೆಂಗಸೇ ಇವರು ಆಗಿದ್ದರು….ಅವರ ನೆನಪೇ ಮರೆತು ಹೋಗಿತ್ತು… ಅವರನ್ನು ನೋಡಿದ ತಕ್ಷಣ ಮೊದಲಿನ ಎಲ್ಲಾ ನೆನಪುಗಳು ಮರುಕಳಿಸಿತು…
ಬಾಲ್ಯದಲ್ಲಿ ನೋಡಿದ ಹಾಗೆ ಇರಲಿಲ್ಲ ಹಾಗಂತ ಹೆಚ್ಚು ಬದಲಾವಣೆ ಆಗಿರಲಿಲ್ಲ… ಹಣೆಯ ಹತ್ತಿರ ಸ್ವಲ್ಪವೇ ಕೂದಲು ನೆರೆದಿತ್ತು…. ಮೊದಲಿನ ಮೈ ಕಟ್ಟು ಹಾಗೆ ಇತ್ತು… ಅವರನ್ನು ಯಾರು ಕರೆದುಕೊಂಡು ಬಂದಿದ್ದು ಅಥವಾ ಅವರು ಒಬ್ಬರೇ ಬಂದಿದ್ದ ಗೊತ್ತಿಲ್ಲ ತಲೆತಿರುಗಿ ಬಿದ್ದಿದ್ದರು ಅಂತೆ ಎಂದು ನರ್ಸ್ ಹೇಳಿದರು. ‌ ಅವರು ಮಾತನಾಡುತ್ತಿದ್ದಾರೆ ಎಂದು ಕೇಳಿಯೇ ಆಕಾಶ್ ನಿಗೆ ಏನೋ ಒಂದು ರೀತಿಯ ಕುತೂಹಲ ಹಾಗೂ ಆನಂದ ಒಟ್ಟಿಗೆ ಉಂಟಾಗಿ ಈಗ ಬಂದೇ ಎಂದು ಜೊತೆಯಲ್ಲಿ ಕೆಲಸ ಮಾಡುವ ರೇಖಾರವರಲ್ಲಿ ಹೇಳಿ ಮುಖ ತೊಳೆದು ಟವೆಲ್ ನಿಂದ ಒರೆಸಿ ಬೇಗ ಬೇಗ ಪೇಶೆಂಟ್ ಇರುವ ಕೋಣೆಗೆ ಹೋದನು ಆಕಾಶ್…

(ಮುಂದುವರಿಯುವುದು)

Leave a Reply

Your email address will not be published. Required fields are marked *