September 20, 2024

     ಒಬ್ಬ ಮಹಿಳೆ ಮನಸ್ಸು ಮಾಡಿದರೆ ಮನೆ ಬೆಳಗಿಸುವ ಶಕ್ತಿ ಹೊಂದಿರುತ್ತಾಳೋ ಅದೇ ರೀತಿ ಸಮಾಜ ಬೆಳಗುವ ಶಕ್ತಿಯೂ ಆಕೆಯಲ್ಲಿರುತ್ತದೆ. ಅದರೆ ಅದಕ್ಕೆ ಅವಕಾಶಗಳನ್ನು ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದಕ್ಕೆ ಸೂಕ್ತ ಉದಾಹರಣೆಯಾಗಿ ಉಡುಪಿಯ ನಿರ್ಮಲಾ ಶೇಷಗಿರಿ ಭಂಡಾರಿ ಕುಂಜಿಬೆಟ್ಟು ಉಡುಪಿ ಅವರು ಕಾಣಸಿಗುತ್ತಾರೆ.

       ತನಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಕಚ್ಚೂರು ಶ್ರೀ ನಾಗೇಶ್ವರ ದೇವರ ಪರಮಭಕ್ತೆಯಾಗಿ ನಿರಂತರ ದೇವರ ಸೇವೆ ಮಾಡುತ್ತಾ, ಭಂಡಾರಿ ಸಮಾಜದ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಶ್ರೀ ನಾಗೇಶ್ವರ ಮಹಿಳಾ ಒಕ್ಕೂಟ ಹಾಗೂ ಶ್ರೀ ನಾಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಕೌಟುಂಬಿಕ ಹಿನ್ನೆಲೆ

     18-03-1956 ರಂದು ಕಾರ್ಕಳ ತಾಲೂಕಿನ ಕೌಡೂರುನಲ್ಲಿ ಮಹಾಬಲ ಭಂಡಾರಿ ಕುಂದಾಪುರ ಹಾಗೂ ಪದ್ಮಾವತಿ ದಂಪತಿಯ ಮಗಳಾಗಿ ಜನಿಸಿದ ನಿರ್ಮಲ ಅವರು ತಮ್ಮ ಶಿಕ್ಷಣವನ್ನು ಕುಂದಾಪುರದಲ್ಲೇ ಪೂರೈಸಿದ್ದರು. 

ಬಳಿಕ 1973 ರಲ್ಲಿ ಉಡುಪಿ ಕುಂಜಿಬೆಟ್ಟಿನ ದಿ. ಬಸಪ್ಪ ಭಂಡಾರಿ ಅವರ ಪುತ್ರ, ಬ್ಯಾಂಕ್ ಅಧಿಕಾರಿ ಶೇಷಗಿರಿ ಭಂಡಾರಿ ಅವರನ್ನು ವಿವಾಹವಾಗುತ್ತಾರೆ. ತಮ್ಮ ದಾಂಪತ್ಯ ಜೀವನದಲ್ಲಿ ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಕ್ಕಳ ತಾಯಿಯಾಗುತ್ತಾರೆ.

ಎಳೆಯ ವಯಸ್ಸಿನಲ್ಲೇ ಮದುವೆ, ಸಂಸಾರ ತಾಪತ್ರಯಗಳು ಇವರ ಉನ್ನತ ವ್ಯಾಸಂಗದ ಕನಸಿಗೆ ಅಡ್ಡಿಯಾಗುತ್ತದೆ. ತನ್ನ ಗಂಡನ ಉದ್ಯೋಗದ ನಿರಂತರ ವರ್ಗಾವಣೆಗಳ ನಡುವೆಯೂ ಛಲ ಬಿಡದೆ ಬಿ.ಎ ಪದವಿಯನ್ನು ಪೂರ್ಣಗೊಳಿಸುತ್ತಾರೆ. ಓದುವುದು, ವೀಣೆ, ಸಂಗೀತ, ಭಜನೆ, ಕವಿತೆ, ಚುಟುಕು ಬರೆಯುವ ಹವ್ಯಾಸವನ್ನು ಹೊಂದಿದ್ದ ನಿರ್ಮಲಾ ಅವರು ಸ್ವಂತಕ್ಕಾಗಿ ಟೈಲರಿಂಗ್ ವೃತ್ತಿಯನ್ನೂ ನಿರ್ವಹಿಸುತ್ತಾರೆ. 

ಧಾರ್ಮಿಕ-ಸಾಮಾಜಿಕ ಬದುಕು

ಪತಿಯ ಊರೂರು ವರ್ಗಾವಣೆಯ ಬಳಿಕ ನಿರ್ಮಲ ಅವರ ಕುಟುಂಬ 1993 ರಲ್ಲಿ ಉಡುಪಿಗೆ ಬಂದು ನೆಲೆಸುತ್ತದೆ. ಎಳವೆಯಿಂದಲೂ ಸಾಮಾಜಿಕ-ಧಾರ್ಮಿಕ ವಿಚಾರಗಳ ಕುರಿತು ಅತೀವ ಆಸಕ್ತಿ ಹೊಂದಿದ್ದ ಇವರು ಬಳಿಕ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲೂ ಪತಿಯ ಜತೆಗೂಡಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ.

ಹಿಂದೆ ನಿರ್ಮಲ ಅವರ ಪತಿ ಶೇಷಗಿರಿ ಭಂಡಾರಿ ಅವರು ದೇವಳದ ಉಡುಪಿ ಉತ್ಸವ ಸಮಿತಿ ಹಾಗೂ ಬ್ರಹ್ಮಕಲಶ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ನಿರ್ಮಲ ಅವರಿಗೂ ದೇವರ ಸೇವೆ ಮಾಡಲು ಅವಕಾಶ ದೊರಕಿಸಿ ಕೊಡುತ್ತದೆ.

ಬಳಿಕ 2015 ರಲ್ಲಿ ಗಂಗಾಧರ ಭಂಡಾರಿ ಭಿರ್ತಿ ಅವರು ದೇವಳದ ಅಧ್ಯಕ್ಷರಾದ ಸಂದರ್ಭದಲ್ಲಿ ಭಂಡಾರಿ ಮಹಿಳೆಯರನ್ನು ಒಗ್ಗೂಡಿಸಿ, ಸಂಘಟಿಸುವ ನಿಟ್ಟಿನಲ್ಲಿ ಹಿರಿಯರಾದ ನಿರ್ಮಲ ಅವರನ್ನು ಮಹಿಳಾ ಒಕ್ಕೂಟದ ಸಂಚಾಲಕರಾಗಿ ನೇಮಕಗೊಳ್ಳುತ್ತಾರೆ. ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಇವರನ್ನು ಮಹಿಳಾ ಬಳಗದವರು ಸೇರಿ ಶ್ರೀ ನಾಗೇಶ್ವರ ಮಹಿಳಾ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ ಮಾಡುತ್ತಾರೆ.

ಇಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಇವರು ಹೊಸ ಮಹಿಳಾ ಬಳಗದ ಅಸ್ತಿತ್ವಕ್ಕೂ ಪ್ರಯತ್ನಿಸುತ್ತಾರೆ. ದೇವಸ್ಥಾನದ ಪ್ರತಿ ಕಾರ್ಯಕ್ರಮಗಳಲ್ಲೂ ಮಹಿಳೆಯರಿಂದ ಭಜನೆ ಹಾಗೂ ವಾರ್ಷಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನೂ ಶಿಸ್ತಿನಿಂದ ಸಂಘಟಿಸುತ್ತಾರೆ. ಜತೆಗೆ ಶ್ರೀ ನಾಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿಯೂ 2 ವರ್ಷಗಳ ಕಾಲ ದುಡಿಯುತ್ತಾರೆ. 

ಈ ರೀತಿಯಲ್ಲಿ ತನ್ನ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಂಡ ನಿರ್ಮಲ ಶೇಷಗಿರಿ ಅವರ ಧಾರ್ಮಿಕ- ಸಾಮಾಜಿಕ ದುಡಿಮೆಯನ್ನು ಸ್ಮರಿಸುತ್ತಾ ಭಂಡಾರಿವಾರ್ತೆ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದೆ.

✍🏻 ಕಿರಣ್ ಸರಪಾಡಿ

2 thoughts on “ಭಂಡಾರಿ ಸ್ವಯಂ ಸೇವಕಿ – 3

  1. ನಿಮ್ಮ‌ಸೇವೆ ಹೀಗೆಯೇ ಬಹುಕಾಲ ಮುಂದುವರಿಯಲಿ. ಆ ನಾಗೇಶ್ವರ ನಿಮಗೆ ಆಯಸ್ಸು ಮತ್ತು ಆರೋಗ್ಯ ಕೊಟ್ಟು ಕಾಪಾಡಲಿ.

  2. Very proud of you madam,

    Respectful thanks to your noble thoughts reaching the entire community through your service.
    As a beneficiary of your service, we wish to register our kind regards to you and your husband Mr. Sheshagiri.
    Not to forget your children, for their chipping out a bit from their rightful.

    thank you all have a nice day.

    .

Leave a Reply

Your email address will not be published. Required fields are marked *