September 20, 2024

ಸಹೃದಯೀ ಭಂಡಾರಿ ವಾರ್ತೆಯ ಓದುಗರಿಗೆ ಮತ್ತು ಹಿತೈಷಿಗಳಿಗೆ ನಮಸ್ಕಾರಗಳು,

ನಿಮಗೆಲ್ಲ ತಿಳಿದಿರುವಂತೆ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಗೆ  4 ನೇ ವರ್ಷದ ಸಂಭ್ರಮ .

ಈ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷದಿಂದ ನಮ್ಮ ಜೊತೆ ಕೆಲಸ ಮಾಡುತ್ತಿರುವ ತಂಡದ ಎಲ್ಲಾ ಸದಸ್ಯರಿಗೆ ನಾನು ಆಭಾರಿಯಾಗಿದ್ದೇನೆ.

ಯಾಕೆಂದರೆ ಈಗಿನ ಕಾಲದಲ್ಲಿ ಸಮಾಜ ಸೇವೆ ಮಾಡಲು ಆಸಕ್ತಿಯಿರುವ ಯುವಕರ ಸಂಖ್ಯೆ ಕಿರಿದಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ಕೆಲವು ತಿಂಗಳುಗಳ ಕಾಲ ಅಸ್ವಸ್ಥನಾಗಿದ್ದರೂ ಛಲ ಬಿಡದೆ ಕಥಾ ಸ್ಪರ್ಧೆಯಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಭಂಡಾರಿ ವಾರ್ತೆಯನ್ನು ಸದಾ ಸಮಾಜದ ಬಂಧುಗಳ ಮನಸ್ಸಿನಲ್ಲಿ ಉಳಿಯುವಂತೆ ಮಾಡಿರುವುದರ ಹಿಂದೆ ನಮ್ಮ ತಂಡದ ಸತತ ಪರಿಶ್ರಮವೇ ಕಾರಣ.

ಎರಡನೆಯದಾಗಿ ನಾನು ಕೃತಜ್ಞತೆಯನ್ನು ಸಲ್ಲಿಸಬೇಕಿರುವುದು ನಮ್ಮ ಬರಹಗಾರರಿಗೆ , ತಾವೆಲ್ಲ ಗಮನಿಸಿರುತ್ತೀರಿ ಇತ್ತೀಚಿಗೆ ನಾವು ಸ್ನೇಹಿತರ ದಿನ, ಆಟಿ ಅಮಾವಾಸ್ಯೆ, ಸ್ವಾತಂತ್ರ್ಯೋತ್ಸವ , ರಕ್ಷಾ ಬಂಧನದಂತಹ ಹಲವು ದಿನಾಚರಣೆಯಂದು ವಿಶೇಷಾಂಕ ದ ಮೂಲಕ ಲೇಖನ ಬರೆಯಲು ವಿನಂತಿಸಿಕೊಂಡಾಗ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರತಿಯೊಂದು ವಿಶೇಷಾಂಕವನ್ನೂ ಯಶಸ್ವಿಯಾಗಿಸಿದ್ದು ನಮ್ಮ ಹೆಮ್ಮೆಯ ಲೇಖಕರು. ಅವರ ಸಹಕಾರವನ್ನು ಮುಂದೆಯೂ ನೀಡುತ್ತಾರೆಂಬ ಭರವಸೆ ನನಗಿದೆ.

ಹಾಗೆಯೇ ಕೆಲವು ಸಮಯದ ಹಿಂದೆ ನಾವು ಏರ್ಪಡಿಸಿದ್ದ ಕಥಾ ಸ್ಪರ್ಧೆ , ಆ ಸಂದರ್ಭದಲ್ಲಿ ಅನಾರೋಗ್ಯದ ಕಾರಣ ನನ್ನ ಅನುಪಸ್ಥಿತಿಯಲ್ಲಿ ತಂಡ ಅದ್ಭುತವಾಗಿ ಕೆಲಸ ಮಾಡಿರುವ ಒಂದು ಕಾರ್ಯಕ್ರಮ. ಸುಮಾರು 100 ಕ್ಕೂ ಹೆಚ್ಚು ಕಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.ಅದರಲ್ಲಿ ನಮ್ಮದೇ ಸಮಾಜದ ಲೇಖಕರು ಬರೆದಿರುವ 35 ಉತ್ತಮ ಕಥೆಗಳನ್ನು ತಂಡ ಆರಿಸಿತ್ತು.
ಪ್ರಥಮ ಬಾರಿಗೆ ಈ ಬಗ್ಗೆ ನುರಿತ ಇಬ್ಬರು ವ್ಯಕ್ತಿಗಳನ್ನು ತೀರ್ಪುಗಾರರಾಗಿ ಹೊರಗಡೆಯಿಂದ ನೇಮಿಸಿದ್ದೆವು. ನಮ್ಮ ಉದ್ದೇಶ ತೀರ್ಪು ಪಾರದರ್ಶಕವಾಗಿರಬೇಕು ಎಂಬುದಾಗಿತ್ತು.ಅತೀ ಅಲ್ಪ ಸಮಯದಲ್ಲಿ ಕಥೆಗಳನ್ನು ಪರಿಶೀಲಿಸಿ ತೀರ್ಪು ಕೊಟ್ಟಿದ್ದಾರೆ . ಆ ಎರಡೂ ತೀರ್ಪುಗಾರರಿಗೆ ನಾನು ಧನ್ಯವಾದವನ್ನು ಅರ್ಪಿಸುತ್ತೇನೆ ಹಾಗೂ ಕಥೆಯನ್ನು ಬರೆದ ಎಲ್ಲಾ ಬರಹಗಾರರಿಗೆ ಕೂಡಾ ಕೃತಜ್ಞತೆಯನ್ನು ಸಲ್ಲಿಸುತ್ತಾ ಭಂಡಾರಿ ವಾರ್ತೆಗಾಗಿ ನಿಮ್ಮ ಬರಹವನ್ನು ಮುಂದುವರಿಸುವಂತೆ ಮನವಿ ಮಾಡಿಕೊಂಡು ಮುಖ್ಯವಾಗಿ ಸ್ಪರ್ಧೆಯಲ್ಲಿ ವಿಜೇತರಾದ ಮೂರು ಕಥೆಯ ಲೇಖಕರಿಗೆ ಅಭಿನಂದನೆ ಸಲ್ಲಿಸಿಕೊಂಡು.. ಆ ಸಂದರ್ಭದಲ್ಲಿ ಸತತ ಶ್ರಮ ವಹಿಸಿ ಕೆಲಸ ಮಾಡಿರುವ ತಂಡದ ಎಲ್ಲಾಸದಸ್ಯರಿಗೂ ನನ್ನ ಪ್ರಣಾಮಗಳು .

ಕಳೆದ ನಾಲ್ಕು ವರ್ಷಗಳಿಂದ ಭಂಡಾರಿ ವಾರ್ತೆಯ ಪ್ರತಿಯೊಂದು ವರದಿ, ಬರಹ, ಲೇಖನಗಳನ್ನು ಓದಿಕೊಂಡು ಹರಸಿ ಹಾರೈಸುತ್ತಿರುವ ನಮ್ಮ ಸಮಾಜದ ಪ್ರತಿಯೊಬ್ಬ ಬಂಧುವಿಗೂ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತಾ ನಿಮ್ಮ ಸಹಕಾರ ನಿರಂತರವಾಗಿರಲಿ.

ಕೇವಲ ಬೆರಳೆಣಿಕೆಯ ಯುವ ಸದಸ್ಯರನ್ನು ಒಗ್ಗೂಡಿಸಿಕೊಂಡು ಸಮಾಜಕ್ಕೆ ನಮ್ಮಿಂದ ಸಾಧ್ಯವಿರುವ ಕಿರು ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದೇವೆ. ಈ ಸಂದರ್ಭದಲ್ಲಿ ತಮ್ಮ ಸ್ಪಂದನೆಯನ್ನು ಹೊರತುಪಡಿಸಿ ಬೇರೆ ಏನನ್ನೂ ನಾವು ಬಯಸುವುದಿಲ್ಲ . ನಿಮ್ಮ ಪ್ರೋತ್ಸಾಹದಿಂದ ಇನ್ನಷ್ಟು ಕ್ರೀಯಾತ್ಮಕ ಕೆಲಸಗಳನ್ನು ಸಮಾಜದ ಅಭಿವೃದ್ಧಿಗಾಗಿ ಮಾಡುವ ಹಂಬಲ , ಹುಮ್ಮಸ್ಸು ತಂಡಕ್ಕೆ ಬರುತ್ತದೆ ಎಂದು ವಿನಂತಿಸಿಕೊಂಡು ಭಂಡಾರಿ ವಾರ್ತೆಯ ಯಶಸ್ಸಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣರಾದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ವಂದನೆಗಳು.

 

 

 

 

ಪ್ರಕಾಶ್ ಭಂಡಾರಿ ಕಟ್ಲಾ
ಮುಖ್ಯ ಕಾರ್ಯ ನಿರ್ವಾಹಕರು, ಭಂಡಾರಿ ವಾರ್ತೆ

Leave a Reply

Your email address will not be published. Required fields are marked *