September 20, 2024

ಉಡುಪಿ ಮೂಡುಬೆಟ್ಟು ನಿವಾಸಿ, ಭಾರತೀಯ ಭೂ ಸೇನೆಯ ನಿವೃತ್ತ ಯೋಧ ಕ್ಯಾ.ಯಾದವ ಭಂಡಾರಿಯವರು ಫೆಬ್ರವರಿ 8 ರ ಬುಧವಾರ ಸಂಜೆ ವಯೋ ಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ವಿಧಿವಶರಾದರು .

ಭಾರತೀಯ ಭೂಸೇನೆಯಲ್ಲಿ 28 ವರ್ಷಗಳ ಕಾಲ ಸೇವೆಗೈದಿರುವ ಕ್ಯಾ.ಯಾದವ ಭಂಡಾರಿಯವರು ಸಂಗ್ರೂರು, ಪಾಟಿಯಾಲ, ಜೈಸಲ್ಮೀರ್, ಅಹ್ಮದ್ ನಗರ, ಪಟ್ಲಂಕೋಟ್, ಅಂಬ್ಲದಲ್ಲಿ ಮತ್ತು ದೇಶದ ಇನ್ನಿತರ ಭಾಗಗಳಲ್ಲಿ ದೇಶ ಸೇವೆಯ ಕರ್ತವ್ಯ ನಿರ್ವಹಿಸಿದ್ದರು. ೧೯೬೨ ರ ಭಾರತ- ಚೀ‌ನಾ ಯುದ್ಧ, 1971 ಹಾಗೂ 1972ರ ಭಾರತ- ಪಾಕಿಸ್ಥಾನ ಯುದ್ಧ ಸೇರಿದಂತೆ ಹಲವು ಸಂದಿಗ್ಧ ಪರಿಸ್ಥಿತಿಯ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದ್ದರು.

ಸೇನಾ ಕ್ಷೇತ್ರದ ಅಮೋಘ ಸಾಧನೆಗಾಗಿ ಸಮರ್ ಸೇವಾ ಸ್ಟಾರ್, ಪಶ್ಚಿಮಿ ಸ್ಟಾರ್, ರಕ್ಷಕ್ ಮೆಡಲ್, ಸಂಗ್ರಾಮ್ ಮೆಡಲ್, ಸೈನ್ಯ ಸೇವಾ ಪದಕ್, 1972ರಲ್ಲಿ 25ನೇ ಇಂಡಿಪೆಂಡೆನ್ಸ್ ಸಂಭ್ರಮ್ ಮೆಡಲ್, ಲಾಂಗ್ ಸರ್ವೀಸ್ ಮೆಡಲ್, ಲಾಂಗ್ ಸರ್ವೀಸ್ ಸೈನಿಕ್ ಮೆಡಲ್ ಮೊದಲಾದ ಪ್ರಶಸ್ತಿಗಳು ಸಂದಿದ್ದವು.
ಇಬ್ಬರು ಪುತ್ರರಾದ ಜಯಪ್ರಕಾಶ್ ಮತ್ತು ಪ್ರವೀಣ್ ಹಾಗೂ ಮೂರು ಮಂದಿ ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ದಿವಂಗತರು ಹಂಗಾರಕಟ್ಟೆ ಭಂಡಾರಿ ಮೂಲಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಇವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಗುರುವಾರದಂದು ಮಧ್ಯಾಹ್ನ 12:30ಕ್ಕೆ ಆದಿ ಉಡುಪಿಯ ಯಾದವ ಸುಧಾ ಸ್ವಗೃಹದಲ್ಲಿ ನೇರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *