September 20, 2024
ಮಸ್ಕಾರ….🙏
ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.
ಮಾನವ ಜೀವನದ ಮೊದಲ ಹೆಜ್ಜೆಯೇ ಗೆಳೆತನ ಅಥವಾ ಸ್ನೇಹ.ನಮಗೆ ಅರಿವಿಲ್ಲದೆಯೇ ನಮ್ಮ ಸುತ್ತಲಿನ ಗಾಳಿ,ನೀರು,ಮರ ಮುಂತಾದ ಸಾಮಾನ್ಯ ವಸ್ತುಗಳ ಜೊತೆ ನಮ್ಮ ಗೆಳೆತನ ಆಗಿರುತ್ತೆ.ಸ್ನೇಹ ಅಂದ್ರೆ ಏನು ಅಂತ ಈಗ ಯಾರಿಗೂ ಗೊತ್ತಿಲ್ಲ ಕಣ್ರೀ. ಎಲ್ಲಾರೂ ಸುಂ..ಸುಮ್ನೆ ಗೆಳೆತನ, ಸ್ನೇಹ ಅಂತ ನಾಟಕ ಮಾಡ್ತಾರೆ.ಆಮೇಲೆ ಎದೆಗೆ ಚೂರಿ ಹಾಕಿ ಹೊರಟು ಹೋಗ್ತಾರೆ.ಆದ್ರೆ ಸ್ನೇಹ ಯಾವತ್ತೂ ಸಾಯಲ್ಲ.ಅದಕ್ಕೆ ಕೊನೆಯಿಲ್ಲದ ಸರಪಳಿ ಅಂತಾನೂ ಕರೀತಾರೆ.ಮನಸ್ಸೆಂಬುದು ನೀರಿದ್ದಂತೆ.ಅಲ್ಲಿ ಭಾವನೆಗಳು ಹರಿದಾಡುತ್ತಾ,ಪ್ರೀತಿ ತುಂಬಿರುತ್ತೆ.ಮನಸ್ಸಿಗೆ ನೋವಾದಾಗ ಭಾವನೆಗಳು ಹೊರಗೆ ಬರುತ್ತವೆ.ಅಂಥಹ ಭಾವನೆಗಳನ್ನು ಹಂಚಿಕೊಂಡು ಗೆಳೆಯನ ಸಮಸ್ಯೆಗಳಿಗೆ ಪರಿಹಾರವನ್ನಿತ್ತು ಬೆನ್ನು ತಟ್ಟೋನೇ ನಿಜವಾದ ಸ್ನೇಹಿತ.
ನಮ್ಮಲ್ಲಿ ಆಸೆ ಇರಬೇಕು ಕಣ್ರೀ. ಆದ್ರೆ ಅದು ಅತಿ ಆಸೆ ಆಗಬಾರದು.ನಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬನಿಗೆ ಮೋಸ ಮಾಡಬಾರದು. ಎಲ್ಲರನ್ನೂ ಪ್ರೀತಿಸಬೇಕು ಹಾಗೂ ಸಮಾನರಾಗಿ ಕಾಣಬೇಕು.ನಮ್ಮ ಈ ಎಲ್ಲ ಮನೋಭಾವನೆಗೆ ತಕ್ಕಂತೆ ನಮ್ಮ ಗುರಿ ಇರಬೇಕು. ಗೌರವವನ್ನು ಕೊಟ್ಟು ತೆಗೆದುಕೊಳ್ಳಬೇಕು.ಜೀವನ ಅನ್ನೋದೂ ಒಂದು ಕಾಲೇಜು ಕಣ್ರೀ. ಆದ್ರೆ ಇಲ್ಲಿ ಪರೀಕ್ಷೆ ಮುಗಿದ ಮೇಲೆ ಪಾಠ ಕಲೀತೀವಿ.ಹಾಗಾಗಿ ಗೆಳೆತನ ಆದ್ಮೇಲೆ ಜಗಳ ಕಾಯೋಕಿಂತ ಒಬ್ಬ ಒಳ್ಳೆ ಗೆಳೆಯನನ್ನೇ ಆರಿಸಿಕೊಳ್ಳೋದು ಜಾಣರ ಗುಣ ಅಲ್ವಾ?
ಗೆಳೆಯರಲ್ಲಿ ಕೆಟ್ಟವರೂ ಇರ್ತಾರೆ ಒಳ್ಳೆಯವರೂ ಇರ್ತಾರೆ,ಆದ್ರೆ ನಾವು ಅವರ ಹಾಗೆ ಆಗೋದು ಬಿಡೋದು ನಮ್ಮ ಕೈನಲ್ಲೇ ಇದೆ.ಅವರು ಏನಾದರೂ ತಪ್ಪು ಮಾಡಿದ್ರೆ ನಾವು ಅವರಿಗೆ ತಿಳಿಸಿ ಹೇಳಬಹುದಲ್ವ? ಅವರು ನಮಗೇನಾದರೂ ಅಂದಾಗ ಸಿಟ್ಟು ಮಾಡಿಕೊಳ್ಳದೆ ಆಲೋಚಿಸಬಹುದಲ್ವ? ನಿಜವಾದ ಗೆಳೆಯರು                         ಇವನ್ನೆಲ್ಲ ಮಾಡ್ತಾರೆ.ಸಹಪಾಠಿಯಾಗಿರಬಹುದು,ಸಹೋದ್ಯೋಗಿಯಾಗಿರಬಹುದು,ಬಾಲ್ಯದಲ್ಲಿ ತಾಯಿಯಾಗಿರಬಹುದು, ಮುಪ್ಪಿನಲ್ಲಿ ಮೊಮ್ಮಗನಾಗಿರಬಹುದು ಅಥವಾ ಜೀವನದ ಒಂದು ಘಟ್ಟದಲ್ಲಿ ಅತ್ಮಿಯರಾಗಿ ಇಂದು ಸಂಪರ್ಕದಲ್ಲೂ ಇಲ್ಲದ ಕೆಲ ದಿನದ ಮಟ್ಟಿನ ಆತ್ಮೀಯ ಹೃದಯಿಗಳಾಗಿರಬಹುದು.ಅದೇ ರೀತಿ ಒಂದು ಉತ್ತಮ ಮಾರ್ಗದರ್ಶನ ನೀಡುವವನೂ ಆತ್ಮೀಯ ಸ್ನೇಹಿತನೇ.ಕೆಲವು ಸಾರಿ ಗೆಳೆಯರು ನಮಗೆ ತಂದೆ ತಾಯಿಗಿಂತಲೂ ಹೆಚ್ಚು ಹತ್ತಿರ ಆಗ್ತಾರೆ.ಹಾಗಂತ ಅತಿಯಾದರೆ ಅಮೃತಾನೂ ವಿಷ ಅಲ್ವಾ? ಸ್ವಲ್ಪ ಯೋಚನೆ ಮಾಡಿ ಅಡಿಯಿಟ್ಟರೆ ಒಳ್ಳೆಯದು.ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ.ಹಾಗೆಯೇ ಪ್ರೀತಿ ಗೆಳೆತನದಲ್ಲಿ ಆರಂಭಗೊಂಡು ಗೆಳೆತನದಲ್ಲಿ ಅಂತ್ಯಗೊಳ್ಳುತ್ತದೆ.ಆದರೆ ಕೆಲವು ಹುಡುಗರು, ಹುಡುಗಿಯರು ನೀಡಿದ ಸ್ನೇಹದ ಸಲುಗೆಯನ್ನು ಪ್ರೀತಿ ಎಂದು ತಿಳಿಯುತ್ತಾರೆ.ಸುಮ್ಮಸುಮ್ಮನೆ ಏನೇನೊ ಕಲ್ಪಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಗೆಳೆತನ,ಪ್ರೀತಿ,ಜೀವನದ ಅರ್ಥವೇ ಗೊತ್ತಿರುವುದಿಲ್ಲ.ಅವರು ಒಂದು ತಪ್ಪಿಗಾಗಿ ಹಳೆ ಗೆಳೆಯರನ್ನು ದ್ವೇಷಿಸುತ್ತಾರೆ.ಆದರೆ ಅವರನ್ನು ಇಷ್ಟಪಡುವ ಹಲವಾರು ಕಾರಣಗಳನ್ನು ಪರಿಗಣಿಸುವುದೇ ಇಲ್ಲ.ಇದೇ ಅಲ್ವಾ ಜೀವನ ಅಂದ್ರೆ ನಾವು ಅಂದುಕೊಂಡಿದ್ದು ಯಾವುದೂ ಆಗುವುದಿಲ್ಲ.ಎಲ್ಲರೂ ನಮ್ಮ ಆಸೆಗಳಿಗೆ ವಿರೋಧ ಇರುವಂತೆ ಕಾಣಿಸುತ್ತಾರೆ.ಆದರೆ ಅವರು ಹೇಳುವುದರಲ್ಲೂ ಸತ್ಯ ಇರುತ್ತದೆ.ನಾವು ಇನ್ನೊಬ್ಬರನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಮತ್ತು ಅವರ ಸಂಬಂಧ ನಿಂತಿರುತ್ತದೆ.ಗುಣಾವಗುಣಗಳನ್ನು ಚರ್ಚಿಸಿದವನೇ ಆಪ್ತ ಸ್ನೇಹಿತನಾಗುವುದು.
ಕಾಲೇಜನ್ನು ಉದಾಹರಣೆಯಾಗಿ ತಗೆದುಕೊಂಡರೆ,ಅಲ್ಲಿ ಹಲವಾರು ಥರಹದ ಗೆಳೆಯರಿದ್ದರೂ,ಅಲ್ಲಿ ಇರುವವರೆಗೆ ಜೀವದ ಗೆಳೆಯರಾಗಿ ಇದ್ದವರೂ,ಪ್ರತಿದಿನ ಮೆಸೇಜ್, ಈ-ಮೇಲ್ ಮಾಡಿಕೊಂಡು ಇದ್ದವರೂ.ಸ್ವಲ್ಪ ಸಮಯದ ಬಳಿಕ ಅವರ ಗುರಿ ತಲುಪುವುದಕ್ಕಾಗಿ ಬೇರೆ ಬೇರೆ ಆಗ್ತಾರೆ.ಆಗಲೇ ಬೇಕು,ಅದು ಅನಿವಾರ್ಯ ಕೂಡ.ಆದರೆ ಆಮೇಲೆ ಒಬ್ಬರನ್ನು ಒಬ್ಬರು ಮರತೇ ಬಿಡುವುದು ಎಷ್ಟು ಸರಿ.ಕೆಲವರಂತೂ ಎದುರು ಸಿಕ್ಕು ಹಾಯ್… ಎಂದರೂ ಮತ್ತೊಬ್ಬ ನೀವು ಯಾರು? ಅಂತ ಕೇಳುತ್ತಾನೆ.ಕನಿಷ್ಠ ಪಕ್ಷ ಒಂದು ಮೇಲ್ ಕೂಡ ಇರುವುದಿಲ್ಲ.ಎಂತಹಾ ವಿಪರ್ಯಾಸ ಅಲ್ವಾ? ಏನು ಮಾಡುವುದು ಈಗಿನ ಕೆಲಸದೊತ್ತಡ,ಸಮಯದ ಅಭಾವ ಏನು ಬೇಕಾದರೂ ಆಗಬಹುದು.ಗೆಳೆಯ ಮನೆಗೆ ಬರುವುದು ತಿಳಿದು ಮನೇಲೇ ಇದ್ದರೂ ಇಲ್ಲ ಅಂತ ಸುಳ್ಳು ಹೇಳುವವರೂ ಇದ್ದಾರೆ.ಏನೇ ಇರಲಿ ನಾವಂತೂ ಜೀವನ ಪೂರ್ತಿ ಒಳ್ಳೆಯ ಸ್ನೇಹಿತರಾಗಿರೋಣ.

ನನ್ನ ಇದುವರೆಗಿನ ಜೀವನದಲ್ಲಿ ನಾನು ಕೇಳಿದ ಒಂದು ಅರ್ಥಪೂರ್ಣ ಗೆಳೆತನದ ಬಗೆಗಿನ ಗೀತೆ….

ರಕ್ತ ಸಂಬಂಧಗಳ ಮೀರಿದ ಬಂಧವಿದು…
ಯಾವ ಬಿಂದುವಿನಲ್ಲಿ ಸಂಧಿಸಿಹುದು…
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನನ್ನ ಪ್ರತಿ ನೋವನ್ನು ತನ್ನದೆಂದು
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು…

ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ…
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ…

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸೇರಿಕೊಂಡು ನಮ್ಮ ದಾರಿ…
ಬದುಕು ಎಷ್ಟು ಚೆಂದವೆಂದು ಸಾರುತಿಹುದು ಸಾರಿ ಸಾರಿ…
ನೀವು ನೀವು ಅಂತ ಶುರುವಾಯ್ತು ಮೊದಲು…
ಲೋ ಲೋ ಅಂತ ಈಗ ಬದಲು
ನಮ್ಮ ನಡುವೆ ಇಲ್ಲ ಕೊಂಚ ಸಂಕೋಚವೂ…

ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

ಮಳೆಯು ಬರಲು ಕಾಗದಾನೇ ದೋಣಿ ಮಾಡಿ ಬಿಟ್ಟ ನೆನಪು
ನಿನ್ನ ಕಂಡು ಬಾಲ್ಯದೆಲ್ಲಾ ಆಟ ಮತ್ತೆ ಆಡೊ ಹುರುಪು
ತುಂಟತನವು ಸೇರಿ ನಮ್ಮ ಸಂಘದಲ್ಲಿ ಪಟ್ಟ ಖುಷಿಗೆ ಲೆಕ್ಕವೆಲ್ಲಿ?
ತಿಳಿಸೊ ಬಗೆಯ ಅರಿಯೆ ನಿನಗೆ ಧನ್ಯವಾದವೆ…

ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ…
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ…

✍️ ಅನು ಕೆ. ಭಂಡಾರಿ

Leave a Reply

Your email address will not be published. Required fields are marked *