September 20, 2024

ಸುಮಾರು 2300-2400 ವರ್ಷಗಳ ಹಿಂದೆ ತುಲುನಾಡಲ್ಲಿ ಹೊಲಗದ್ದೆಗಳು ಇರಲಿಲ್ಲ. ಊರೆಲ್ಲಾ ಕೊಳ(ಪಟ್ಲ)ಪ್ರದೇಶವಾಗಿತ್ತು. ನೀರು ಹರಿದು ಹೋಗಲು ಸರಿಯಾದ ತೋಡು ಹೊಳೆಗಳು ಇರಲಿಲ್ಲ.ಇಲ್ಲಿನ ಮೂಲ ನಿವಾಸಿಗಳು ಇಲ್ಲಿ ತಮಗೆ ಬದುಕಲು ಸಾಕಷ್ಟು ಧಾನ್ಯಗಳನ್ನು ಬೆಳೆಸುತ್ತಿದ್ದರು. ಮಳೆಗಾಲ ನಂತರದಲ್ಲಿ ಪಟ್ಲ ಜಾಗದಲ್ಲಿ ಹುರುಳಿ, ಭತ್ತ, ಹೆಸರು, ಉದ್ದು ಮತ್ತು ಎಳ್ಳು ಬೆಳೆಸುತ್ತಾ ಇದ್ದರು. ಮಳೆಗಾಲದಲ್ಲಿ ಕುಮೇರು ಜಾಗದಲ್ಲಿ ಧಾನ್ಯ ಬೆಳೆಸುವುದು ಇತ್ತು.ಬೆಳೆದ ಕೃಷಿಯ ಲ್ಲಿ ಬಹುಪಾಲು ಮೃಗ ಪಕ್ಷಿಗಳಿಗೆ ಹೋಗುತ್ತಿತ್ತು.

ತುಲುನಾಡಿಗೆ ಪಾಂಡ್ಯರ ಪ್ರವೇಶ ಆಗುತ್ತದೆ.ಜಾಗ ವನ್ನು ಕೇಳುವವರು ಇಲ್ಲ. ತಮಗೆ ಬೇಕಾದಷ್ಟು ಜಾಗ ವನ್ನು ತಮ್ಮದೇ ಎಂದು ಹೇಳಿ ಕೊಳ್ಳುವರು. ಹೊಲ ಗದ್ದೆಗಳ ನಿರ್ಮಾಣ ಆಗುತ್ತದೆ. ತುಲುನಾಡು ಕಟ್ಟುವ ಯೋಜನೆ ಭರದಿಂದ ಸಾಗುತ್ತದೆ. ಅವರು ಪ್ರಪ್ರಥಮ ವಾಗಿ ಕಾಲಿರಿಸಿದ ಊರೇ ಕಾರ್ಕಳ ಮತ್ತು ಮೂಡಬಿದ್ರೆ.ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಯೋಜನೆ ಇಲ್ಲಿ ಹಾಕಿ ಕೊಳ್ಳುತ್ತಾರೆ.ಇಲ್ಲಿ ಅವರಿಗೆ ಎದುರಾದ ದೊಡ್ಡ ಅಡಚಣೆ ತೊಂದರೆ ಎಂದರೆ ಪ್ರಾಣಿ ಪಕ್ಷಿಗಳ ಕಾಟ.ಮನುಷ್ಯರಲ್ಲದೆ ಸಾಕುಪ್ರಾಣಿ ಗಳಿಗೂ ಕ್ರೂರ ಪ್ರಾಣಿಗಳಿಂದ ಪ್ರಾಣ ಭಯ ಇರುತ್ತಿತ್ತು. ಬೆಳೆಸಿದ ಬಹುಪಾಲು ಕೃಷಿ ಉತ್ಪಾದನೆಗಳು ಪ್ರಾಣಿ ಪಕ್ಷಿಗಳಿಗೆ ಆಗುತ್ತಿತ್ತು.

ಆ ಕಾಲದಲ್ಲಿ ಮನುಷ್ಯರು ಕಡಿಮೆ ಇದ್ದರು. ಆದರೆ ಮೃಗ ಪಕ್ಷಿ ಗಳ ಸಂಖ್ಯೆ ಅಧಿಕವಾಗಿತ್ತು.ಕಾಡಿಂ ದ ನಾಡಿಗೆ ಅವುಗಳು ಬಂದು ಬಹಳಷ್ಟು ಜನರಿಗೆ ತೊಂದರೆ ಕೊಡುವುದು ಇತ್ತು.ಆಗಿನ ಕಾಲದಲ್ಲಿ ತುಲುನಾಡಲ್ಲಿ ಅಸಂಖ್ಯಾತ ಹುಲಿ, ಚಿರತೆ, ಹಂದಿ,ನರಿ,ಮೊಲ ಇತ್ಯಾದಿ ಪ್ರಾಣಿಗಳು ಇದ್ದವು.ಅದರಂತೆ ನಾನಾ ಬಗೆಯ ಪಕ್ಷಿಗಳು ಕಾಡಿಂದ ನಾಡಿಗೆ ಹಿಂಡು ಹಿಂಡು ಆಗಿ ಬಂದು ಬೆಳೆದ ಕೃಷಿಯನ್ನು ಪಡೆಯಲು ಅಡ್ಡಿ ಉಂಟು ಮಾಡು ತ್ತಿದ್ದವು.

 

 

(ಮೂಡಬಿದ್ರೆ ಪಕ್ಕದ ಗಂಟಾಲಕಟ್ಟೆ ಯಲ್ಲಿನ ಕಲ್ಲಬೆಟ್ಟು ಇಲ್ಲಿರುವ ಕಲ್ಲಿನ ಗಂಟೆಯ ಕಟ್ಟೆ.ಎಡಕ್ಕೆ ಇದೆ ಕಾವಲುಗಾರರ ವಿಶ್ರಾಂತಿಯ ಸ್ಥಳ. ಮಧ್ಯದಲ್ಲಿ ಇರುವ ಸ್ಥಳವು ಕಾವಲಿನ ನಾಯಿಗಳಿಗಾಗಿ.ಬಲಕ್ಕೆ ಇದೆ ಬೆಂಕಿ ಹಾಕುವ ಅಗ್ಗಿಷ್ಟಿಕೆ. ಬೃಹತ್ ಕಂಭಗಳು ಮನುಷ್ಯರು ನಿಂತಿರುವಂತೆ ಕಾಣುತ್ತದೆ. ಎಡಬದಿಯ ಕಂಭದ ಮೇಲೆ ನಿಂತಿರುವ ಕಲ್ಲಿನ ಗೊಂಬೆಗೆ ಗಂಟೆ ಯನ್ನು ನೇತು ಹಾಕುವುದು. ಅಲ್ಲಿಂದ ಹಗ್ಗವನ್ನು ಜಾರಿಬಿಟ್ಟು ವಿಶ್ರಾಂತಿ ಸ್ಥಳದ ಕಂಭಕ್ಕೆ ಕಟ್ಟುವುದು. ಹಗ್ಗ ಎಳೆದಾಗ ಶಬ್ಧ ಬರುತ್ತದೆ. ಈ ಕಟ್ಟೆ ಎತ್ತರದಲ್ಲಿ ಇರುವುದರಿಂದ ಗಂಟೆಯ ಶಭ್ದ ಬಹುದೂರದವರೆಗೂ ಕೇಳಿಸುತ್ತದೆ. ಈ ಕಟ್ಟೆಯ ಸುತ್ತಲೂ ಕಂದಕ ಇದೆ.ಒಂದು ಕಡೆಯಿಂದ ಮಾತ್ರ ಕೆಳಗಿಂದ ಪಾದೆ ಏರಿ ಬರಬಹುದು.)

ಕಾಡಿನಿಂದ ನಾಡಿಗೆ ಪ್ರವೇಶಿಸುವ ಮೃಗ ಪಕ್ಷಿಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ವಿವಿಧ ಪ್ರಯೋಗಗಳನ್ನು ನಡೆಸುತ್ತಾರೆ. ಅವುಗಳಲ್ಲಿ ಪಾಂಡ್ಯರ ಹೊಗೆಗೂಡು (ಪಾಂಡವರ ಗುಹೆ).ಇಲ್ಲಿ ಎತ್ತರದ ಬಂಡೆಕಲ್ಲುಗಳು ಮತ್ತು ಮುರಕಲ್ಲುಗಳು ನೆಲ ಬಿಟ್ಟು ಹೊರ ಚಾಚಿದ ಪ್ರದೇಶದ ಸಂದುಗಳಲ್ಲಿ ಕಲ್ಲುಗಳಿಂದ ದೊಡ್ಡ ಗುಹೆ ಗಳನ್ನು ನಿರ್ಮಿಸಿ ಅವುಗಳಲ್ಲಿ ಮರದ ತುಂಡು ಹುಟ್ಟು ತುಂಬಿಸಿ ಬೆಂಕಿ ಹಾಕಿ ನಿರಂತರವಾಗಿ ಹೊಗೆ ಉಗುಳು ವಂತೆ ಮಾಡುವುದು. ರಾತ್ರಿಯಲ್ಲಿ ಬೆಂಕಿ ಉರಿಸಿದಾಗ ಅದು ಕಾಡಿನಲ್ಲಿ ಕಾಣಿಸುತ್ತದೆ. ಪ್ರಾಣಿಗಳು ಬೆಂಕಿ ನೋಡಿ ನಾಡಿಗೆ ಇಳಿಯುದಿಲ್ಲ. ಹಗಲೆಲ್ಲಾ ಹೊಗೆ ಕಂಡು ಪಕ್ಷಿಗಳು ನಾಡಿಗೆ ಬರುವುದಿಲ್ಲ. ಪಾಂಡ್ಯರ ಎರಡನೆಯ ಪ್ರಯೋಗವೇ ಪಾಂಡ್ಯರ ಬೆಂಕಿಗೂಡು (ಪಾಂಡವರ ಕಲ್ಲು).ಇದು ಎತ್ತರದಲ್ಲಿ ಇರುವ ವಿಶಾಲ ವಾದ ಪಾದೆಕಲ್ಲು ಅಥವಾ ಮುರಕಲ್ಲು ಪ್ರದೇಶದಲ್ಲಿ ಇರುತ್ತದೆ. ಇದು ದೊಡ್ಡ ಮಟ್ಟದಲ್ಲಿ ಇರುತ್ತದೆ. ಇದು ತೆರೆದ ಜಾಗದಲ್ಲಿ ಕಲ್ಲು ಚಪ್ಪಡಿಗಳಲ್ಲಿ ಗೂಡುಗಳನ್ನು ಕಟ್ಟುವುದು.ಒಂದು ಗೂಡಲ್ಲಿ ಹಗಲು ಹೊತ್ತಿನಲ್ಲಿ ನಿರಂತರವಾಗಿ ಹೊಗೆ ಬರುತ್ತಿರುತ್ತದೆ.ಇನ್ನೊಂದರಲ್ಲಿ ನಿರಂತರವಾಗಿ ರಾತ್ರಿಯಲ್ಲಿ ಬೆಂಕಿ ಉರಿಯುತ್ತಿರುತ್ತದೆ. ಹಗಲು ಹೊತ್ತಿನಲ್ಲಿ ಹೊಗೆ ಹಾಕಿ ಪಕ್ಷಿಗಳನ್ನು ಇಳಿಯ ದಂತೆ ಹೆದರಿಸುವ ಪ್ರಯೋಗ.ರಾತ್ರಿ ಹೊತ್ತು ಗೂಡಲ್ಲಿ ಬೆಂಕಿ ಹಾಕಿ ಉರಿಯುವಂತೆ ಮಾಡಿ ಪ್ರಾಣಿಗಳನ್ನು ಹೆದರಿಸುವ ಪ್ರಯೋಗ.

 

(ಕಲ್ಲಬೆಟ್ಟು ಗಂಟೆಯ ಕಟ್ಟೆಯ ಮೇಲೆ ಗಂಟೆಯನ್ನು ನೇತು ಹಾಕುವ ಕಲ್ಲಿನ ಕೊಕ್ಕೆ.ಎಡಕ್ಕೆ ಇದೆ ಕಾವಲುಗಾರರ ವಿಶ್ರಾಂತಿಯ ಸ್ಥಳ.ಮಧ್ಯದಲ್ಲಿ ಕಾವಲಿನ ಶ್ವಾನಗಳು. ಬಲಕ್ಕಿದೆ ಅಗ್ಗಿಷ್ಟಿಕೆ.)

ನಂತರದಲ್ಲಿ ಕೃಷಿ ಜಮೀನುಗಳಲ್ಲಿ ಬೆಳೆಸಿದ್ದ ಬೆಳೆಯ ನ್ನು ರಕ್ಷಿಸುವ ಸಲುವಾಗಿ ಗುಡುಂಬು ಅಥವಾ ಗುಡು ಮ್ಮೆಗಳನ್ನು ನಿರ್ಮಾಣ ಮಾಡಿ ಅಲ್ಲಿ ಕಾವಲುಗಾರರ ನ್ನು ಇರಿಸಿ ಗಂಟೆಗಳನ್ನು ಬಾರಿಸುವ ಹೊಸ ಪ್ರಯೋಗ ವನ್ನು ತರುವರು.ಹಗಲು ರಾತ್ರಿ ಕಾವಲುಗಾರರು ಅಲ್ಲದೆ ಸಾಕಿದ ನಾಯಿಗಳೂ ಇಲ್ಲಿರುತ್ತವೆ.ಇಲ್ಲೂ ಹೊಗೆ ಮತ್ತು ಬೆಂಕಿ ಹಾಕುವ ವ್ಯವಸ್ಥೆ ಇರುತ್ತದೆ. ನಾಯಿಗಳ ಸಹಾಯದಿಂದ ಬೇಟೆ ಆಡಿ ಮೃಗ ಪಕ್ಷಿಗಳನ್ನು ಹದ್ದು ಬಸ್ತಿನಲ್ಲಿಡುವುದು.ನಾಡಿಗೆ ಬಾರದಂತೆ ಬಂದೋಬಸ್ತ್ ಮಾಡುವುದು.ಹಗಲು ರಾತ್ರಿ ಗಂಟೆ ಬಾರಿಸುವುದು.ಈ ರೀತಿಯ ಪ್ರಯೋಗ ಹೆಚ್ಚು ಯಶಸ್ಸನ್ನು ಕಾಣುತ್ತದೆ. ಆದರೆ ಮಳೆಗಾಲದಲ್ಲಿ ಇವುಗಳನ್ನು ನಿರ್ವಹಣೆ ಮಾಡುವುದು ಕಷ್ಟ ಸಾಧ್ಯ ಆಗುತ್ತದೆ. ಅಲ್ಲದೆ ಊರೆಲ್ಲಾ ವಿಶಾಲವಾದ ಜಮೀನು ಇದ್ದವರಿಗೆ ಜಮೀನು ಒಳಗೆಲ್ಲ ಅಲ್ಲಲ್ಲಿ ಗುಡುಂಬು ನಿರ್ಮಿಸಿ ನಿರ್ವಹಿಸಲು ತುಂಬಾ ಕಷ್ಟ ಆಗುತ್ತದೆ. ಅಲ್ಲದೆ ಆ ಕಾಲವು ಎಂಟು ತಿಂಗಳು ಮಳೆ ಬರುವ ಕಾಲವಾಗಿತ್ತು.

ಕಲ್ಲಬೆಟ್ಟು ಗಂಟೆಯ ಕಟ್ಟೆಯ ಕಾವಲುಗಾರರ ವಿಶ್ರಾಂತಿಯ ಸ್ಥಳ.

ಇಂತಹ ಪರಿಸ್ಥಿತಿಯಲ್ಲಿ ಪಾಂಡ್ಯರಿಗೆ ಒಂದು ಹೊಸ ಐಡಿಯಾ ಹೊಳೆಯುತ್ತದೆ.ಜಮೀನು ಒಳಗೆ ಅಲ್ಲಲ್ಲಿ ಗುಡುಂಬುಗಳನ್ನು ಮಾಡುವ ಬದಲು ದೊಡ್ಡ ಮಟ್ಟದಲ್ಲಿ ಕಲ್ಲಿನ ಗುಡುಂಬು ಒಂದನ್ನು ನಿರ್ಮಾಣ ಮಾಡಿದರೆ ಹೇಗೆಂದು ಯೋಚಿಸುತ್ತಾರೆ. ಪ್ರಾಣಿ ಪಕ್ಷಿಗಳು ಕಾಡಿನಿಂದ ಗಡಿ ದಾಟಿ ನಾಡಿಗೆ ಪ್ರವೇಶ ಮಾಡದಂತೆ ಬಂದೋಬಸ್ತಿ ಮಾಡುವುದು. ಹದ್ದು ಬಸ್ತಿನಲ್ಲಿಡುವುದು. ಅದಕ್ಕಾಗಿ ಬೃಹತ್ ಕಲ್ಲಿನ ಗುಡುಂಬುಗಳನ್ನು ನಿರ್ಮಾಣ ಮಾಡುವ ಯೋಜನೆ ಮಾಡುವರು.ಕಲ್ಲುಗಳಿಂದಲೇ ಅಟ್ಟಳಿಗೆ ಕಟ್ಟೆಗಳಂತೆ ನಿರ್ಮಾಣ ಮಾಡುವ ಯೋಜನೆ.

(ಕಲ್ಲಬೆಟ್ಟು ಗಂಟೆಯ ಕಟ್ಟೆಯ ಅಗ್ಗಿಷ್ಟಿಕೆ. ಹೋಮಕುಂಡದಂತೆ ಇದೆ.)

ಕಲ್ಲಿನ ಕಟ್ಟೆಗಳನ್ನು ಕಟ್ಟಲು ಎತ್ತರದ ಪಾದೆಯನ್ನೇ ನೋಡುತ್ತಾರೆ. ಪಾದೆಗಳ ಸುತ್ತಲೂ ಆಳದಂತೆ ಕಂದಕ ದಂತೆ ಇರುವ ಪಾದೆಯನ್ನು ಆರಿಸುತ್ತಾರೆ. ಪಾದೆ ಹತ್ತಿ ಪ್ರಾಣಿಗಳು ಈ ಕಟ್ಟೆಯ ಹತ್ತಿರ ಬರಬಾರದು ಎಂಬ ಉದ್ದೇಶ. ಊರೆಲ್ಲಾ ನಾಡೆಲ್ಲಾ ಕಾಣುವಂತಹ ಎತ್ತರದ ಪಾದೆಯ ಮೇಲೆ ಈ ಗುಡುಂಬು ಕಟ್ಟೆಯನ್ನು ಬೃಹತ್ ಹತ್ತಾರು ಕಲ್ಲು ಕಂಭಗಳಿಂದ ನಿರ್ಮಾಣ ಮಾಡುವ ಯೋಜನೆ.ಮೇಲಿನ ಛಾವಣಿಯೂ ಬೃಹತ್ತಾದ ಕಲ್ಲು ಚಪ್ಪಡಿಗಳಿಂದ ರಚಿಸುತ್ತಾರೆ. ಹಗಲು ರಾತ್ರಿ ಕಾವಲು ಗಾರರು ತಮ್ಮ ಕಾವಲು ನಾಯಿಗಳೊಡನೆ ಇಲ್ಲೇ ವಾಸ ಇರುತ್ತಾರೆ. ಕಟ್ಟೆಯ ಮೇಲೆ ತುದಿಯಲ್ಲಿ ಗಂಟೆಯನ್ನು ಹಗ್ಗದಿಂದ ಕಟ್ಟಿ ಹಗ್ಗದ ಇನ್ನೊಂದು ಕೊನೆಯನ್ನು ಈ ಕಟ್ಟೆಯ ಒಳಭಾಗದಲ್ಲಿ ಇರುತ್ತದೆ.ಈ ಕಟ್ಟೆಯ ಒಂದು ಭಾಗದಲ್ಲಿ ವಿಶ್ರಾಂತಿ ಜಾಗ ಇರುತ್ತದೆ. ಅಲ್ಲೇ ಗಂಟೆಯ ಹಗ್ಗದಿಂದ ಗಂಟೆ ಬಾರಿಸುವುದು. ಕಟ್ಟೆಯ ಇನ್ನೊಂದು ಕೊನೆಯ ಭಾಗದಲ್ಲಿ ಅಗ್ಗಿಷ್ಟಿಕೆ ಇರುತ್ತದೆ.ಇಲ್ಲಿ ಬೆಂಕಿ ಹಾಕಿ ರಾತ್ರಿ ಉರಿಸುವುದು ಮತ್ತು ಹಗಲು ಹೊಗೆ ಬರಿಸುವುದು. ಇದೇ ಕಟ್ಟೆಯಲ್ಲಿ ಕಾವಲುಗಾರರಿಗೆ ಮತ್ತು ಕಾವಲು ಕಾಯುವ ನಾಯಿಗಳಿಗೆ ಅಡುಗೆ ಮಾಡುವುದು. ಬೇಸಗೆಯಲ್ಲಿ ಹೊರಗೆ ಪಾದೆಯಲ್ಲೇ ಅಡುಗೆ ಊಟ ನಡೆಯುತ್ತದೆ. ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಕಟ್ಟೆ ಸುತ್ತಲೂ ಪನೊಲಿ,ತಾರಿ,ತೆಂಗು ಇತ್ಯಾದಿ ಬೇರೆ ಬೇರೆ ಸೋಗೆಗಳಿಂದ ತಟ್ಟಿ ಅಥವಾ ತಡಿಕೆಗಳಿಂದ ಸಂರಕ್ಷಿಸಿಕೊಳ್ಳುವುದು.

ಗಂಟಾಲಕಟ್ಟೆಯ ಕಲ್ಲಬೆಟ್ಟು ಇಲ್ಲಿನ  ಗಂಟೆಯ ಕಟ್ಟೆ.ಎಡಕ್ಕೆ ಕಾವಲುಗಾರರು.ಮಧ್ಯದಲ್ಲಿ ಕಾವಲಿನ ಶ್ವಾನದಳ.ಬಲಕ್ಕಿದೆ ಅಗ್ಗಿಷ್ಟಿಕೆ ಅಗ್ನಿ ಕುಂಡ.

ಕಾಡಿಂದ ಪ್ರಾಣಿಗಳು ಮತ್ತು ಪಕ್ಷಿಗಳು ನಾಡಿಗೆ ಪ್ರವೇಶಿಸಿ ಬೆಳೆ ಹಾಳು ಮಾಡದಂತೆ ಮತ್ತು ಸಾಕು ಪ್ರಾಣಿಗಳ ರಕ್ಷಣೆಗಾಗಿ ಈ ಕಲ್ಲಿನ ಗಂಟೆಯ ಕಟ್ಟೆ ಯನ್ನು ದೊಡ್ಡ ಪ್ರಮಾಣದಲ್ಲಿ ಕಟ್ಟಿದ್ದಾರೆ. ಇಲ್ಲಿ ಕಾವಲುಗಾರರು ಅಲ್ಲದೆ ಕಾವಲು ನಾಯಿಗಳಿವೆ (ಈಗಿನ ಪೋಲೀಸರ ಶ್ವಾನದಳದಂತೆ).ಹಗಲು ಸಮಯದಲ್ಲಿ ಗಂಟೆ ಜೋರಾಗಿ ಬಾರಿಸಿದರೆ ಬರುವ ಅಸಂಖ್ಯಾತ ಪಕ್ಷಿಗಳು ಗಡಿಯಿಂದ ದೂರ ಹೋಗುತ್ತ ವೆ.ಅಗ್ಗಿಷ್ಟಿಕೆಯಲ್ಲಿ ಹಗಲು ಹೊಗೆ ಬರಿಸಿದರೆ ಅದು ಊರೆಲ್ಲಾ ಗಾಳಿಯಲ್ಲಿ ಪಸರಿಸುತ್ತದೆ. ಹಕ್ಕಿಗಳಿಗೆ ಹೊಗೆ ಕಂಡರೆ ಭಯ ಆಗುತ್ತದೆ. ಕಾವಲು ನಾಯಿಗಳು ಬೊಗಳುವಾಗ ಹಕ್ಕಿಗಳು ಭಯದಿಂದ ನಾಡಿಗೆ ಬರು ವುದಿಲ್ಲ. ಕಾವಲು ನಾಯಿಗಳೊಡನೆ ಕಾವಲುಗಾರರು ಬೇಟೆ ಆಡುವುದು ಕೂಡಾ ಇತ್ತು. ಅವುಗಳಿಗೂ ಅದೇ ರೀತಿಯಲ್ಲಿ ತರಬೇತಿ ಇರುತಿತ್ತು. ನಾಡಿನ ಗಡಿ ಯಿಂದ ಅವುಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕೆಲಸ ಇತ್ತು .ರಾತ್ರಿಯಲ್ಲಿ ಗಂಟೆಯ ಶಬ್ಧಗಳು ಮತ್ತು ಅಗ್ಗಿಷ್ಟಿಕೆ ತುಂಬಾ ಉರಿಯುವ ಬೆಂಕಿ ಇವುಗಳನ್ನು ಕೇಳಿ ನೋಡಿ ಪ್ರಾಣಿಗಳು ನಾಡಿನ ಗಡಿಯಿಂದ ಪಲಾಯನ ಮಾಡು ತ್ತವೆ. ಎತ್ತರದಲ್ಲಿರುವ ಕಟ್ಟೆಯ ಕಾವಲು ನಾಯಿಗಳು ರಾತ್ರಿ ಬೊಗಳಿದರೆ ಊರಿನ ನಾಯಿಗಳೂ ಎಚ್ಚೆತ್ತು ಬೊಗಳಲು ಆರಂಭಿಸುತ್ತವೆ.ಎತ್ತರದಲ್ಲಿ ಕಾಣುವ ಈ ಕಟ್ಟೆಗಳ ಕಲ್ಲುಗಳು ದೂರಕ್ಕೆ ಯಾರೋ ನಿಂತಿರುವಂತೆ ಕಾಣುತ್ತದೆ.

(ಗಂಟಾಲಕಟ್ಟೆ ಕೊಡಂಗಲ್ಲು ಇಲ್ಲಿನ ಕಲ್ಲಿನ ಗಂಟೆಯ ಕಟ್ಟೆ.ಎದುರಿಗೆ ಇದೆ ಗಂಟೆಯ ಕಂಭವನ್ನು ಫಿಕ್ಸ್ ಮಾಡುವ ಸಣ್ಣ ಕಲ್ಲಿನ ಚಿಟ್ಟೆ.)

ತುಲುನಾಡಿನ ಕಾರ್ಕಳದ ಪರ್ಪಲೆ ಗುಡ್ಡೆ, ಕಾಂತಾವರ, ಸ್ಥಳಗಳಲ್ಲಿ ಪಾಂಡ್ಯರ ಹೊಗೆ ಗೂಡುಗಳು(ಪಾಂಡವರ ಗುಹೆ)ಮತ್ತು ಪಳ್ಳಿ ಮತ್ತು ಬೋರ್ಕಟ್ಟೆ ‌‌ಸ್ಥಳಗಳಲ್ಲಿ ಪಾಂಡ್ಯರ ಬೆಂಕಿ ಗೂಡು(ಪಾಂಡವರ ಕಲ್ಲು)ಗಳನ್ನುಈಗಲೂ ಕಾಣಬಹುದು.ಹೆಬ್ರಿ ಸಮೀಪದ ಪಾಂಡುಕಲ್ಲು ಎಂಬಲ್ಲೂ ಪಾಂಡವರ ಬೆಂಕಿ ಗೂಡು ಇತ್ತು. ಮೂಡಬಿದ್ರೆಯ ಇಟಲ ಎಂಬಲ್ಲಿ ಪಾಂಡ್ಯರ ಹೊಗೆ ಗೂಡು ನೋಡಬಹುದು. ಮೂಡಬಿದ್ರೆಯ ಸಮೀಪ ಇರುವ ಗಂಟಾಲಕಟ್ಟೆಯ ಕಲ್ಲ ಬೆಟ್ಟು ಮತ್ತು ಕೊಡಂಗ ಲ್ಲು ಸ್ಥಳಗಳಲ್ಲಿ ಈಗಲೂ ಗಟ್ಟಿ ಮುಟ್ಟಾದ ಪುರಾತನದ ಅಂದಿನ ಗಂಟೆಯ ಕಟ್ಟೆಗಳು ಇವೆ.ಅಂದು ಪ್ರಾಣಿಗಳು ಮತ್ತು ಪಕ್ಷಿಗಳು ಕಾಡಿಂದ ನಾಡಿಗೆ ಬಾರದಂತೆ ಬಂದೋಬಸ್ತ್ ಮಾಡಿ ಹದ್ದುಬಸ್ತಿಯಲ್ಲಿಡಲು ನಿರ್ಮಾಣ ಮಾಡಿದ ಈ ಗಂಟೆಯ ಕಟ್ಟೆಗಳು ಇರುವು ದರಿಂದಲೇ ಈ ಊರಿಗೆ “ಗಂಟಾಲಕಟ್ಟೆ”ಎಂಬ ಹೆಸರು ಬಂದಿದೆ.

(ಕೊಡಂಗಲ್ಲು ಗಂಟೆಯ ಕಟ್ಟೆಯಲ್ಲಿ ಗಂಟೆ ಹೊತ್ತ ಕೋಲನ್ನು ಇಲ್ಲಿ ಫಿಕ್ಸ್ ಮಾಡುವ ವ್ಯವಸ್ಥೆ.)

ಈ ಗಂಟೆಗಳ ಕಟ್ಟೆಗಳನ್ನು “ನಾಯಿಬಸ್ತಿ”ಎಂದು ಇಲ್ಲಿನ ಸ್ಥಳೀಯರು ತುಲು ಭಾಷೆಯಲ್ಲಿ ಕರೆಯುತ್ತಾರೆ. ಇಲ್ಲಿ “ಬಸ್ತಿ”ಎಂದರೆ ಬಸದಿ ಎಂಬ ಅರ್ಥವಲ್ಲ.”ಬಸ್ತಿ” ಎಂದರೆ ಕಾವಲು (guarding)ಎಂಬ ಅರ್ಥವಾಗಿದೆ. ಗಂಟೆಯ ಕಟ್ಟೆಗಳಲ್ಲಿ ಕಾವಲುಗಾರರೊಡನೆ ನಾಯಿ ಗಳೂ ಕಾವಲುಗಾರರಂತೆ ಇದ್ದವು(ಪೋಲೀಸರೊಡನೆ ಶ್ವಾನದಳದಂತೆ).ಗಂಟೆ,ಬೆಂಕಿ,ಹೊಗೆ,ಕಾವಲುಗಾರರು, ಮತ್ತು ಶ್ವಾನಗಳು ಈ ಗಂಟೆಯ ಕಟ್ಟೆಗಳಲ್ಲಿ ಇದ್ದವು. ಈ ಎಲ್ಲಾ ಸೆಕ್ಯೂರಿಟಿ ಒಡನೆ ಪ್ರಾಣಿ ಪಕ್ಷಿಗಳನ್ನು ಕಾಡಿಂದ ನಾಡಿಗೆ ಬಾರದಂತೆ ಬಂದೋ”ಬಸ್ತಿ”ನಲ್ಲಿ ಇಡುವುದು. ಗಡಿಯಲ್ಲಿ ಗಡಿ ದಾಟದಂತೆ ಹದ್ದು”ಬಸ್ತಿ” ನಲ್ಲಿಡುವುದು.ಕಾವಲು ಕಾಯುವುದು.”ಬಸ್ತಿ”(ಕಾವಲು)ಯಲ್ಲಿ ಇರುವ ನಾಯಿಗಳನ್ನು “ಬಸ್ತಿ” ನಾಯಿ (ಕಾವಲು ನಾಯಿ-Watching dog-hunting dog) ಎಂದಿದ್ದಾರೆ. ಕ್ರಮೇಣವಾಗಿ “ನಾಯಿ ಬಸ್ತಿ” ಎಂದು ತುಲುವರು ಕರೆದರು.

(ಕೊಡಂಗಲ್ಲು ಗಂಟೆಯ ಕಟ್ಟೆ.ಗಂಟೆಯ ಧ್ವಜ ಕೋಲನ್ನು ಎದುರುರಲ್ಲಿ ಕಾಣುವ ಅದಕ್ಕೆಂದೇ  ನಿರ್ಮಾಣ ಮಾಡಿದ ಸಣ್ಣಗಿನ ಕಲ್ಲಿನ ಕಟ್ಟೆಯ ತೂತಿಗೆ ಫಿಕ್ಸ್ ಮಾಡುವುದು. ಅದರ ಹಗ್ಗವನ್ನು ಎದುರು ಇರುವ ಕಾವಲುಗಾರರ ವಿಶ್ರಾಂತಿಯ ಸ್ಥಳದಲ್ಲಿ ಇರುತ್ತದೆ.ಗಂಟೆ ಹೊತ್ತ ಫಿಕ್ಸ್ ಮಾಡುವ ಕಂಭ ಎತ್ತರ ಇರುತ್ತದೆ. ಅದು ಮರದ್ದು ಇದ್ದಿರಬಹುದು.ಮಳೆಗೆ ಮತ್ತು ಬಿಸಿಲಿಗೆ ತೆಗೆಯುವ ವ್ಯವಸ್ಥೆ ಇರಲೂಬಹುದು. ಕೊನೆಯಲ್ಲಿ ಅಗ್ಗಿಷ್ಟಿಕೆ. ಮಧ್ಯದಲ್ಲಿ ಕಾವಲಿನ ನಾಯಿಗಳು.) 

 

ಪಾಂಡ್ಯರ ಬೆಂಕಿ ಗೂಡುಗಳು. (ತಪ್ಪಾಗಿ ಪಾಂಡವರ ಕಲ್ಲುಗಳು ಎನ್ನುತ್ತಾರೆ)

 

ಪಾಂಡ್ಯರ ಹೊಗೆ ಗೂಡುಗಳು. (ತಪ್ಪಾಗಿ ಪಾಂಡವರ ಗುಹೆ ಎನ್ನುತ್ತಾರೆ)

 

(ಅಂದಿನ ಪುರಾತನದ ಹೊಗೆ ಗೂಡಿನ ಹೊಗೆಯ ಮಸಿ ಇನ್ನೂ ಮಾಸಿಲ್ಲ. ಈ ಗುಹೆಯ ಮೇಲ್ಛಾವಣಿ ಮತ್ತು ಮೂರು ಬದಿಯಲ್ಲಿ ಇರುವ ಬಂಡೆಕಲ್ಲುಗಳು ಪ್ರಕೃತಿಯೇ ಕೊಟ್ಟಿರುವುದು.ಅದು ನೆಲಬಿಟ್ಟು ಹೊರಗೆ ಚಾಚಿರುತ್ತದೆ.)

ವರ್ಷಗಳು ಕಳೆದಂತೆ ಪಾಂಡ್ಯರು ಹೊಲಗದ್ದೆಗಳನ್ನು ಗೇಣಿಗೆ ಕೊಡುವರು.ಗೇಣಿದಾರರು ತಮ್ಮ ತಮ್ಮ ಭೂಮಿ ಜಮೀನುಗಳನ್ನು ಬಂದೋಬಸ್ತ್ ಮಾಡುವ ರು.ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವರು.ಜಮೀನಿನಲ್ಲಿ ತಮ್ಮದೇ ಗುಡುಂಬು ಗುಡುಮೆಗಳನ್ನು ನಿರ್ಮಿಸಿ ಅಲ್ಲೇ ಗಂಟೆ ಬಾರಿಸುವರು.ತಮ್ಮದೇ ಸಾಮಾನ್ಯ ಅಗ್ಗಿಷ್ಟಿಕೆಯಲ್ಲಿ ಬೆಂಕಿ ಹಾಕುವರು.ಜಮೀನಿನ ಪಕ್ಕನೇ ಮನೆ ಮಾಡುವರು. ಮನೆಗಳಲ್ಲಿ ಗಂಟೆಯ ಕಟ್ಟೆಯ ಎಲ್ಲಾ ಚಿತ್ರಣಗಳು ಇರುವುದು. ನಾಡಲ್ಲಿ ಜನಸಂಖ್ಯೆ ಹೆಚ್ಚಾಗುತ್ತದೆ. ಮನೆಗಳು ಹೆಚ್ಚಾಗುತ್ತದೆ. ಪ್ರತಿ ಮನೆ ಯಲ್ಲೂ ಬೆಂಕಿ ಉರಿಯುತ್ತದೆ.ಹೊಗೆಯಾಡುತ್ತದೆ. ನಾಯಿಗಳು “ಬಸ್ತಿ”(ಕಾವಲಾಗಿ)ಯಾಗಿ ಇರುತ್ತವೆ.

 

ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ
(ನಿವೃತ್ತ ವಿಜಯಾಬ್ಯಾಂಕ್ಕ್ ಮ್ಯಾನೇಜರ್)

Leave a Reply

Your email address will not be published. Required fields are marked *