September 20, 2024

  ಧ್ಯಾನ-15  

    ಸತ್ಯಕ್ಕೆ, ನಿಜವಾದ ದೇವರಿಗೆ, ಮನುಷ್ಯ ನಿರ್ಮಿತ ದೇವರಲ್ಲ, ನಿಜವಾದ ದೇವರಿಗೆ ನಾಶಗೊಂಡ, ಕ್ಷುಲ್ಲಕವಾದ, ಆಳವಿಲ್ಲದ, ಸಂಕುಚಿತವಾದ, ಪರಿಮಿತವಾದ ಮನಸ್ಸು ಬೇಕಾಗಿಲ್ಲ. ಅದಕ್ಕೆ ಬೇಕಾಗಿರುವುದು ತನ್ನನ್ನು ಅರಿತು ಮೆಚ್ಚುವಂಥ ಮನಸ್ಸು. ಜ್ಞಾನ ಶ್ರೀಮಂತವಾದ ಮನಸ್ಸಲ್ಲ, ಅನುಭವದ ತರಚುಗಾಯಗಳಿಲ್ಲದ, ಕಾಲಮುಕ್ತವಾದ ಮನಸ್ಸು. ನಿಮ್ಮ ಸುಖಕ್ಕೆಂದು ನೀವು ಕಲ್ಪಿಸಿಕೊಂಡಿರುವ ದೇವರಗಳು ಪೀಡನೆಯನ್ನು ಒಪ್ಪಿಕೊಳ್ಳುತ್ತಾರೆ, ಮಂಕಾದ ಮನಸ್ಸನ್ನೂ ಒಪಿಕೊಳ್ಳುತ್ತಾರೆ‌. ಆದರೆ ಸತ್ಯಕ್ಕೆ, ನಿಜವಾದ ದೇವರಿಗೆ ಅದೇನೂ ಬೇಕಾಗಿಲ್ಲ. ಅದಕ್ಕೆ ಬೇಕಾಗಿರುವುದು ಸಮಗ್ರವಾದ, ಸಂಪೂರ್ಣವಾದ ಮನುಷ್ಯಜೀವಿ. ಹೃದಯಶ್ರೀಮಂತಿಕೆಯುಳ್ಳ, ಸ್ಪಷ್ಟತೆಯುಳ್ಳ, ತೀವ್ರಭಾವ ಸಾಮರ್ಥ್ಯವುಳ್ಳ ಮರದ ಚೆಲುವನ್ನು ಮಗುವಿನ ನಗೆಯನ್ನೂ ಹೊಟ್ಟೆತುಂಬ ಅನ್ನವಿಲ್ಲದಿರುವ ಹೆಣ್ಣಿನ ವೇದನೆಯನ್ನೂ ಅರಿಯಬಲ್ಲ, ನೋಡಬಲ್ಲ ಮನಸ್ಸು ಬೇಕು.
         ಈ ಅಸಾಮಾನ್ಯ ಭಾವ ನಿಮ್ಮಲ್ಲಿರಬೇಕು, ಅಗೋ ಅಲ್ಲಿ ಗೋಡೆಯ ಅಂಚಿನಲ್ಲಿ ಮೆಲ್ಲಗೆ  ಸಾಗುತ್ತಿರುವ ಬೆಕ್ಕು, ಬಡತನ, ಹತಾಶೆಗಳಲ್ಲಿ ಸಿಲುಕಿರುವ ಮನುಷ್ಯರ ಬದುಕಿನ ಕಾರ್ಪಾಣ್ಯ, ಕೊಳೆ, ಕಸ, ಎಲ್ಲದಕ್ಕೂ ಸಂವೇದಿಸಬಲ್ಲ ಭಾವ ಇರಬೇಕು. ನಿಮ್ಮಲ್ಲಿ ತೀವ್ರವಾದ ಸಂವೇದನಾಶೀಲತೆ ಇರಬೇಕು. ಯಾವಾಗಲೋ ಬಂದುಹೊಗುವ ಭಾವವಲ್ಲ, ನಿಮ್ಮ ನರಮಂಡಲ, ನಿಮ್ಮ ಕಣ್ಣು, ನಿಮ್ಮ ದೇಹ, ನಿಮ್ಮ ಕಿವಿ, ನಿಮ್ಮದನಿ ಎಲ್ಲದರಲ್ಲೂ ಆ ಸಂವೇದನೆ ಇರಬೇಕು. ಎಲ್ಲಾ ಸಮಯದಲ್ಲೂ ಎಲ್ಲಾ ಕಾಲದಲ್ಲೂ ನೀವು ಸಂವೇದನಶೀಲರಾಗಿರಬೇಕು. ಹಾಗೆ ಸಂಪೂರ್ಣ ಸಂವೇದನಾಶೀಲರಲದಲದಿದ್ದರೆ ನಿಮ್ಮಲ್ಲಿ ವಿವೇಕವಿರುವುದಿಲ್ಲ. ವಿವೇಕವು ಸಂವೇದನೆ ಮತ್ತು ಗಮನಗಳೊಡನೆಯೇ ಇರುತ್ತದೆ.
ಮರದ ಕೊಂಬೆಯೊಂದರ ವಕ್ರಬಾಗು‌ ಬಳುಕು, ಇತರರ ದುಃಖ ಕುರಿತ ಸಂವೇದನೆ, ಸೂರ್ಯಾಸ್ತದ ಚೆಲುವನ್ನು ಕಂಡಾಗ ಆಗುವ ಆನಂದೋದ್ರೆಕ ಇವೆಲ್ಲವನ್ನೂ ಗ್ರಹಿಸುವ, ಮೆಚ್ಚುಗುಣವನ್ನೇ ನಾವು ಭಾವವೆಂದು ಕರೆಯಬಹುದು. ಇವು ಸೆಂಟಿಮೆಂಟ್ಗಳಲ್ಲ, ಕೇವಲ ಎಮೋಶನ್ಗಳಲ್ಲ ಅವುಗಳನ್ನು ಸಮಾಜ ಬಳಸುತ್ತದೆ. ಸೆಂಟಿಮೆಂಟ್ ಮತ್ತು ಸೆನ್ಸೇಶನ್ ಗಳು ಇದ್ದಾಗ ನಾವು ಸಮಾಜದ ಗುಲಾಮರಾಗುತ್ತೇವೆ. ಆದರೆ ನಮ್ಮಲ್ಲಿ ಮಹಾನ್ ಭಾವಗಳಿರಬೇಕು. ಚೆಲುವನ್ನು ಕುರಿತು, ನಾವು ಬಳಸುಚ ಪದಗಳ ಕುರಿತು, ಎರಡು ಪದಗಳ ನಡುವೇ ಇರುವ ಮೌನದ ಕುರಿತ, ಶಬ್ದವನ್ನು ಕೇಳುವಂತ ಭಾವ ಇರಬೇಕು. ನಮ್ಮಲ್ಲಿ ಸದೃಡವಾದ ಸಶಕ್ತವಾದ ಭಾವವಿರಬೇಕು ಆಗ ನಮ್ಮ ಮನಸ್ಸು ಅತ್ಯಂತ ಶ್ರೀಮಂತವಾಗುತ್ತದೆ, ಸಮಾಜಕ್ಕೆ ಚೈತನ್ಯ ತುಂಬುತ್ತದೆ.

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
✍🏻: ವೆಂಕಟೇಶ ಭಂಡಾರಿ ಕುಂದಾಪುರ

Leave a Reply

Your email address will not be published. Required fields are marked *