September 17, 2024

ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನುಸಾರುವ ಆಟಿಡೊಂಜಿ ದಿನ (ಆಷಾಢ ಮಾಸದ ಒಂದು ದಿನ) ಭಂಡಾರಿ ಸಮಾಜ ಸಂಘ ಮಂಗಳೂರು ಮತ್ತು ಭಂಡಾರಿ ಸ್ವಯಂಸೇವಕ ಸಂಘ ಮಂಗಳೂರು ಇವರ ನೇತೃತ್ವದಲ್ಲಿ ಮಂಗಳೂರಿನ ಕದ್ರಿಯಲ್ಲಿರುವ ಸುಮ ಸದನದಲ್ಲಿ ಜುಲೈ 21 ರ ಭಾನುವಾರದಂದು ಸಂಘದ ಅಧ್ಯಕ್ಷ ಮುರಳೀಧರ ಭಂಡಾರಿಯವರ ಅಧ್ಯಕ್ಷತೆ ಯಲ್ಲಿ ವಿಜೃಂಭಣೆಯಿಂದ ಯಶಸ್ವಿಯಾಗಿ ಜರಗಿತು.

 

ಕಾರ್ಯಕ್ರಮವನ್ನು ತೆಂಗಿನ ಮರದ ಹಿಂಗಾರವನ್ನು ಅರಳಿಸಿ ಉದ್ಘಾಟಿಸಿದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷ್ಮಣ ಕರಾವಳಿಯವರು ಅಂದಿನ ಕಾಲದಲ್ಲಿ ಆಷಾಡ ಮಾಸದಲ್ಲಿ ನಾವು ತಯಾರಿಸುತ್ತಿದ್ದ ತಿಂಡಿ ತಿನಿಸುಗಳು, ಆ ಸಂಸ್ಕೃತಿ ಈಗಿನ ಯುವಕರಲ್ಲಿ ಕ್ರಮೇಣ ಮರೆಯಾಗುತ್ತಿದ್ದು ಅದನ್ನು ನೆನಪಿಸಲು ಪ್ರತೀ ವರ್ಷ ಇಂತಹ ಕಾರ್ಯಕ್ರಮವನ್ನು ನಮ್ಮ ಸಂಘಗಳು ಆಯೋಜಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದರು. ಇಂತಹ ಕಾರ್ಯಕ್ರಮಗಳಿಗೆ ಯುವಕರು ಸಾಧ್ಯವಾದಷ್ಟು ಪಾಲ್ಗೊಂಡು ಹಿಂದಿನ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಮತ್ತು ಹಿರಿಯರು ಆಚರಣೆಗಳ ಬಗ್ಗೆ ತಮ್ಮ ಮಕ್ಕಳಿಗೆ ತಿಳಿಸುವ ಮೂಲಕ ತುಳುನಾಡಿನ ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದರು.

ಮುಖ್ಯ ಅತಿಥಿಯಾದ ಭಂಡಾರಿ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಇವರು ಮಾತನಾಡುತ್ತಾ ಸಮಾಜದಲ್ಲಿ ಇಂತಹ ಕಾರ್ಯಕ್ರಮ ನಡೆಯುವಾಗ ಬಂಧುಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಭಂಡಾರಿ ಸಮಾಜ ಸಂಘ ಮಂಗಳೂರು ಸಂಘದ ಸ್ವಂತ ಜಾಗದಲ್ಲಿ ಭಂಡಾರಿ ಭವನ ನಿರ್ಮಾಣ ಮಾಡುವ ಯೋಜನೆ ಹಾಕಿದರೆ ಅದಕ್ಕೆ ಮುಂಬೈಯ ಸಮಾಜ ಬಾಂಧವರಿಂದ ಮತ್ತು ವೈಯಕ್ತಿಕವಾಗಿ ರೂ 2 ಕೋಟಿ ಧನ ಸಹಾಯ ದೊರಕಿಸಿ ಕೊಡುತ್ತೇನೆ ಅದೇ ರೀತಿ ಸಮಾಜದ ಇನ್ನೊಬ್ಬ ಬಂಧುವಿನ ಮೂಲಕ ರೂ 50 ಲಕ್ಷ ದೊರಕಿಸಿಕೊಡುವುದಾಗಿ ಆಶ್ವಾಸನೆ ನೀಡಿದರು ಸಭಾ ಭವನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಿದರು.

ಭಂಡಾರಿ ಮಹಾಮಂಡಲದ ಅಧ್ಯಕ್ಷ ಶಶಿಧರ ಕಾರ್ಕಳ ಮಾತನಾಡುತ್ತಾ ನಮ್ಮ ಹಿರಿಯರು ಮಳೆಗಾಲದಲ್ಲಿ ವಿವಿಧ ಬಗೆಯ ಸೊಪ್ಪುಗಳನ್ನು ಕಾಡುತ್ಪತ್ತಿಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು ಅಲ್ಲದೆ ಆಟಿ ತಿಂಗಳ ಅಮಾವಾಸ್ಯೆಯ ದಿನದಂದು ಪಾಳೆ ಮರದ ಕಷಾಯ ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಕಾರಿಯಾಗುತ್ತಿತ್ತುಈ ನಿಟ್ಟಿನಲ್ಲಿ ಇಂದಿನ ಯುವ ಜನಾಂಗವನ್ನು ಜಾಗೃತಿಗೊಳಿಸುವ ಅವಶ್ಯಕತೆ ಇದೆ ಎಂಬುದಾಗಿ ಹೇಳಿದರು.

ಆಹಾರ ಮತ್ತು ಆರೋಗ್ಯದ ಬಗ್ಗೆ ಉಡುಪಿಯ ಉದ್ಯಾವರ ಎಸ್. ಡಿ ಎಮ್. ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಮತಾ ಕೆ. ವಿ. ಮಾತನಾಡುತ್ತಾ ಹಿಂದೆ ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕೃಷಿಕರಿಗೆ ಮನೆಯ ಉಪ್ಪರಿಗೆಯಲ್ಲಿ ಅಕ್ಕಿ ಮುಡಿ ಇದ್ದರೆ ಮಾತ್ರ ಊಟ ಇಲ್ಲದಿದ್ದರೆ, ಗಂಜಿ ನೀರೇ ಗತಿ. ಮಾವಿನಕಾಯಿ ಸೌತೆಕಾಯಿ ಹಲಸಿನ ಕಾಯಿ ಉಪ್ಪು ನೀರಿನಲ್ಲಿ ಹಾಕಿ ಶೇಖರಿಸಿ ಮಳೆಗಾಲದಲ್ಲಿ ಇದರ ಪದಾರ್ಥ ಮಾಡುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಭಂಡಾರಿ ಸ್ವಯಂ ಸೇವಕ ಸಂಘದ ಅಧ್ಯಕ್ಷೆ ರಾಜೀವಿ ಮೂಡುಶೆಡ್ಡೆ ಯವರು ಡಿಸೆಂಬರ್ ತಿಂಗಳಿನಲ್ಲಿ ಮಂಗಳೂರಿನಲ್ಲಿ ನಡೆಯುವ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು ನಿರೀಕ್ಷೆಗೂ ಮೀರಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿ ಪ್ರೋತ್ಸಾಹಿಸಿದ ಸಮಾಜ ಬಂಧುಗಳಿಗೆ ಅಧ್ಯಕ್ಷ ಮುರಳೀಧರ ಭಂಡಾರಿ ಮತ್ತು ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಭಂಡಾರಿಯವರು ಪ್ರತ್ಯೇಕವಾಗಿ ಧನ್ಯವಾದ ಹೇಳಿದರು.

 

ಸುಮಾರು 46 ಬಗೆಯ ತಿಂಡಿ ತಿನಿಸುಗಳು ಇದ್ದವು ಹಳೆಯ ಕಾಲದ ಕೃಷಿ ಸಲಕರಣೆಯ ಸಾಮಗ್ರಿಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು.

 

ಪದ್ಮನಾಭ ಎಂ ಸ್ವಾಗತಿಸಿ, ಅನಿತಾ ಅಮರನಾಥ್, ಧನ್ಯಾ ಸುರತ್ಕಲ್ , ದಿವ್ಯ ಲತಾ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ವಾಣಿ ಎಸ್ ಭಂಡಾರಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *