September 20, 2024

ಕನ್ನಡ ಟೀಚರ್ ವಿದ್ಯಾರ್ಥಿಗಳಿಗೆ ಹಲಸಿನ ಬೀಜ  (ಪೆಲತ್ತರಿ ) ವಿಷಯವಾಗಿ ಎರಡು ಪುಟಗಳಿಗೆ ಮೀರದಂತೆ ಪ್ರಬಂಧ ಬರೆಯಲು ಹೇಳುತ್ತಾರೆ. ತಿಮ್ಮನು ಬರೆಯಲಾರಂಭಿಸಿದ. ಕನ್ನಡ -ತುಲು ಭಾಷೆ ಮಿಶ್ರಣ ಮಾಡಿ ಹೀಗೆ ಬರೆದ.

   “ಪೆಲಕಾಯಿ ಅಥವಾ ಗುಜ್ಜೆಯ ಬೀಜವೇ ಪೆಲತ್ತರಿ. ಇದು ಹಲಸಿನ ಮರಗಳಿಂದ ಸಿಗುತ್ತದೆ. ಹಿಂದಿನ ವರ್ಷಗಳಲ್ಲಿ ಪೆಲತ್ತರಿ ಸಂಗ್ರಹಿಸಿಟ್ಟು ವರ್ಷ ಇಡೀ ತಿನ್ನುತ್ತಿದ್ದರು. ಹಣ್ಣಾದ ಪೆಲಕಾಯಿದ ಪೆಲತ್ತರಿಯನ್ನು ಮಣ್ಣಿನೊಂದಿಗೆ ಮಿಶ್ರ ಮಾಡಿ ನೆಲದಲ್ಲಿ ಹಾಳಾಗದಂತೆ ಇಡುತ್ತಿದ್ದರು. ಕಾಯಿ ಗುಜ್ಜೆಯ ಪೆಲತ್ತರಿಗಳನ್ನು ಅಕ್ಕಿಯ ಉಮಿ ಮಿಶ್ರ ಮಾಡಿ ಮಣ್ಣಿನ ಒಡೆದ ಗುರ್ಕೆ, ಬಾನಿ, ಕಡ್ಯ, ಕರ ಇತ್ಯಾದಿ ಪಾತ್ರೆಗಳಲ್ಲಿ ಸಂಗ್ರಹಿಸುತ್ತಿದ್ದರು. ಕಾಯಿ ಗುಜ್ಜೆಯ ಪೆಲತ್ತರಿ ಮುಗಿದ ಮೇಲೆ ಹಣ್ಣು ಗುಜ್ಜೆ ಯ ಪೆಲತ್ತರಿ ತಿನ್ನಲು ಬಳಸುತ್ತಿದ್ದರು.
       
ಪೆಲತ್ತರಿಯು ಬಡವರ ಬಂಧು ಎಂದು ಹೇಳಿದರೆ ತಪ್ಪಾಗಲಾರದು. ನಾವು ಶಾಲೆ ಬಿಟ್ಟು ಮನೆಗೆ ಹೋಗಿ ತಿಪ್ಪಿಯಲ್ಲಿ ತಿನ್ನುವ ಪೆಲತ್ತರಿ ರುಚಿ ಅಧ್ಭುತವೋ ಅಧ್ಭುತ. ಪೆಲತ್ತರಿಯನ್ನು ಬೇರೆ ಬೇರೆ ಯಾಗಿ ಬಗೆ ಬಗೆಯ ರುಚಿಗಳಲ್ಲಿ ತಿನ್ನಲು ಬರುತ್ತದೆ. ಇದನ್ನು ಸಿಪ್ಪೆ ಸಹಿತ ಗೆಂಡದಲ್ಲಿ ಕಾಯದ್ ತಿಂದರೆ ಒಂದು ರುಚಿ ಆದರೆ ಮಣ್ಣಿನ ಓಡಿನಲ್ಲಿ ಹುರಿದು ತಿಂದರೆ ಇನ್ನೊಂದು ರುಚಿ. ಸಿಪ್ಪೆ ಸಹಿತ ಮತ್ತು ರಹಿತ ಬೇಯಿಸಿ ತಿಂದಾಗ ವಿವಿಧ ರುಚಿಯಲ್ಲಿರುತ್ತದೆ. ಬೇಯಿಸಿದ ಪೆಲತ್ತರಿಯನ್ನು ಎರಡು ಹೋಳುಮಾಡಿ ಬೇಯಿಸಿದ ಕೆರೆಂಗ್ ಪೂಲು ಒಡನೆ ತೆಂಗಿನ ಎಣ್ಣೆ ಯಲ್ಲಿ ನೆಸಲ್ ಕೊಟ್ಟು ಅದಕ್ಕೆ ತಾರಾಯಿ ಪೂವು ಹಾಕಿ ತಿಂದಾಗ ಖುಷಿಯೇ ಖುಷಿ. ವರ್ಣಿಸಲು ಆಗದ ರುಚಿ. ಇದು ಪಿಜ್ಜ ಪಿಜ್ಜಿ ಕಾಲದಿಂದಲೂ ಮಾಡುವ ವಿಶೇಷವಾದ ತಿಂಡಿ. ಅಂದು ಬ್ರಿಟಿಷರು ಇದರ ರುಚಿ ನೋಡಿ ಸೂಪರ್ ಟೇಸ್ಟ್ ಎನ್ನುತ್ತಿದ್ದರಂತೆ.
         ಬೇರೆ ಬೇರೆ ಕಜಿಪು, ಪಲ್ಯ,ಗಸಿ,ಕೊದ್ದೇಲ್ಗಳಲ್ಲಿ ಪೆಲತ್ತರಿಯನ್ನು ಬಳಸುತ್ತಾರೆ. ಸೌತೆಕಾಯಿಗೆ ಪೆಲತ್ತರಿ ಗುದ್ದಿ ಹಾಕಿ ಕೊದ್ದೇಲ್ ಮಾಡುವರು. ಪಚ್ಚೀರ್ ಕಜಿಪುಗೆ ಇದನ್ನು ಉದ್ದಕ್ಕೆ ತುಂಡು ಮಾಡಿ ಪಲ್ಯ ಮಾಡುತ್ತಾರೆ. ಕುಡುತ್ತ ಸಾರಿಗೆ ಉಪ್ಪಿನಲ್ಲಿ ಹಾಕಿದ ಮಾವಿನಕಾಯಿ, ಪೆಜಕಾಯಿ ಒಡನೆ ಪೆಲತ್ತರಿಯನ್ನು ಗುದ್ದಿ ಯಾ ತುಂಡರಿಸಿ ಹಾಕುವರು. ಬೈತರಿ ಗಂಜಿ ಅನ್ನಕ್ಕೆ ಪಸಂದಾಗುತ್ತಿತ್ತು. ತೊಜಂಕ್, ನೊಗ್ಗೆ ಸೊಪ್ಪು ಪಲ್ಯಕ್ಕೆ ಬೇಯಿಸಿದ ಪೆಲತ್ತರಿಯನ್ನು ಪುಡಿಮಾಡಿ ಬೆರೆಸುತ್ತಾರೆ. ಗುಜ್ಜೆ ಕಜಿಪುಗು ಇಡಿಬೋಲೆ ಹಾಕುತ್ತಾರೆ. ತೇವು ಕಜಿಪುಗೂ ಪೆಲತ್ತರಿ ಹಾಕುತ್ತಾರೆ.. ತೇವು ತೇಟ್ಲಕ್ಕೆ ಪಚ್ಚೀರ್ ಪೆಲತ್ತರಿ ಹಾಕಿ ಗಸಿ ತರ ಮಾಡುತ್ತಾರೆ. ಆಟಿ ತಿಂಗಳಲ್ಲಿ ಪೆಲತ್ತರಿ ಹವಾ ಎಲ್ಲರ ಮನೆಯಲ್ಲಿ ಸರ್ವೇ ಸಾಮಾನ್ಯ ಆಗಿದೆ.
        ನಮ್ಮ ಅಜ್ಜ ಹೇಳುವಂತೆ ಪೆಲತ್ತರಿಯು ಸರ್ವ ರೋಗಗಳಿಗೆ ದಿವ್ಯ ಔಷಧ. ನರ ದೌರ್ಬಲ್ಯ ಹೋಗಲಾಡಿಸಿ ಸಂತಾನ ಪ್ರಾಪ್ತಿ ಆಗುವುದಂತೆ.ವಾಯು ಬಾಧೆಯಿಂದ ಬಳಲುವವರಿಗೆ ಪೆಲತ್ತರಿಯು ಅಮೃತವಂತೆ. ಯಾವುದೇ ಅಡೆತಡೆ ಇಲ್ಲದೆ ಆರಾಮವಾಗಿ ಇರುವರು ಎಂದು ಅಜ್ಜ, ಅಜ್ಜಿ ಅಲ್ಲದೆ ಹಿರಿಯರೂ ಹೇಳುತ್ತಾರೆ.”
 ತಿಮ್ಮನ ಪೆಲತ್ತರಿಯ ಪ್ರಬಂಧಕ್ಕೆ ನೀವೇ ಅಂಕ ಕೊಡಬೇಕು !
                                                                                                                                                                                             
ಇ.ಗೋ.ಭಂಡಾರಿ, ಕಾರ್ಕಳ.

Leave a Reply

Your email address will not be published. Required fields are marked *