September 20, 2024
        ಮಕರ ಸಂಕ್ರಾಂತಿಯು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ.ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃಧ್ಧಿಯ ಸಂಕೇತ.  ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು. ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಈ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದೇ ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಈ ಕಾಲ ಪ್ರಮುಖವಾಗಿದೆ. ಉದಾಹರೆಣೆಗೆ ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವಕಾಲವನ್ನೇ ಕಾದಿದ್ದರು ಎಂಬ ಉಲ್ಲೇಖವೂ ಇದೆ. ಈ ದಿನ ಶ್ರೀರಾಮ ರಾವಣನನ್ನೂ ಸಂಹರಿಸಿ ಸೀತೆಯನ್ನೂ ಬಂಧನ ವಿಮುಕ್ತಿಗೊಳಿಸಿದ ದಿನವೆಂದೂ ನಂಬುತ್ತಾರೆ. ಸಂಕ್ರಾಂತಿಗೆ ವೈಜ್ಞಾನಿಕ ಕಾರಣವೂ ಇದೆ. ಅದೇನೆಂದರೆ ಸೂರ್ಯನು ಒಂದು ಧನಸ್ಸು ರಾಶಿಯಿಂದ ಮಕರ ರಾಶಿಗೆ ಚಲಿಸುವುದಕ್ಕೆ ಸಂಕ್ರಾಂತಿ ಎಂದು ಹೇಳುತ್ತಾರೆ.
          ನಮ್ಮ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನು ಎಳ್ಳು ಬೆಲ್ಲದೊಂದಿಗೆ ಆಚರಿಸುತ್ತೇವೆ. ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಮುತ್ತಲಿನ ನೆರೆ ಹೊರೆಯವರಿಗೆ ಬಂಧು ಬಳಗಕ್ಕೆ ಸ್ನೇಹಿತರಿಗೆ ಎಳ್ಳಿನೊಂದಿಗೆ ಬೆಲ್ಲವನ್ನೂ ನೀಡುವುದು ಸಂಪ್ರಾದಾಯ. ಈ ಪದ್ದತಿ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಎಳ್ಳು ಸೇವನೆಯಿಂದ ನಮ್ಮ ದೇಹದ ಸ್ಥಿತಿ ಚೆನ್ನಾಗಿರುತ್ತದೆ. ಇದಕ್ಕೆ ಪೂರಕವಾಗಿ ಹಬ್ಬವು ಚಳಿಗಾಲವಿರುವ ಜನವರಿ ತಿಂಗಳಿನಲ್ಲಿಯೇ ಬರುವುದು ವಿಪರ್ಯಾಸ. ಪ್ರತಿವರ್ಷ ಸಂಕ್ರಾಂತಿಯಂದು ಸಂಜೆ ಶಬರಿ ಮಲೆಯಲ್ಲಿ ಅಯ್ಯಪ್ಪನ ಸನ್ನಿಧಿಯಲ್ಲಿ ಸ್ವಾಮಿಯು ಬೆಳಕಿನ ರೊಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆಯಿಂದಲೇ ಅಯ್ಯಪ್ಪ ವ್ರತಧಾರಿಗಳಾದ ಲಕ್ಷೋಪಲಕ್ಷ ಭಕ್ತರು ಮಣಿಕಂಠನ ಸಾನಿಧ್ಯಕ್ಕೆ ತೆರಳುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಬೆಳಕನ್ನೂ ಕಂಡರೆ ಬಾಳು ಸಾರ್ಥಕ ಎಂಬ ಮಾತು ಇದೆ.
ಈ ಜ್ಯೋತಿಯು ಶಬರಿಮಲೆ ಬೆಟ್ಟದಲ್ಲಿ ಮೂರು ಬಾರಿ ಗೋಚರವಾಗುತ್ತದೆ.
          ಒಟ್ಟಿನಲ್ಲಿ ಸೂರ್ಯ ಮಕರ ರಾಶಿಗೆ ತೆರಳಿ ಜಗದ ಕಾರಿರುಳನ್ನು ಹೋಗಲಾಡಿಸುವಂತೆ ಆಧುನಿಕ ಯುಗದಲ್ಲೂ ಜನರು ಆಧ್ಯಾತ್ಮಿಕ ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಈ ಆಚರಣೆ ಪ್ರೇರಣೆ ನೀಡುತ್ತದೆ.
– ಗ್ರೀಷ್ಮ ಭಂಡಾರಿ

Leave a Reply

Your email address will not be published. Required fields are marked *