September 20, 2024

ಸ್ನೇಹಿತರೆ…. ಕೊರೋನ ಎಂಬುದು ಮನುಷ್ಯನನ್ನು ಬಹಳ ವಿಧದಲ್ಲಿ ಚಿಂತೆ ಮಾಡುವಂತೆ‌ ಮಾಡಿದ ಸಾಂಕ್ರಾಮಿಕ ರೋಗವಾಗಿದೆ. ಬಹುಷಃ ಈ ರೀತಿಯ,  ಪರಿಣಾಮಕಾರಿಯಾಗಿ ಆತ್ಮ ಸ್ಥ್ಯೆರ್ಯವನ್ನು‌ ಕುಗ್ಗಿಸಿದ ರೋಗವಿದ್ದಿರಲಿಕ್ಕಿಲ್ಲ. ಈ ಖಾಯಿಲೆ ಶ್ರೇಷ್ಟ ನೀಚ,  ಶ್ರೀಮಂತ ಬಡವ, ಪರರು ನಮ್ಮವರೆಂಬ ಭೇದವಿಲ್ಲದೆ ಏಕರೀತಿಯಲ್ಲಿ ನಿಷ್ಪಕ್ಷಪಾತವಾಗಿ ನಿಯತ್ತಿನಿಂದ,  ಜನರನ್ನು ಆಕ್ರಮಿಸುತ್ತಿದೆ. ಪ್ರಾಣ ತೆಗೆಯುವಷ್ಟು ಕ್ರೂರಿಯಲ್ಲದಿದ್ದರೂ ಪ್ರಾಣಕ್ಕಾಗಿ ಜಾಗರೂಕತೆ, ಸ್ವಚ್ಛತೆಯಿಂದ ಇರಬೇಕು ಎಂಬುದನ್ನು ಕಲಿಸಿ ಕೊಟ್ಟಿದೆ. ಒತ್ತಡದ ಬದುಕಿನಿಂದ ಹೊರಬನ್ನಿ ಎಂದಿದೆ. ಬಂಧು ಸ್ನೇಹ ಬಾಂಧವ್ಯಗಳ ಅರಿವು ಮೂಡಿಸಿದೆ. ನಿಮ್ಮದೇ ಎಂದು ಅಂದುಕೊಂಡಿದ್ದು ಯಾವುವು ಶಾಶ್ವತವಲ್ಲ  ಎಂಬ ಅರಿವು ಮೂಡಿಸಿದೆ. ಒಂದು ಸಂಧರ್ಭದಲ್ಲಿ ಯಾರಿಗೆ ಯಾರೂ ಇರುವುದಿಲ್ಲ ಎಂದು ತೋರಿಸಿ ಕೊಟ್ಟಿದೆ.

Overview of corona news for students, employees and partners - WUR

ಮಾನಸಿಕವಾಗಿ, ಆರ್ಥಿಕ ಸಮಸ್ಯೆ ಅಥವಾ ಯಾವುದಾದರೊಂದು ಬಗೆಯ ಚಿಂತೆಯನ್ನು ಅನುಭವಿಸುತ್ತಿರುವ ಇಂದಿನ ದಿನಗಳಲ್ಲಿ ಯಾರಾದರೂ ಒಬ್ಬ ವ್ಯಕ್ತಿ ತಾನು ಸಂತೋಷವಾಗಿ ಇದ್ದೇನೆ  ಎಂದು ಹೇಳಿದರೆ ಅವನು ಪುಣ್ಯವಂತನೇ ಸರಿ. ಬನ್ನಿ ಎಲ್ಲರೂ ಒಂದು ನಿರ್ಧಾರ ಮಾಡೋಣ. ಸಾಧ್ಯವಾದಷ್ಟು ನಗೋಣ, ನಗಿಸೋಣ. ಅತಿ ಆಸೆ ಬಿಡೋಣ. ಇದ್ದುದರಲ್ಲಿಯೇ ತೃಪ್ತಿ ಪಟ್ಟು ಸಂತೋಷದಿಂದ ಬದುಕೋಣ. ಸತ್ಸಂಗಗಳಲ್ಲಿ ತೊಡಗೋಣ. ದ್ವೇಷಗಳನ್ನು ತ್ಯಜಿಸೋಣ. ಕಿರಿಕಿರಿ‌ ಅನ್ನಿಸುವ ವಿಷಯಗಳನ್ನು  ಮನಸ್ಸಿನಿಂದ ತೆಗೆದು ಹಾಕೋಣ. ಮೂಕ ಪ್ರಾಣಿಗಳಲ್ಲಿ ಪ್ರೀತಿ ತೋರಿಸೋಣ. ಭಜನೆ, ಧ್ಯಾನ ಮಾಡಿ ಆತ್ಮ ಶಕ್ತಿಯನ್ನು ವೃದ್ದಿಸಿಕೊಳ್ಳೋಣ. ಇಷ್ಟವಾದ ಕೆಲಸಗಳನ್ನು ಮಾಡೋಣ. ನಾನು ಎಂಬ ಅಹಂ ಬಿಡೋಣ.ಸದಾ ಕ್ರಿಯಾಶೀಲರಾಗಿರೋಣ. ಸಕಾರಾತ್ಮಕ ಚಿಂತನೆಗಳನ್ನು ಮಾಡೋಣ, ಋಣಾತ್ಮಕ (Negative) ಆಗಿ ಯೋಚಿಸುವುದನ್ನು ಬಿಡೋಣ. ಸಾಧ್ಯವಾಗುವಷ್ಟು ಹಾಸ್ಯವನ್ನು ಅನುಭವಿಸೋಣ. ಇಷ್ಟವಾಗುವ ವೀಡಿಯೋಗಳನ್ನು ನೋಡೋಣ ಇವು ನಮ್ಮನ್ನು ಬೇಸರದ ಮನಸ್ಸಿನಿಂದ ಹೊರ ತರುತ್ತವೆ.  (ಅಪರಾಧಗಳ, ಕ್ರೂರ,  ವಿಧ್ವಂಸಕ, ಅಶ್ಲೀಲ ಬೇಡ) ಖಾಸಗಿ ಚಾನೆಲ್ ಗಳ ವಾರ್ತೆಗಳನ್ನು ಹೆಚ್ಚು ನೋಡಬೇಡಿ. ಮನಸ್ಸು ದುರ್ಬಲವಾಗುತ್ತದೆ. ಅನುಮಾನ, ಅಭದ್ರತೆ, ಅಸಹಾಯಕತೆಯ ಮನಸ್ಸಿನಿಂದ ಹೊರ ಬನ್ನಿ. ನಾವು ಸಶಕ್ತರಿದ್ದೇವೆ, ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಇದೆ. ನಮಗೆ ಯಾವುದೇ ತೊಂದರೆ ಇಲ್ಲ ಎಂಬ ಸತ್ಯವನ್ನು ಅರಿಯಿರಿ. ಸಾಧ್ಯವಿದ್ದಷ್ಟು ಕಾಲವನ್ನು ಕುಟುಂಬದವರೊಂದಿಗೆ  ಆನಂದದಿಂದ ಕಳೆಯಿರಿ. ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ. ಯಾರೊಂದಿಗೂ ಹತ್ತಿರದ ಸಂಪರ್ಕ ಬೇಡ. ಅಂತರವನ್ನು ಕಾಪಾಡಿಕೊಳ್ಳಿ. ಸುರಕ್ಷಿತ ಮಾಸ್ಕ್ ಧರಿಸಿ. ಮತ್ತೊಬ್ಬರಿಗೂ ಸುರಕ್ಷಿತರಾಗಿ ಇರಲು ತಿಳಿ ಹೇಳಿ.  ಸಾಧಾರಣ ವ್ಯಾಯಾಮಗಳನ್ನು ಮಾಡಿ. ಮನಸ್ಸಿಗೆ ಹಿಡಿಸದ,  ಒತ್ತಡ ತರುವ ಘಟನೆಗಳನ್ನು ಮನಸ್ಸಿಗೆ ತರದೆ, ಸವಿ ನೆನಪುಗಳನ್ನು ಮೆಲುಕು ಹಾಕಿ.

Krishna Lifting Govardhan Story | Hindu Devotional Blog

 

ದಾಸ ಶ್ರೇಷ್ಠರೆನಿಸಿಕೊಂಡ ಮಹಾಶಯರಾದ ಪುರಂದರ ದಾಸರ ಕೀರ್ತನೆಯೊಂದನ್ನು ನೆನಪಿಸಿಕೊಳ್ಳಿ…..         ” ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ……” ಕೆಲವೊಮ್ಮೆ ತೊಂದರೆ ಅನುಭವಿಸಿದರೂ ಧೃತಿಗೆಡಬೇಡಿ. ಬಹುಬೇಗ ಚೇತರಿಸಿಕೊಳ್ಳುತ್ತೀರಿ. ಒಂದು ಸತ್ಯ ಮಾತ್ರ ತಿಳಿದುಕೊಳ್ಳಿ. ನಾವು ಪ್ರಕೃತಿಯಲ್ಲಿ ಒಂದು ಕಣವಷ್ಟೆ  ಭಗವಂತನು ನೀಡಿದ ಜೀವ, ಜೀವನ. ನಾವು ಪಾತ್ರಧಾರಿಗಳು. ಅವನೇ ಸೂತ್ರಧಾರಿ…. ಏನೇ ಆದರೂ ಎಲ್ಲವೂ ಅವನಿಚ್ಛೆಯಂತೆ ನಡೆಯುತ್ತಿದೆ ಎಂದು ಭಾವಿಸಿ. ನಿಮ್ಮಿಷ್ಟದ ದೇವರನ್ನು ನಂಬಿ. ಭಜಿಸಿ, ಪೂಜಿಸಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ.   ಕವಿ, ಸಾಹಿತ್ಯ ಶ್ರೇಷ್ಠರೆನಿಸಿಕೊಂಡ ಮಹನೀಯರಾದ ಕನಕ ದಾಸರ ಗೀತೆಯನ್ನು ನೆನಪಿಸಿಕೊಳ್ಳಿ….     ತಲ್ಲಣಿಸದಿರು ಕಂಡ್ಯ ತಾಳು‌ ಮನವೆ ಎಲ್ಲರನು‌  ಸಲಹುವನು ಇದಕೆ ಸಂಶಯವಿಲ್ಲ  ಸರ್ವೇ ಜನಃ ಸುಖೀನೋಭವಂತು. ಶುಭವಾಗಲಿ.   

   ✒ ರಾಜಶೇಖರ್..‌ ಬೆಂಗಳೂರು.

Leave a Reply

Your email address will not be published. Required fields are marked *