September 20, 2024

ಭಾರತ ದೇಶದ ಪ್ರಾಚೀನ ನಾಗರಿಕತೆಯ ಕಾಲದಲ್ಲಿ ಜಾತಿಪದ್ದತಿ ಇತ್ತು ಎಂಬುದಕ್ಕೆ ಯಾವುದೇ ಕುರುಹುಗಳು ಸಿಗುವುದಿಲ್ಲ. ಹಿಂದೆ ನಾಗರಿಕತೆಯ ಜನ ತಮ್ಮನ್ನು ತಮ್ಮ ಜನ್ಮಸ್ಥಳ  ಅಥವಾ ಮೂಲಸ್ಥಾನದ ಹೆಸರಿನ ಮೂಲಕ ಅಥವಾ ವಂಶವಾಹಿ ಹೆಸರಿನ ಮೂಲಕ ಗುರುತಿಸಿಕೊಳ್ಳುತ್ತಿದ್ದರು. ಇನ್ನು ಕೆಲವರು ತಮಗೆ ಸಿಕ್ಕ ಗೌರವ ಅಥವಾ ಬಿರುದಿನಂತೆ ಗುರುತಿಸಿಕೊಳ್ಳುತ್ತಿದ್ದರು. ರಾಜವಂಶಗಳು ಸೂರ್ಯವಂಶ , ಚಂದ್ರವಂಶ  ಮುಂತಾದ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದರು. ಇಷ್ಟೇ ಅಲ್ಲದೇ ಸಮಾಜದಲ್ಲಿ ಗೌರವ ಹೊಂದಿದ ವೃತ್ತಿಗಳು, ಸ್ಥಾನಮಾನಗಳು ಹೆಸರಿನೊಂದಿಗೆ ಸೇರಿಕೊಳ್ಳುತ್ತಿದ್ದವು. ಭಟರು ಅಥವಾ ಬಂಟರು, ಭಂಡಾರದ ಕಾವಲುಗಾರ ಭಂಡಾರಿ , ಚಿಕಿತ್ಸೆ ನೀಡುವವನು ವೈದ್ಯ ಅಥವಾ ಬೈದ್ಯ, ಪುರೋಹಿತರು ಪೂಜಾರಿ, ಅಸ್ರಣ್ಣ, ವೇದಮೂರ್ತಿ , ಉಪಾದ್ಯಾಯ ಮುಂತಾದ ಹೆಸರುಗಳು. ಪ್ರಬಲ ರಾಜರು ಪಡೆಯುವ ಚಕ್ರವರ್ತಿ, ಬಳ್ಳಾಲ , ಸಾಮ್ರಾಟ್ ಮುಂತಾದ ಬಿರುದುಗಳು. ನಂತರದ ದಿನಗಳಲ್ಲಿ ಸೇನಾ ನಾಯಕರು ನಾಯಕ. ಆಳುವವನು ಅರಸ, ಗುತ್ತು, ಬರ್ಕೆ,  ಹಿಂದಿನ ಪಂಚಾಯತ್ ಅಧಿಕಾರಿಗಳು ಮತ್ತು  ತೆರಿಗೆ ಅಧಿಕಾರಿಗಳು, ಪಟೇಲ , ಶಾನುಭೋಗ ಮುಂತಾದುವುಗಳು ಇಂದು ಮನೆತನಗಳ ಹೆಸರಾಗಿ ಗುರುತಿಸಿಕೊಂಡಿವೆ. 

ಆಧುನಿಕ ಕಾಲದಲ್ಲೂ ಹೆಸರಿನ ಹಿಂದೆ  ಅಥವಾ ಮುಂದೆ ಗೌರವ ನೀಡುವ ಸ್ಥಾನಮಾನದ ಹೆಸರುಗಳಿಂದ ಗುರುತಿಸಿಕೊಳ್ಳುತ್ತಾರೆ.  ಲೆಪ್ಟಿನೆಂಟ್ , ಕರ್ನಲ್ ಲ್ಯಾನ್ಸ್ ನಾಯಕ್ , ಲಾರ್ಡ್, ಮುಂತಾದ ಬಿರುದುಗಳು ಡಾಕ್ಟರೇಟ್ ಗಳು, ಬಯಲುಸೀಮೆಗಳಲ್ಲಿ ಕಂಡುಬರುವ ಕೃಷಿಕರ ಬಿರುದುಗಳು, ಪದ್ಮಭೂಷಣ, ಭಾರತರತ್ನ , ಐ ಎ ಎಸ್ , ಮಹಾಲೇಖಪಾಲ, ಅಡ್ವೋಕೆಟ್ , ನ್ಯಾಯಮೂರ್ತಿ ಇವುಗಳಿಗೂ ಜಾತಿ ಅಥವಾ ವಂಶವಾಹಿಗಳಿಗೆ ಯಾವುದೇ ಸಂಬಂಧವಿರದಿದ್ದರೂ ಹಿಂದೆ ಸೃಷ್ಟಿಯಾದ ಕೆಲವು ಸರ್ ನೇಮ್ ಗಳ ಹುಟ್ಟು ಇಂತಹ ಬಿರುದುಗಳಿಂದಲೇ ಆಗಿದೆ ಎಂಬುದು ಸತ್ಯ ಸಂಗತಿಯಾಗಿದೆ. ಈಗ ಸೃಷ್ಟಿಯಾಗಿರುವ ಗೌರವ ಹೊಂದಿರುವ ಬಿರುದುಗಳು ಮುಂದೆ ಮನೆತನಗಳ ಪರಂಪರೆಯ ಹೆಸರಾಗಿ ವಿಜೃಂಬಿಸಬಹುದು. ಅರ್ಹತೆಗಳು ವಂಶಪಾರಂಪರ್ಯವಾಗಿ ಬೆಳೆದರೆ ಇದು ಅತಿವೇಗವಾಗಿ ಚಾಲ್ತಿಗೆ ಬರುತ್ತದೆ. ಹಿಂದೆ ವೃತ್ತಿಗಳು ಸ್ಥಾನಮಾನಗಳು ಅರ್ಹತೆಗಿಂತ ವಂಶಪಾರಂಪರ್ಯವಾಗಿ ದೊರಕುತ್ತಿದ್ದವು. ತುಳುನಾಡಿನ ಪ್ರಾಚೀನ ಇತಿಹಾಸದ ಪ್ರಕಾರ ಜಾತಿ ಪದ್ದತಿಯ ಉಗಮಕ್ಕಿಂತ ಮೊದಲು ವೃತ್ತಿಯ ಹೆಸರುಗಳನ್ನು ಯಾವುದೇ ಜನಾಂಗದ ಯಾವುದೇ ಅರ್ಹ ವ್ಯಕ್ತಿ ಹೊಂದಬಹುದಾಗಿತ್ತು, ಅಂದರೆ ಯಾವುದೇ ವೃತ್ತಿ ಒಂದು ಜನಾಂಗ , ಕುಟುಂಬಕ್ಕೆ ಸೀಮಿತವಾಗಿರಲಿಲ್ಲ.  ಪ್ರಸ್ತುತ ಚಾಲ್ತಿಯಲ್ಲಿರುವ ಇಂಡಸ್ಟ್ರಿಯಲ್ ಎಸ್ಟೇಟ್, ಡಾಲರ್ಸ್ ಕಾಲೋನಿ, ಲಾಯರ್ಸ್ ಕಾಲೋನಿ, ಡಾಕ್ಟರ್ಸ್ ಕಾಲೋನಿ, ಐಟಿ ಸಿಟಿ , ಭತ್ತದ ಕಣಜ, ಕಾಫಿನಾಡು, ಟೀ ಎಸ್ಟೇಟ್, ಗೋಲ್ಡ್ ಪೀಲ್ಡ್  ಮುಂತಾದ ಹೆಸರುಗಳೇ ಮುಂದೆ ಆಯಾಯ ಊರಿನ ಹೆಸರುಗಳ ಸೃಷ್ಟಿಗೆ ಕಾರಣವಾಗುತ್ತದೆ. ಆಧುನಿಕ ವೃತ್ತಿ ಹೆಸರುಗಳು, ವಸತಿ ಸಮುಚ್ಚಯಗಳ ಹೆಸರುಗಳು ಕೂಡಾ ಮುಂದೆ ಸರ್ ನೇಮ್ಗಳಾಗಿ ಪ್ರಸಿದ್ದಿಯಾಗಬಹುದು.
ವಂಶವಾಹಿ ಅಥವಾ ವಂಶ ಪರಂಪರೆಯ ತಲೆಮಾರುಗಳ ಹೆಸರುಗಳ ಮೂಲಕ ಗುರುತಿಸಿಕೊಳ್ಳುವ ವ್ಯವಸ್ಥೆ ಭಾರತದದಲ್ಲಿ ಅತೀ ಪ್ರಾಚೀನವಾದುದು. ಈ ಪದ್ದತಿ ಇಂದಿಗೂ ಜೀವಂತವಾಗಿದೆ‌. ತಮ್ಮ ಮೂಲಜನಾಂಗ , ವಂಶದ ಪರಂಪರೆ ಇಂದಿನ ತಲೆಮಾರಿನವರೆಗೆ ಅಲಿಖಿತವಾಗಿ ಮುಂದುವರೆಸಿಕೊಂಡು ಬರಲಾಗಿದೆ.ತುಳುವಿನಲ್ಲಿ ಬರಿ, ಸಂಸ್ಕೃತದಲ್ಲಿ ಗೋತ್ರ ಮತ್ತು ಕನ್ನಡದಲ್ಲಿ ಬಳಿ ಎಂಬುದಾಗಿ ಈ ವಂಶವಾಹಿ ಹೆಸರುಗಳನ್ನು ಗುರುತಿಸಲಾಗುತ್ತದೆ. ತುಳುವಿನಲ್ಲಿ ಬರಿ ಎಂಬುದಕ್ಕೆ ಹಲವು ಸಮಾನ ಅರ್ಥಗಳಿದ್ದು, ಮನೆ ಅಥವಾ ಮೂಲಮನೆ ಎಂಬ ಅರ್ಥವಿದೆ. 
ತುಳುನಾಡಿನಲ್ಲಿ ಬರಿಪದ್ದತಿ ಸಾರ್ವತ್ರಿಕ ನಿಯಮವಾಗಿದ್ದು ಮದುವೆ ಇನ್ನಿತರ ಕಾರ್ಯಗಳಿಗೆ ಬರಿ ಕಡ್ಡಾಯವಾಗಿದ್ದ ಕಾರಣ ತಮ್ಮ ವಂಶವಾಹಿ ಹೆಸರು ತಿಳಿಯದ ಅನೇಕ ಕುಟುಂಬಗಳು ಅಥವಾ ತಮ್ಮ ಮೂಲ ಹೆಸರಿನ ಬಗ್ಗೆ  ಕೀಳರಿಮೆ ಇರುವ ಜನ ತಮ್ಮ ಪೂರ್ವಜರ ಶ್ರೇಷ್ಟ ವೃತ್ತಿಯ , ಶ್ರೇಷ್ಟ ಪರಂಪರೆಯ ಹೆಸರುಗಳಿಂದ ಬರಿ/ಗೋತ್ರದ ಹೆಸರುಗಳಿಂದ ಗುರುತಿಸಿಕೊಂಡರು. 
ಪ್ರಾಚೀನ ತುಳುನಾಡಿನಲ್ಲಿ ಒಂದೇ ಬರಿಯ ಜನಾಂಗಗಳು ಬಂಟ ( ಸೈನಿಕ, ಸೇನಾನಿ, ಕಾವಲುಗಾರ) ಬಿಲ್ಲವ ( ಬಿಲ್ಲುಗಾರ) ಬೈದ್ಯ (ನಾಟಿ ವೈದ್ಯ) ನಾಡವ ( ಕೃಷಿಕ ಒಂದಕ್ಕಿಂತ ಹೆಚ್ಚು ಬೆಳೆ ಬೆಳೆಯುವವ) ಒಕ್ಕೆಲ್ಮ ( ಕೃಷಿ ಕಾರ್ಮಿಕ) ಪೂಜಾರಿ ( ಗರಡಿ ಅರ್ಚಕ) ಮಡ್ಡೆಲ ( ಮಡಿವಾಳ) ಮೊಗೆರ (ಮೀನುಗಾರ)  ಕೊಟ್ಟಾರಿ ( ಅಂಗಡಿ ವ್ಯಾಪಾರಿ) ಕುಲಾಲ ( ಕುಂಬಾರ) ಸಪಲ್ಯ ( ವಾದ್ಯಗಾರ) ಕೆಲೆಸಿ ( ಕ್ಷೌರಿಕ) ಮುಂತಾದ ವಿವಿಧ ವೃತ್ತಿಯಲ್ಲಿ ತೊಡಗಿದ್ದರು. ಇದು ಯಾವುದೂ ಕೂಡಾ ಜಾತಿಗಳಾಗಿರಲಿಲ್ಲ.                                                       

ಆಳುಪರ ನಾಲ್ಕು ವಂಶವಾಹಿಗಳು:

ತುಳುನಾಡಿನ ಪ್ರಾಚೀನ ರಾಜಮನೆತನಗಳ ಅಧ್ಯಯನ ಮಾಡುವಾಗ ಇಂದಿನ ಜಾತಿಪದ್ದತಿಯ ಆಧಾರದಲ್ಲಿ ಮೂಲ ಕಂಡುಹಿಡಿಯಲು ಸಾಧ್ಯವಿಲ್ಲ. ಏಕೆಂದರೆ ಆಳುಪರ ಕಾಲದ ಆರಂಭದಲ್ಲಿ ಜಾತಿಪದ್ದತಿ ಇರಲಿಲ್ಲ. ಬರಿ/ಗೋತ್ರದ ಹೆಸರನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿದರೆ ಮಾತ್ರ ನಿಜವಾದ ವಂಶವಾಹಿಯನ್ನು ಪತ್ತೆಹಚ್ಚಬಹುದಾಗಿದೆ. ಅಧ್ಯಯನದ ಪ್ರಕಾರ ಆಳುಪರ ವಂಶ ನಾಲ್ಕು ವಂಶವಾಹಿ ಬರಿಗಳನ್ನು ಹೊಂದಿದೆ. ಆಳುಪರ ಶಾಸನಗಳ ಅಧ್ಯಯನದ ಪ್ರಕಾರ ಆಳುಪರು ಕನ್ನಡ ರಾಜ ವಂಶಗಳಾದ ರಾಷ್ಟ್ರಕೂಟ, ಕದಂಬ, ಚಾಲುಕ್ಯರೊಡನೆ ಮದುವೆ ಸಂಬಂಧ ನಡೆಸಿದ್ದರು ಎಂಬುದು ತಿಳಿದುಬರುತ್ತದೆ. ಯಾವುದೇ ಜಾತಿಪದ್ದತಿಯ ಉಲ್ಲೇಖ ಇಲ್ಲ.

ತುಳುನಾಡಿನ ಪ್ರಾಚೀನ ಬರಿ ವಂಶ ಪರಂಪರೆಗಳು:

ಪ್ರಾಚೀ‌ನ ಭಾರತದಲ್ಲಿ ವಂಶವಾಹಿ ಪರಂಪರೆ, ಗೋತ್ರಗಳು ರೂಢಿಯಲ್ಲಿತ್ತು. ನಂತರದ ದಿನಗಳಲ್ಲಿ ವಿವಿಧ ಕಾರಣಕ್ಕೆ ವಿಭಾಗಗಳಾಗಿ ಜಾತಿಪದ್ದತಿ ಹುಟ್ಟಿಕೊಂಡಿತು. ಒಬ್ಬ ಮಾಡಿದ ತಪ್ಪಿಗೆ ಇಡೀ ಪರಿವಾರಕ್ಕೆ ವೃತ್ತಿ ಬಹಿಷ್ಕಾರ,  ಗಡಿಪಾರು, ವ್ಯವಹಾರ ನಿರ್ಬಂಧ ಮುಂತಾದ ಶಿಕ್ಷೆಗಳು , ಜೀತ ಗುಲಾಮಗಿರಿ ಪದ್ದತಿ, ವರ್ಣ ಪದ್ದತಿ ಜಾತಿಗಳ ಸೃಷ್ಟಿಗೆ ಕಾರಣವಾಯಿತು. ಸ್ವಾತಂತ್ರ್ಯಕ್ಕಾಗಿ ದೇಶಗಳು ಹೇಗೆ ವಿಭಜನೆಯಾಯಿತೋ ಹಾಗೆ ಜಾತಿ ಪದ್ದತಿ ಸ್ವತಂತ್ರ ಬದುಕಿಗಾಗಿ ಉಗಮವಾಯಿತು. ಅಭಿವೃದ್ದಿ ಹೊಂದಿದ ದೇಶಗಳು ಹೇಗೆ ಅಭಿವೃದ್ದಿ ಹೊಂದಿರದ ದೇಶಗಳನ್ನು ಹಿಂಬಾಗಿಲಿನಿಂದ ಆಳುತ್ತವೆಯೋ ಹಾಗೆ ಪ್ರಬಲರು ದುರ್ಬಲರನ್ನು ಆಳಿದರು. ತುಳುನಾಡು ಇಂತಹ ಬೆಳವಣಿಗೆಗೆ ಪೂರಕವಾದ ಸಾಕ್ಷಿ ಒದಗಿಸುತ್ತದೆ. ತುಳುನಾಡಿನ ವಂಶವಾಹಿ ಆಧಾರಿತ ಬರಿಪದ್ದತಿ ಒಂದು ಪ್ರಬಲ ಸಾಕ್ಷಿಯಾಗಿ ನಮ್ಮ ಕಣ್ಣಮುಂದಿದೆ. 
ಗೋತ್ರಪದ್ದತಿ ವೇದಕಾಲದ ಋಷಿಮುನಿಗಳ ಕಾಲ ಅಥವಾ ಇಂಡೋ ಆರ್ಯನ್ನರ ಕಾಲದಲ್ಲಿದ್ದ ಅಥವಾ ಅದಕ್ಕಿಂತಲೂ ಹಿಂದ ಆಚರಣೆಯಲ್ಲಿದ್ದವುಗಳು. ಬಳಿ/ ಬರಿ ಪದ್ದತಿ ಕೂಡಾ ಗೋತ್ರ ಪದ್ದತಿಗೆ ಸಮಾನಾಗಿದೆ. ಎರಡೂ ಪದ್ದತಿಗಳೂ ವಂಶಪರಂಪರೆಯನ್ನೇ ತಿಳಿಸುತ್ತವೆ. ತುಳುವ/ದ್ರಾವಿಡರಲ್ಲಿ ಈ ಪದ್ದತಿ ಅತಿ ಪುರಾತನವಾದುದು. ಮೂಲಸ್ಥಾನ ಪದ್ದತಿ ಇದಕ್ಕೊಂದು ಉದಾಹರಣೆ.                                                       

ತುಳು ಬರಿಗಳು 

ಇಂದಿರಾ ಹೆಗ್ಡೆ (2001) ರಲ್ಲಿ ತಯಾರಿಸಿದ ಬಂಟ ಮತ್ತು ನಾಡವರಲ್ಲಿನ 61 ಬರಿಗಳನ್ನು ಪಟ್ಟಿ ಮಾಡಿದ್ದಾರೆ. ಇದರಲ್ಲಿ 55 ಬರಿಗಳು ಸಾಮಾನ್ಯ ಬರಿಗಳು. ಇವುಗಳಲ್ಲಿ 20 ಬರಿಗಳು ಮೊಗವೀರ ಮತ್ತು ಬಿಲ್ಲವರಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬರಿಗಳಾಗಿವೆ. ಇವುಗಳೆಂದರೆ ಅಮೀನ್, ಬಂಗೇರ, ಚಂದನ್ , ಗುಜರನ್, ಕಾಂಚನ್, ಕರ್ಕೇರ, ಕೋಟ್ಯಾನ್, ಕುಂದರ್, ಮೈಂದನ್, ಮೆಂಡನ್, ನಾಯ್ಕ, ಪಾಂಗಲ್, ಪುತ್ರನ್, ರಾವ್, ಸಾಲ್ಯಾನ್ , ಸಫಳಿಗ, ಶ್ರೀಯಾನ್, ಸುವರ್ಣ, ತಿಂಗಳಾಯ ಮತ್ತು ತೋಳಾರ್. 
ಇತರ ಕಡಿಮೆ ಜನಸಂಖ್ಯೆಯ ತುಳು ಸಮುದಾಯಗಳಲ್ಲೂ ಕೂಡಾ ಸಾಮಾನ್ಯ ಮತ್ತು ಪ್ರಾಚೀನ ಬರಿಗಳನ್ನು ಹೊಂದಿವೆ.                                     
ತುಳು ಬ್ರಾಹ್ಮಣರು ಕೂಡಾ ಬರಿ ಪದ್ದತಿಯನ್ನು ಅಳವಡಿಸಿಕೊಂಡಿದ್ದು, ಇತಿಹಾಸದಲ್ಲಿ ಅನೇಕ ಹೊಸ ಹೊಸ ತುಳು ಬರಿಗಳ ಸೇರ್ಪಡೆಯಾಗಿದೆ. ಹಾಗೆಯೇ ಅನೇಕ ಪ್ರಾಚೀನ ಬರಿಗಳು ಬೌಗೋಳಿಕ ಬದಲಾವಣೆ ಮತ್ತು ಸಮುದಾಯಗಳು ನಶಿಸಿದ ಪರಿಣಾಮ ಕಣ್ಮರೆಯಾಗಿವೆ.                                                               

ಜಾತಿ ಪದ್ದತಿಯ ಪೂರ್ವಕಾಲದ ಬರಿಗಳು

ಬರಿ ಎಂಬ ವಂಶವಾಹಿ ಪರಂಪರೆಯ ಬಗ್ಗೆ ಅಧ್ಯಯನ ನಡೆಸಿದಾಗ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ತುಳುನಾಡಿನ ಎಲ್ಲ ಜಾತಿಗಳಲ್ಲಿ ಕಂಡುಬರುವ 5 ಬರಿಗಳು ಅತಿ ಪ್ರಾಚೀನ ಪರಂಪರೆಯ ಬರಿಗಳು ಎಂದು ಗುರುತಿಸಲಾಗಿದೆ. ಇವುಗಳೆಂದರೆ ಬಂಗೇರ (ಬಂಗ) ಸಾಲಿಯಾ (ಸಾಲಿಯಾನ್) ಪುತ್ರ (ಪುತ್ರನ್) ಕುಂದ್ರ ( ಕುಂದರನ್) ಗುಜರ್ (ಗುಜರನ್) ಮತ್ತು ಸುವರ್ಣ . ಇನ್ನೂ ಅನೇಕ ಬರಿಗಳು ಎಲ್ಲ ತುಳುನಾಡಿನ ಜಾತಿಗಳಲ್ಲಿ ಕಂಡುಬರುತ್ತದೆ. ಯಾವುದೇ ಬರಿ ಒಂದು ನಿರ್ದಿಷ್ಟ ಜಾತಿಗೆ ಸೀಮಿತವಾಗಿಲ್ಲ ಎಂಬುದು ಗಮನಾರ್ಹವಾಗಿದೆ. 
ಪ್ರಮುಖ 5 ಬರಿಗಳ ಬಗ್ಗೆ ತಿಳಿಯೋಣ                                                                                               
 

1) ಬಂಗೇರ, ಬಂಗ:

ಬಂಗೇರರು ಬೆಂಗರೆ ಎಂಬ ಪ್ರದೇಶದಲ್ಲಿ ಮೊತ್ತಮೊದಲು ತುಳುನಾಡಿನ ಕರಾವಳಿಯಲ್ಲಿ ನೆಲೆಯೂರಿದ ಜನಾಂಗ ಎಂಬ ಅಬಿಪ್ರಾಯವಿದೆ. ಬೆಂಗರೆಯಲ್ಲಿ ನೆಲೆಯೂರಿದವರಲ್ಲೆರೂ ಬಂಗೇರರಾದರು ಎಂಬುದು ಇದರ ಅರ್ಥವಲ್ಲ. ಬಂಗರು ನೆಲೆಯೂರಿದ ಪ್ರದೇಶ ಬೆಂಗರೆ ಎಂಬ ಹೆಸರು ಬರಲು ಕಾರಣವಾಯಿತು. ನಂತರದ ದಿನಗಳಲ್ಲಿ ತುಳುನಾಡಿನಲ್ಲಿ ಗೌರವ ಹೊಂದಿರುವ ಹೆಸರಾಂತ ಬಂಗೇರ ವಂಶವಾಹಿಯ ಜೈನ/ಬಂಟ ಬಂಗರು ಒಂದು ಪ್ರಾಂತ್ಯದ ಅರಸರಾಗಿದ್ದರು. ಬಂಗರಸರು ದಕ್ಷಿಣಕನ್ನಡದ ಬಂಗವಾಡಿ ಅಥವಾ ಬಂಗಾಡಿ ಮತ್ತು ಮಂಗಳೂರಿನ ನಂದಾವರ ಪ್ರಾಂತ್ಯದ ಸಾಮಂತರಾಗಿ ಬಲ್ಲಾಳರಾಗಿ ಸಾವಿರಾರು ವರ್ಷಗಳ ಕಾಲ ಆಳಿದ್ದರು. ಇವರು ಅಳಿಯಕಟ್ಟು ಸಂಪ್ರದಾಯ ಹೊಂದಿದ್ದ ಕಾರಣ ಮಿಥಲ ದೇವಿ ಎಂಬ ರಾಣಿ ಕೂಡ ಈ ಪ್ರಾಂತ್ಯದ ರಾಣಿಯಾಗಿ ಆಳ್ವಿಕೆ ಮಾಡಿದ್ದಳು.

ಬಂಗ ಬುಡಕಟ್ಟು ಜನಾಂಗ

ಬಂಗ ಮತ್ತು ಬಂಗೇರ ಒಂದು ಪ್ರಾಚೀನ ಬರಿಯೆಂದು ಪರಿಗಣಿಸಲಾಗಿದೆ. ಬಂಗ ಬುಡಕಟ್ಟು ಜನಾಂಗಗಳು ಇಂದಿಗೂ ಜೀವಂತವಾಗಿವೆ. ನೈಜೀರಿಯಾ, ಭಾರತದ ಗಂಗಾನದಿಯ ಮುಖಜ ಭೂಮಿ ಬಂಗಾಳ ಬಂಗ ಜನಾಂಗ ಇಂದಿಗೂ ಕಂಡುಬರುತ್ತವೆ. ಬಂಗಾಳ ಎಂಬ ಪದ ಬಂಗರು ನೆಲೆನಿಂತ ಪ್ರದೇಶ ಎಂಬ ಅರ್ಥ ಕೊಡುತ್ತದೆ. ಬಂಗ ಎಂಬ ನೃತ್ಯ ಪ್ರಕಾರ ಫಿಲಿಪೈನ್ಸ್ ನ ಕಳಿಂಗ್ಗ  ಪ್ರದೇಶದಲ್ಲಿ ಇಂದಿಗೂ ಪ್ರಸಿದ್ದಿ ಪಡೆದಿದೆ. ಫಿಲಿಪೈನ್ಸ್ ನಲ್ಲಿ ಬಂಗರೆಂದರೆ ಮಣ್ಣಿನ ಮಡಿಕೆ ಎಂಬ ಅರ್ಥವಿದೆ. ಮೂಲ ಬಂಗರ ಮುಖ್ಯ ವೃತ್ತಿ ಕುಂಬಾರಿಕೆ ಆಗಿರಲೂ ಬಹುದು. ಈ ಕಾರಣಕ್ಕೆ ಆವೆ ಮಣ್ಣು ಇರುವ ನದಿಮುಖಜಭೂಮಿಗಳಲ್ಲಿ ನೆಲೆನಿಲ್ಲುತ್ತಿದ್ದರು. ಫಿಲಿಪೈನ್ಸ್ ನಲ್ಲಿ ಬಂಗ ಮತ್ತು ಕಳಿಂಗ್ಗ ಇವೆರಡರ ಸಂಬಂಧ ಮತ್ತು ಭಾರತದಲ್ಲಿರುವ ಬಂಗಾಳ ಮತ್ತು ಕಳಿಂಗ ತೀರಾ ಒಂದಕ್ಕೊಂದು ಸಂಬಂಧ ಹೊಂದಿರುವುದು ಕಾಕತಾಳಿವಾಗಿದ್ದು ಗಮನಾರ್ಹವಾಗಿದೆ. 
ಇನ್ನು ಕೆಲವು ಮೂಲಗಳ ಪ್ರಕಾರ ಬಂಗ ಪದ ಸೂರ್ಯ ದೇವನ ಹೆಸರಾದ ಬಾಂಗ್ ನಿಂದ ಬಂದಿದೆ. ಈ ಬಾಂಗ್ ದೇವರನ್ನು ಆಸ್ಟ್ರೋ ಏಷ್ಯನ್ ಮೂಲದ ಭಾರತೀಯ ಜನಾಂಗ ಮುಂಡನ್ನ ರು ಆರಾಧಿಸುತ್ತಿದ್ದರು. ತುಳುನಾಡಿನ ಪ್ರಾಚೀನ ಮೂಲ ಜನಾಂಗೀಯರು ಮುಂಡರಾಗಿರುವುದು ಕೂಡಾ ಗಮನಾರ್ಹವಾಗಿದೆ. ತುಳುನಾಡಿನ ಬಂಗರಿಗೂ ಗಂಗಾನದಿ ಮುಖಜ ಭೂಮಿ ಬಂಗಾಳದ ಬಂಗರಿಗೂ ಸಂಬಂಧವಿರಬಹುದು . ಅಲ್ಲಿಂದ ವಲಸೆ ಬಂದವರಾಗಿರಬಹುದು ಅಥವಾ ಆಪ್ರಿಕಾದಿಂದ ವಲಸೆ ಬಂದ ಜನಾಂಗಳಲ್ಲಿ ಒಬ್ಬರಾಗಿರಬಹುದು. ನೈಜೀರಿಯಾ, ಪಿಲಿಪೈನ್ಸ್ಗಳಲ್ಲಿ ಮತ್ತು ಭಾರತದಲ್ಲಿ ಕಂಡುಬರುವ ಬಂಗ ಬುಡಕಟ್ಟು ಜನಾಂಗಗಳಲ್ಲಿ ಸಾಮ್ಯತೆ ಇರುವುದು ಬಂಗರು ಪ್ರಪಂಚದ ಅಲ್ಲಲ್ಲಿ ತಮ್ಮ ಅಸ್ತಿತ್ವ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಆದರೆ ಆಪ್ರಿಕಾದ ದ್ರಾವಿಡರು/ತಮಿಳರು ಇಲ್ಲಿ ನೆಲೆಸುವ ಮುಂಚೆಯೇ ಬಂಗರು ಭಾರತದೆಲ್ಲೆಡೆ ಹರಡಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿಯಿದೆ. ಪಂಜಾಬ್ ನಲ್ಲಿ ಬಂಗ ಎಂಬ ಪಟ್ಟಣ ಈಗಲೂ ಇದೆ. ಮಹಾರಾಷ್ಟ್ರದಲ್ಲಿ ಬಂಗಾಡ್/ ಬಂಗುರ್  ಎಂಬ ಗೋತ್ರ ಈಗಲೂ ಚಾಲ್ತಿಯಲ್ಲಿದೆ. ಹಿಂದಿನ ತೆಲುಗು ಹೆಸರುಗಳಲ್ಲಿ ಬಂಗ, ಬಂಗಾರು ಸಾಮಾನ್ಯವಾಗಿತ್ತು .(ಬಂಗಾರಮ್ಮ, ಬಂಗಸ್ವಾಮಿ ಇತ್ಯಾದಿ) 
ಬೆಂಗಳೂರು :ಬೆಂದಕಾಳೂರು ಎಂಬ ಹೆಸರಿನ ಮೂಲಕ ಬೆಂಗಳೂರು ಹುಟ್ಟಿತು ಎಂಬುದು ಇತಿಹಾಸ. ಅದೇನೆ ಇದ್ದರೂ ಬೆಂಗಳೂರು ಎಂಬ ಹೆಸರಿಗೂ ಬೆಂಗಾಲ್ ಗೂ ಸಾಮ್ಯತೆಯಿದೆ. ಬೆಂಗ+ಆಲ್+ಊರು =ಬೆಂಗಲೂರು ಅಥವಾ ಬೆಂಗಲ್+ಊರು =ಬೆಂಗಲೂರು ಬಂಗರು ನೆಲೆಯೂರಿದ ಪ್ರದೇಶವಾಗಿದೆ. ಬಂಗಾಳಿಯಲ್ಲಿ ಬಂಗಾಲ್ ಪದದ ಅರ್ಥ  “ಬಂಗ” ಎಂದರೆ ನೀರಿನ ಮೂಲವಿರುವ ಸ್ಥಳ “ಆಲ್” ಎಂದರೆ ನದಿಯಂತಹ ನೀರಿನ ಮೂಲ ಎಂದರ್ಥ. ಅಥವಾ ‘ನೀರಿನ ಮೂಲ ಇರುವಲ್ಲಿ ನೆಲೆ ನಿಲ್ಲುವ’ ಎಂಬ ಅರ್ಥ ನೀಡುತ್ತದೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ ಪ್ರಾಚೀನ ಕಾಲದಲ್ಲಿ  ಬೆಂಗಳೂರಿನ ಪೂರ್ವಭಾಗದಲ್ಲಿ ಕಾವೇರಿ ಹರಿಯುತಿತ್ತು. ಈಗ ಅದು ಬತ್ತಿ ಹೋಗಿದೆ ಅಥವಾ ದಿಕ್ಕು ಬದಲಾಯಿಸಿದೆ  ಎನ್ನುವ ಅಭಿಪ್ರಾಯವಿದೆ.                                                                                                      
ಬ್ಯಾಂಗ್ಕಾಕ್:
ಪೂರ್ವ ದೇಶವಾದ ಥೈಲ್ಯಾಂಡ್ ನಲ್ಲಿ ಕೂಡ ಬಂಗ ಜನಾಂಗ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಪುರಾವೆಗಳು ಇವೆ. ಥಾಯ್ ಭಾಷೆಯಲ್ಲಿ ಥಾಯ್ ಎಂದರೆ ಸರೋವರದ ದಡದಲ್ಲಿರುವ ಹಳ್ಳಿ ಬಂಗ ಎಂದರೆ ನದಿಯ ತಟದಲ್ಲಿರುವ ಹಳ್ಳಿ ಎಂದರ್ಥ ಬ್ಯಾಂಗ್ಕಾಕ್ , ಬಾಂಗ್ನ , ಬಾಂಗ್ಬೋ, ಬಾಂಗ್ಸರೇ, ಬ್ಯಾಂಗ್ ರಚನ್ , ಬಾಂಗ್ಸ್ಯಾಕ್ , ಬಂಗ್ತಾವ್, ಬಾಂಗ್ಬಾವ್, ಬಂಗ್ಪತ್, ,ಬಾಂಗ್ಚ್ಯಾನ್ ಮುಂತಾದ ಹೆಸರುಗಳುಳ್ಳ ಪ್ರದೇಶಗಳು ಥೈಲ್ಯಾಂಡ್ ನಲ್ಲಿರುವುದು ಬಂಗಾಲ ಕ್ಕೂ ಬ್ಯಾಂಗ್ಕಾಕ್ ಗು ಸಂಬಂಧ ಕಲ್ಪಿಸುತ್ತದೆ. 
ಬಂಗರ ಹೆಸರಿನ ಊರುಗಳು:
ತುಳುನಾಡಿನ ಬಂಗ್ರ ಕೂಳೂರು , ಬಂಗ್ರ ಮಂಜೇಶ್ವರ, ಬಂಗೇರಪದವು ಕೂಡ ಬಂಗರು ನೆಲೆಸಿದ್ದ ಅಥವಾ ಆಳಲ್ಪಟ್ಟ ಊರುಗಳು. ಹೀಗೆ ಭಾರತಾದ್ಯಂತ ೭೧೭ ಊರುಗಳ್ಳನ್ನು ಪಟ್ಟಿ ಮಾಡಬಹುದಾಗಿದೆ.
ಬಂಗೇರ ಬರಿ ಅತಿ ಪ್ರಾಚೀನ ತುಳುನಾಡಿನ ಬರಿಯಾಗಿದ್ದು ಎಲ್ಲ ತುಳುವ ಜಾತಿಗಳು, ಕೊರಗ ಮತ್ತು ಮುಂಡಾಲ ಜನಾಂಗದಲ್ಲೂ ಈ ಬರಿ ಕಂಡು ಬರುತ್ತದೆ. ಈ ಬರಿಯ ಜನರು ಸೌಮ್ಯ ಸ್ವಭಾವದವರಾಗಿದ್ದು ಸ್ವಲ್ಪ ಸಣ್ಣಗಿನ ಕಣ್ಣು ಹೊಂದಿರುತ್ತಾರೆ. ಪಶ್ಚಿಮ ದೇಶದ ಜನರಿಗಿಂತ ಗಿಡ್ಡ ದೇಹವನ್ನು ಹೊಂದಿರುತ್ತಾರೆ. ಕುಂಬಾರಿಕೆ, ಮೀನುಗಾರಿಕೆ ಇವರ ಮೂಲ ವೃತ್ತಿಯಾಗಿತ್ತು.
(ಮುಂದುವರೆಯುವುದು )
✍️ ಪ್ರಶಾಂತ್ ಭಂಡಾರಿ ಕಾರ್ಕಳ        
ಮಾಹಿತಿ ಕೃಪೆ : ರವೀಂದ್ರ ಶೆಟ್ಟಿ ಮುಂಡ್ಕೂರು (ತುಳು ರಿಸರ್ಚ್)

Leave a Reply

Your email address will not be published. Required fields are marked *